ಬೆಂಗಳೂರು: ಮೆಟ್ರೋ ಪ್ರಯಾಣದರ ಏರಿಕೆಯನ್ನು ಹಿಂಪಡೆಯಬೇಕೆಂದು ಶಾಸಕ ರವಿ ಸುಬ್ರಹ್ಮಣ್ಯ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ನಿಯೋಗವು ಇಂದು ಮೆಟ್ರೋ ಎಂ.ಡಿ. ಭೇಟಿಯಾಗಿದೆ. ಇಲ್ಲಿ ದೇಶದಲ್ಲೇ ಮೆಟ್ರೋ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ ಇದು; ನಗರದ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆಟ್ರೊ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದೆ. ಈಗ ಮೆಟ್ರೋ ದರ 46% ಏರಿಕೆ ಮಾಡಿ ಪ್ರಹಾರ ಮಾಡಲಾಗಿದೆ ಎಂದ ಅವರು, ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ ಎಂದು ಒತ್ತಾಯಿಸಿದರು.
ಮೆಟ್ರೋ ಸಾರ್ವಜನಿಕರಿಗಾಗಿ ಇದೆ. ಲಾಭವನ್ನೇ ನೋಡುವುದು ಸರಿಯಲ್ಲ; ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಬೇಕು ಎಂಬ ದೃಷ್ಟಿಯಿಂದ ಇದು ಜಾರಿಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಪ್ರಯಾಣದರ ಹೆಚ್ಚಳ ಸರಿಯಲ್ಲ ಎಂದು ಆಕ್ಷೇಪಿಸಿದರು.
ದರ ಹೆಚ್ಚಳ ಕೂಡಲೇ ಸ್ಥಗಿತಗೊಳಿಸಬೇಕು. ಜನರಿಗೆ ಬೇಕಿರುವ ಪಾರ್ಕಿಂಗ್ ನೀಡಬೇಕು. ಒಂದಷ್ಟು ಬೇಡಿಕೆ ಮುಂದಿಟ್ಟಿದ್ದೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಶಾಸಕ ಸಿ.ಕೆ.ರಾಮಮೂರ್ತಿ ಅವರು ಮಾತನಾಡಿ, ಇಂದು ಬಿಜೆಪಿ ನಿಯೋಗ ಮೆಟ್ರೋ ಎಂಡಿ ಭೇಟಿ ಮಾಡಿ ಬೆಂಗಳೂರಿನ ಜನರ ಸಮಸ್ಯೆ ಬಗ್ಗೆ ಹೇಳಿದ್ದೇವೆ. ದೇಶದ ಎಲ್ಲಾ ರಾಜ್ಯಗಳ ಮೆಟ್ರೊ ದರ ಕಡಿಮೆ ಇದೆ. ಆದರೆ, ಬೆಂಗಳೂರು ನಗರದಲ್ಲಿ ದರ ಹೆಚ್ಚಾಗಿದೆ. ಇವರು ಯಾವುದೋ ಸಮಿತಿ ಮಾಡಿದ್ದು, ಅದರ ವರದಿಯನ್ನ ಒಪ್ಪಿ ಜಾರಿ ಮಾಡಿದ್ದು ಸರಿಯಲ್ಲ. ಬೆಂಗಳೂರಿನ ಶಾಸಕರ ಜೊತೆ ಚರ್ಚೆ ಮಾಡಬೇಕಿತ್ತು. ಪ್ರಯಾಣಿಕರಿಗೆ ದರ ಹೆಚ್ಚಾಗಿದೆ ಎಂದು ಟೀಕಿಸಿದರು.
ದರ ಹೆಚ್ಚು ಮಾಡಿದ್ದೀರಿ; ಹೊರತು ಮೂಲಭೂತ ಸೌಕರ್ಯ ನೀಡಿಲ್ಲ. ಶೌಚಾಲಯ, ಪಾಕಿರ್ಂಗ್ ಏನೂ ಮಾಡಿಲ್ಲ ಎಂದರಲ್ಲದೆ, ದರ ಕಡಿಮೆ ಮಾಡದಿದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು. ಬಿಜೆಪಿ ಬೆಂಗಳೂರು ಮಹಾನಗರ ಘಟಕವು ದರ ಹೆಚ್ಚಳ ಮಾಡಬಾರದು ಎಂಬ ಬೇಡಿಕೆ ಮುಂದಿಟ್ಟಿದೆ. ಮಾಡುವುದಾದರೆ, 5% ದರ ಹೆಚ್ಚಳ ಮಾಡಲಿ ಎಂದು ತಿಳಿಸಿದರು.
ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಜಿಲ್ಲಾಧ್ಯಕ್ಷ ಹರೀಶ್, ಮಾಜಿ ಮಹಾಪೌರರಾದ ಗೌತಮ್, ಪ್ರಕಾಶ್ ಹಾಗೂ ಮುಖಂಡರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.