ಲಂಡನ್ನ ವೆಂಬ್ಲೆ ಸ್ಟೇಡಿಯಂನಲ್ಲಿ 60 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನನ್ನ ಭಾರತದಲ್ಲಿ ಇಮ್ರಾನ್ ಖಾನ್ನಂತಹ ವ್ಯಕ್ತಿಗಳಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಜಗತ್ತಿನಾದ್ಯಂತ ಅವರ ಭಾಷಣ ಕೇಳುತ್ತಿದ್ದ ಕೋಟ್ಯಾಂತರ ಜನರು ಯಾರಪ್ಪ ಈ ಇಮ್ರಾನ್ ಖಾನ್ ಎಂದು ಒಂದು ಕ್ಷಣ ಯೋಚಿಸಿದ್ದರು.
ದೇಶದ ಪ್ರಧಾನಿಯ ಗಮನ ಸೆಳೆದ ಸಾಮಾನ್ಯರ ನಡುವೆ ಇರುವ ಅದ್ಭುತ ಪ್ರತಿಭೆ ಇಮ್ರಾನ್ ಖಾನ್. 34 ವರ್ಷದ ಇವರು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಗಣಿತ ಶಿಕ್ಷಕ. ಅಷ್ಟೇ ಆಗಿದ್ದರೆ ಅವರ ಹೆಸರು ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನಿಯ ಭಾಷಣದಲ್ಲಿ ಉಲ್ಲೇಖವಾಗುತ್ತಿರಲಿಲ್ಲ. ತಂತ್ರಜ್ಞಾನವನ್ನು ಸ್ವಯಂ ಆಗಿ ಕಲಿತು ಜನರನ್ನು ನಿಬ್ಬೆರಗಾಗಿಸಿದ ಪ್ರತಿಭೆ ಇವರು ಅದಕ್ಕಾಗಿ ಜನರು ಇಂದು ಅವರನ್ನು ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ.
ಇಮ್ರಾನ್ ಒರ್ವ ಸ್ವಯಂ ಕಲಿಕಾ ವೆಬ್ ಡೆವಲಪರ್, ಗೂಗಲ್ ಮತ್ತು ಸಹೋದರನ ಪುಸ್ತಕ ಓದಿ ಪ್ರೋಗ್ರಾಮಿಂಗ್ ಕಲಿತವರು. ಇದರಿಂದ ಪಡೆದ ಜ್ಞಾನದಿಂದ ಅವರು 100ಕ್ಕೂ ಅಧಿಕ ವೆಬ್ಸೈಟ್ಗಳನ್ನು ರಚಿಸಿದ್ದಾರೆ. ಇದರಲ್ಲಿ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ gktalks.com ಎಂಬ ವೆಬ್ಸೈಟ್ ಕೂಡ ಸೇರಿದೆ.
ಸ್ವಯಂ ಆಗಿ ಕಲಿತು ವೆಬ್ಸೈಟ್ ರಚಿಸುವ ಇವರ ಈ ಸಾಧನೆಯನ್ನು ಗಮನಿಸಿದ ಅಲ್ವರ್ನ ಕಲೆಕ್ಟರ್ ಅಶುತೋಶ್ ಎ.ಟಿ ಪಡ್ನೇಕರ್, ಇವರಿಗೆ ಅಪ್ಲಿಕೇಶನ್ ತಯಾರಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದರು. ಆದರೆ ಇಮ್ರಾನ್ಗೆ ಆಪ್ ಎಂದರೇನು ಎಂಬುದೇ ತಿಳಿದಿರಲಿಲ್ಲ, ಆಗ ಅಶುತೋಷ್ ಅವರೇ ತಮ್ಮ ಸ್ಮಾರ್ಟ್ಫೋನ್ ಮೂಲಕ ಆ್ಯಪ್ಗಳನ್ನು ತೋರಿಸಿ ವಿವರಿಸಿದರು.
ಬಳಿಕ 2012ರಲ್ಲಿ 9ನೇ ತರಗತಿಯ ಮಕ್ಕಳಿಗೆ ಆ್ಯಪ್ ತಯಾರಿಸುವ ಎನ್ಸಿಇಆರ್ಟಿ ಸೇರಿ ಆಪ್ ಜಗತ್ತಿಗೆ ಎಂಟ್ರಿಕೊಟ್ಟ ಅವರು ಅಲ್ಲಿಂದ ಹಿಂದಿರುಗಿ ನೋಡಲೇ ಇಲ್ಲ. ಕಳೆದ 3 ವರ್ಷದಲ್ಲಿ 50ಕ್ಕೂ ಅಧಿಕ ಎಜುಕೇಶನಲ್ ಅಪ್ಲಿಕೇಶನ್ಗಳನ್ನು ಅವರು ಸೃಷ್ಟಿಸಿದ್ದಾರೆ. ಅದಕ್ಕೂ ಮಿಗಿಲಾಗಿ ಅವರು ತಮ್ಮ ಆ್ಯಪ್ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಾರೆ.
ಜನರಲ್ ಸೈನ್ಸ್ ಎಂಬ ಇವರ ಆ್ಯಪ್ ಇದುವರೆಗೆ 50 ಸಾವಿರ ಡೌನ್ಲೋಡ್ಗಳನ್ನು ಕಂಡುಕೊಂಡಿದೆ. ಹಿಂದಿಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಇತಿಹಾಸ, ಸಾಮಾನ್ಯ ಜ್ಞಾನ, ಭೌತಶಾಸ್ತ್ರ, ರಸಯಾಣಶಾಸ್ತ್ರ, ಇಂಗ್ಲೀಷ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಅವರು ಆ್ಯಪ್ ತಯಾರಿಸಿದ್ದಾರೆ.
ಇಂತಹ ಅದ್ಭುತ ಮನುಷ್ಯನನ್ನು ನಮಗೆ ಪರಿಚಯಿಸಿ, ಆತನ ಸಾಧನೆಯನ್ನು ತಿಳಿದುಕೊಳ್ಳುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.