ನವದೆಹಲಿ: ‘ಜಾತ್ಯತೀತತೆ’ ಮತ್ತು ‘ಸಮಾಜವಾದ’ ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆಯ ಭಾಗವಾಗಿರಲಿಲ್ಲ, ನಂತರ ಇದನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಪಶ್ಚಿಮಬಂಗಾಳದಲ್ಲಿ ತುರ್ತು ಪರಿಸ್ಥಿತಿಯ 50 ನೇ ವರ್ಷವನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸಬಾಳೆ ಅವರು, ಕಾಂಗ್ರೆಸ್ ಪಕ್ಷವು ‘ಕ್ರೂರ ಕೃತ್ಯ’ಕ್ಕಾಗಿ ರಾಷ್ಟ್ರದ ಕ್ಷಮೆಯಾಚಿಸಬೇಕೆಂದು ಕೇಳಿಕೊಂಡರು.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಆ ಕಾಲದ ಕಾಂಗ್ರೆಸ್ ಸರ್ಕಾರವು ಜನರ ವಿರುದ್ಧ ಹಲವಾರು ಅನ್ಯಾಯಗಳನ್ನು ಮಾಡಿದೆ, 250 ಪತ್ರಕರ್ತರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಜೈಲಿಗೆ ಕಳುಹಿಸಲಾಗಿದೆ. ಆ ಕಾಲದ ಸರ್ಕಾರವು 60 ಲಕ್ಷಕ್ಕೂ ಹೆಚ್ಚು ಜನರ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ರೀತಿಯಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.
“ನ್ಯಾಯಾಂಗ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಲಾಯಿತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಎರಡು ಪದಗಳು – ಅಂದರೆ, ಜಾತ್ಯತೀತತೆ ಮತ್ತು ಸಮಾಜವಾದ – ಸೇರಿಸಲ್ಪಟ್ಟವು. ಈ ಎರಡು ಪದಗಳು ಮೊದಲು ಪೀಠಿಕೆಯಲ್ಲಿ ಇರಲಿಲ್ಲ. ಈ ಪೀಠಿಕೆ ರಾಷ್ಟ್ರಕ್ಕೆ ಶಾಶ್ವತವಾಗಿದೆ, ಆದರೆ ಸಿದ್ಧಾಂತದ ವಿಷಯದಲ್ಲಿ ಸಮಾಜವಾದದ ದೃಷ್ಟಿಕೋನಗಳು ಮತ್ತು ಮೌಲ್ಯಗಳು ಭಾರತಕ್ಕೆ ಶಾಶ್ವತವೇ?” ಎಂದು ಅವರು ಕೇಳಿದರು.
‘ಜಾತ್ಯತೀತತೆ’ ಎಂಬ ಪದವು ಮೂಲತಃ ಭಾರತೀಯ ಸಂವಿಧಾನದಲ್ಲಿ ಇರಲಿಲ್ಲ ಎಂದು ಅವರು ಒತ್ತಿ ಹೇಳಿದರು. “ಹೌದು, ಜಾತ್ಯತೀತತೆಯ ಕಲ್ಪನೆಗಳು ಅಸ್ತಿತ್ವದಲ್ಲಿರಬಹುದು, ಅವು ಆಡಳಿತ ಮತ್ತು ರಾಜ್ಯ ನೀತಿಯ ಭಾಗವಾಗಿರಬಹುದು – ಅದು ಬೇರೆ ವಿಷಯ. ಆದರೆ ಈ ಎರಡು ಪದಗಳು ಪೀಠಿಕೆಯಲ್ಲಿ ಉಳಿಯಬೇಕೇ? ಇದು ಪರಿಶೀಲನೆಗೆ ಅರ್ಹವಾದ ವಿಷಯ” ಎಂದು ಅವರು ಹೇಳಿದರು.
ಪ್ರಸ್ತುತ ಸಂವಿಧಾನದ ಬಗ್ಗೆ ಚರ್ಚಿಸುವಾಗ, ಅದು ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಮಾತ್ರವಲ್ಲ, ನಂತರದ ಸೇರ್ಪಡೆಗಳನ್ನು ಚರ್ಚಿಸುವ ಅಗತ್ಯವಿದೆ ಎಂದರು.
“ನಮ್ಮ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ಕಟ್ಟಡದಲ್ಲಿ ನಿಂತು ನಾನು ಹೇಳುತ್ತಿರುವುದೇನೆಂದರೆ – ಈ ಪದಗಳನ್ನು ಅವರು ಸೇರಿಸಿಲ್ಲ ಎಂದು ನನಗೆ ತಿಳಿದಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾಗರಿಕರ ಹಕ್ಕುಗಳನ್ನು ಅಮಾನತುಗೊಳಿಸಿದಾಗ, ಸಂಸತ್ತು ನಿಷ್ಪರಿಣಾಮಕಾರಿಯಾಗಿದ್ದಾಗ, ನ್ಯಾಯಾಂಗವು ದುರ್ಬಲಗೊಂಡಾಗ ಈ ಪದಗಳನ್ನು ಸೇರಿಸಲಾಯಿತು” ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಸರನ್ನು ಹೇಳದೆ ಅವರನ್ನು ಅಪಹಾಸ್ಯ ಮಾಡಿದ ಹೊಸಬಾಳೆ, ಸಂವಿಧಾನವನ್ನು ಮುರಿದವರು ಅವರ ಪೂರ್ವಜರು, ಆದರೆ ಈಗ ಅವರು ಅದೇ ಸಂವಿಧಾನದ ಪ್ರತಿಗಳನ್ನು ಕೈಯಲ್ಲಿ ಹಿಡಿದು ಸಂಸತ್ತಿನಲ್ಲಿ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.