ನವದೆಹಲಿ: ಯುಪಿಎ ಆಡಳಿತಕ್ಕೆ ಹೋಲಿಸಿದರೆ ಈಗ ರೈಲು ಅಪಘಾತಗಳ ಸಂಖ್ಯೆ ಶೇಕಡಾ 68 ರಷ್ಟು ಕಡಿಮೆಯಾಗಿದೆ, ದೇಶದಲ್ಲಿನ ರೈಲು ಅಪಘಾತಗಳ ಘಟನೆಗಳನ್ನು ಪರಿಶೀಲಿಸಲು ಕೇಂದ್ರ ಬದ್ಧವಾಗಿದೆ ಎಂದು ಲೋಕಸಭೆಯಲ್ಲಿ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರು ಹೇಳಿದ್ದಾರೆ.
ತಮ್ಮ ಸಚಿವಾಲಯದ ಅನುದಾನದ ಬೇಡಿಕೆಯ ಮೇಲಿನ ಚರ್ಚೆಗೆ ಉತ್ತರಿಸಿದ ಅಶ್ವಿನಿ ವೈಷ್ಣವ್, ಯುಪಿಎ ಆಡಳಿತದಲ್ಲಿ ವರ್ಷಕ್ಕೆ ಸರಾಸರಿ ವಾರ್ಷಿಕ ಅಪಘಾತಗಳ ಸಂಖ್ಯೆ 171 ಆಗಿತ್ತು. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪ್ರಯತ್ನಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.
2022–23ರಲ್ಲಿ ಸುರಕ್ಷತೆಗಾಗಿ 87 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ, ಇದು ಕಳೆದ ಆರ್ಥಿಕ ವರ್ಷದಲ್ಲಿ 98 ಸಾವಿರ ಕೋಟಿ ರೂಪಾಯಿಗಳನ್ನು ತಲುಪಿದೆ . ಈ ಬಾರಿಯ ಬಜೆಟ್ನಲ್ಲಿ ಸುರಕ್ಷತಾ ಕ್ರಮಗಳಿಗಾಗಿ ಒಂದು ಲಕ್ಷದ ಎಂಟು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ. ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಕವಚ್ ಅನ್ನು ದೊಡ್ಡ ಪ್ರಮಾಣದಲ್ಲಿ ಹೊರತರಲು ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯಗಳನ್ನು ದೇಶ ಹೊಂದಿದೆ ಎಂದು ಅವರು ಹೇಳಿದರು.
ರೈಲ್ವೆ ಅಭಿವೃದ್ಧಿಗೆ ಕೈಗೊಂಡಿರುವ ಉಪಕ್ರಮಗಳ ಕುರಿತು ಮಾತನಾಡಿದ ಸಚಿವರು, 10 ಸಾವಿರ ಹೆಚ್ಚುವರಿ ಸಾಮಾನ್ಯ ಬೋಗಿಗಳನ್ನು ಉತ್ಪಾದಿಸಲಾಗುವುದು. ಇನ್ನೂ 50 ಅಮೃತ್ ಭಾರತ್ ರೈಲುಗಳನ್ನು ತಯಾರಿಸಲು ಸರ್ಕಾರ ನಿರ್ಧರಿಸಿದೆ. ಎರಡು ಮೆಗಾಸಿಟಿಗಳ ನಡುವಿನ ಸಣ್ಣ-ದೂರ ಪ್ರಯಾಣಕ್ಕೆ ಸೌಲಭ್ಯಗಳನ್ನು ಒದಗಿಸಲು ವಂದೇ ಮೆಟ್ರೋವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.
ವಂದೇ ಭಾರತ್, ಅಮೃತ್ ಭಾರತ್, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ ರೈಲುಗಳು ಮುಂಬರುವ ವರ್ಷಗಳಲ್ಲಿ ಪ್ರಯಾಣಿಕರ ಸೇವೆಗಳನ್ನು ಗಣನೀಯವಾಗಿ ಹೆಚ್ಚಿಸಲಿವೆ. ವಿದ್ಯುದೀಕರಣವು ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಮತ್ತು 10 ವರ್ಷಗಳಲ್ಲಿ 44 ಸಾವಿರ ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.