ಮಂಗಳೂರು: ನಾರಿಶಕ್ತಿ ಇಲ್ಲದೆ ರಾಷ್ಟ್ರದ ಉನ್ನತಿ ಅಸಂಭವ. ಮಹಿಳಾ ಸಬಲೀಕರಣವೆಂದರೆ ಮಹಿಳಾ ನೇತೃತ್ವದ ಸಬಲೀಕರಣ. ಹೀಗಾಗಿ ವಿಕಸಿತ ಭಾರತದ ಸಂಕಲ್ಪವನ್ನು ಮುನ್ನಡೆಸಲು ಮಾತೃಶಕ್ತಿಯ ಅಗತ್ಯವಿದೆ. ಅರ್ಧನಾರೀಶ್ವರನ ಆರಾಧನೆ ಮಾಡುವ ನಮ್ಮ ಸಮಾಜದಲ್ಲಿ ನಾರಿ ಮತ್ತು ಪುರುಷರು ಸಮಾನರು. ಇಂತಹ ಸಂಸ್ಕೃತಿಯ ಅಪಭ್ರಂಶು ಸಲ್ಲದು ಎಂದು ದೆಹಲಿ ಸಂಸದೆ ಬಾನ್ಸುರಿ ಸ್ವರಾಜ್ ಹೇಳಿದ್ದಾರೆ.
ಇಂದು ಮಂಗಳೂರಿನ ಪುರಭವನದಲ್ಲಿ ನಡೆದ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮ ತ್ರಿಶತಾಬ್ದಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಹಲ್ಯಾಭಾಯಿ ಅವರು ತಮ್ಮ ಬದುಕಿನುದ್ದಕ್ಕೂ ಸಮಾಜ ಸುಧಾರಣೆಯ ಅಪಾರ ಕಾರ್ಯಗಳನ್ನು ಮಾಡಿದರು. ಅನೇಕ ದೇಗುಲಗಳನ್ನು, ಕೋಟೆಗಳನ್ನು, ಮೂಲಸೌಕರ್ಯಗಳನ್ನು ನಿರ್ಮಿಸಿದರು. ಮಹಿಳಾ ಶಿಕ್ಷಣ, ವಿಧವೆಯರ ಕಲ್ಯಾಣಕ್ಕೆ ಒತ್ತು ನೀಡಿದರು. ಸತಿ ಪದ್ಧತಿಯನ್ನು ವಿರೋಧಿಸಿದರು ಎಂದರು.
ಮೋದಿ ಸರ್ಕಾರವು ಬೇಟಿ ಬಚಾವೋ ಬೇಟಿ ಪಡಾವೋ, ಜನಧನ್ ಮುಂತಾದ ಯೋಜನೆಗಳ ಮೂಲಕ ಮಹಿಳಾ ನೇತೃತ್ವದ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ ಎಂದರು.
ಖ್ಯಾತ ಬರಹಗಾರ್ತಿ ಮತ್ತು ಚಿಂತಕಿ ಶಿಫಾಲಿ ವೈದ್ಯ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಅಧಿಕಾರವಿರಲಿಲ್ಲ, ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇರಲಿಲ್ಲ ಎಂದು ನಮಗೆ ಹೇಳುತ್ತಾ ಬರಲಾಗಿದೆ. ಆದರೆ ಇದು ಸುಳ್ಳು, ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಹೆಣ್ಣು ಪುರುಷನಿಗೆ ಸರಿಸಮಾನವಾಗಿ ನಿಂತು ಅಧಿಕಾರ ನಡೆಸಿದ್ದಳು ಎಂದರು. ಅಲ್ಲದೇ ನಾಯಕಿ ದೇವಿ, ರುದ್ರಮ್ಮ ದೇವಿ, ರಾಣಿ ಕರ್ಣಾವತಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸೆಂಬಿಯನ್ ಮಹಾದೇವಿ, ರಾಣಿ ಅಬ್ಬಕ್ಕ ಮುಂತಾದ ವೀರ ರಾಣಿಯರ ಸಾಹಸಗಾಥೆಯನ್ನು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.