ನವದೆಹಲಿ: ಪಾಕಿಸ್ಥಾನದೊಂದಿಗೆ ಶಾಂತಿ ಸ್ಥಾಪಿಸುವ ಭಾರತದ ಪ್ರತಿಯೊಂದು ಪ್ರಯತ್ನ ಕೊನೆಗೆ ಹಗೆತನ ಮತ್ತು ದ್ರೋಹದಲ್ಲೇ ಕೊನೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಇಸ್ಲಾಮಾಬಾದ್ನಲ್ಲಿನ ನಾಯಕತ್ವಕ್ಕೆ ಬುದ್ಧಿವಂತಿಕೆಯ ಅಗತ್ಯವಿದೆ ಎಂದಿದ್ದಾರೆ.
ಅಮೆರಿಕ ಮೂಲದ ಜನಪ್ರಿಯ ಪಾಡ್ಕಾಸ್ಟರ್ ಮತ್ತು ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್ಮನ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಮೋದಿ, ಉಭಯ ದೇಶಗಳು ಹೊಸ ಪುಟಗಳನ್ನು ತಿರುಗಿಸಬಹುದು ಎಂಬ ಆಶಯದೊಂದಿಗೆ 2014 ರಲ್ಲಿ ನನ್ನ ಪ್ರಮಾಣವಚನ ಸಮಾರಂಭಕ್ಕೆ ಪಾಕಿಸ್ಥಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದೆ ಎಂದು ಮೋದಿ ನೆನಪಿಸಿಕೊಂಡರು.
ಭಯೋತ್ಪಾದನೆಯನ್ನು ಬೆಳೆಸುವಲ್ಲಿ ಪಾಕಿಸ್ಥಾನದ ದೀರ್ಘಕಾಲದ ಪಾತ್ರದ ಬಗ್ಗೆ ವಿವರಿಸಿದ ಪ್ರಧಾನಿ, ಭಯೋತ್ಪಾದನೆಯ ಬೇರುಗಳು ಎಲ್ಲಿವೆ ಎಂಬುದರ ಬಗ್ಗೆ ಜಗತ್ತಿಗೆ ಯಾವುದೇ ಸಂದೇಹವಿಲ್ಲ. ಪಾಕಿಸ್ಥಾನವು ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ, ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಪಾರ ನೋವನ್ನುಂಟುಮಾಡುತ್ತಿದೆ ಎಂದು ಒತ್ತಿ ಒತ್ತಿ ಹೇಳಿದರು.
ಭಾರತ ತಟಸ್ಥವಾಗಿಲ್ಲ ಆದರೆ ಶಾಂತಿಗೆ ದೃಢವಾಗಿ ಬದ್ಧವಾಗಿದೆ. ಭಾರತವು ಗೌತಮ ಬುದ್ಧ ಮತ್ತು ಮಹಾತ್ಮ ಗಾಂಧಿಯವರ ಭೂಮಿಯಾಗಿರುವುದರಿಂದ ಅದು ಶಾಂತಿಯ ಬಗ್ಗೆ ಮಾತನಾಡಿದಾಗಲೆಲ್ಲಾ ಜಗತ್ತು ಆಲಿಸುತ್ತದೆ ಎಂದರು.
ಭಾರತೀಯರು ಸಾಮರಸ್ಯವನ್ನು ಪ್ರತಿಪಾದಿಸುತ್ತಾರೆ ಮತ್ತು ಶಾಂತಿಗಾಗಿ ನಿಲ್ಲುತ್ತಾರೆ ಎಂದರು. ರಷ್ಯಾ-ಉಕ್ರೇನ್ ಸಂಘರ್ಷದ ಕುರಿತ ಪ್ರಶ್ನೆಗೆ ಉತ್ತರಿಸಿದ ಮೋದಿ, ಎರಡೂ ರಾಷ್ಟ್ರಗಳು ಮಾತುಕತೆಯ ಮೇಜಿಗೆ ಬಂದಾಗ ಮಾತ್ರ ಸಂಘರ್ಷಕ್ಕೆ ಪರಿಹಾರ ಬರುತ್ತದೆ ಎಂದು ಒತ್ತಿ ಹೇಳಿದರು.
ಉಕ್ರೇನ್ ತಮ್ಮ ಮಿತ್ರರಾಷ್ಟ್ರಗಳೊಂದಿಗೆ ಲೆಕ್ಕವಿಲ್ಲದಷ್ಟು ಚರ್ಚೆಗಳನ್ನು ನಡೆಸಬಹುದು ಆದರೆ ಎರಡೂ ಪಕ್ಷಗಳನ್ನು ಚರ್ಚೆಯಲ್ಲಿ ಸೇರಿಸದ ಹೊರತು ಅದು ಯಾವುದೇ ಫಲ ನೀಡುವುದಿಲ್ಲ ಎಂದು ಅವರು ಹೇಳಿದರು. ಪ್ರಸ್ತುತ ಪರಿಸ್ಥಿತಿಯು ರಷ್ಯಾ ಮತ್ತು ಉಕ್ರೇನ್ ನಡುವೆ ಅರ್ಥಪೂರ್ಣ ಮತ್ತು ಉತ್ಪಾದಕ ಮಾತುಕತೆಗಳಿಗೆ ಅವಕಾಶವನ್ನು ಒದಗಿಸುತ್ತದೆ ಎಂದರು.
ಭಾರತ-ಚೀನಾ ಸಂಬಂಧಗಳ ಕುರಿತು ಮೋದಿ ಅವರು ಎರಡೂ ರಾಷ್ಟ್ರಗಳು ಪ್ರಾಚೀನ ಸಂಸ್ಕೃತಿಗಳು ಮತ್ತು ನಾಗರಿಕತೆಗಳನ್ನು ಹೊಂದಿವೆ ಮತ್ತು ಎರಡೂ ದೇಶಗಳ ನಡುವಿನ ಸಂಬಂಧವು ಹೊಸದಲ್ಲ ಎಂದು ಹೇಳಿದರು. ಒಟ್ಟಾಗಿ, ಭಾರತ ಮತ್ತು ಚೀನಾ ಒಂದು ರೀತಿಯಲ್ಲಿ ಜಾಗತಿಕ ಒಳಿತಿಗೆ ಕೊಡುಗೆ ನೀಡಿವೆ ಎಂದು ಅವರು ಗಮನಸೆಳೆದರು.
ಹಿಂದಿನ ಶತಮಾನಗಳಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆದ ನಿಜವಾದ ಇತಿಹಾಸವಿಲ್ಲ. ಭವಿಷ್ಯದಲ್ಲಿ ಭಾರತ ಮತ್ತು ಚೀನಾ ನಡುವಿನ ಬಲವಾದ ಸಂಬಂಧಗಳು ಮುಂದುವರಿಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ನೆರೆಯ ರಾಷ್ಟ್ರಗಳ ನಡುವೆ ವ್ಯತ್ಯಾಸಗಳಿವೆ ಮತ್ತು ಸಾಂದರ್ಭಿಕ ಭಿನ್ನಾಭಿಪ್ರಾಯಗಳು ಸಂಭವಿಸುವುದು ಖಚಿತ ಎಂದು ಪ್ರಧಾನಿ ಮೋದಿ ಗಮನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.