ಹೈದರಾಬಾದ್: ದೇಶದಲ್ಲಿ ಗೋಹತ್ಯೆ ಪರ, ವಿರೋಧ ವಾದ ವಿವಾದಗಳು ನಡೆಯುತ್ತಿದೆ. ಗೋವಿನ ವಿಷಯಕ್ಕಾಗಿಯೇ ಸಂಘರ್ಷಗಳು ನಡೆಯುತ್ತಿವೆ. ಈ ನಡುವೆಯೇ ಹೈದರಾಬಾದ್ನ ಮುಸ್ಲಿಂ ಯುವಕರ ಗುಂಪೊಂದು ಸದ್ದಿಲ್ಲದೆ ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ.
‘ಅರಬ್ ಗೋರಕ್ಷಣ್ ಸಮಿತಿ’ ಹಳೆ ಹೈದರಾಬಾದ್ ಸಮೀಪದ ಬರ್ಕಾಸ್ನಲ್ಲಿ ಗೋಶಾಲೆಯನ್ನು ನಡೆಸುತ್ತಿದೆ. ಅಷ್ಟೇ ಅಲ್ಲದೇ ಗೋಮಾಂಸ ಭಕ್ಷಣೆಯ ವಿರುದ್ಧ ಜನರಿಗೆ ತಿಳಿ ಹೇಳುತ್ತಿದೆ. ಕಸಾಯಿಖಾನೆ ಸೇರುವ ಗೋವುಗಳ ರಕ್ಷಣೆ ಮಾಡುತ್ತಿದೆ.
ಈ ಗುಂಪಿನಲ್ಲಿ 150 ಮಂದಿಯಿದ್ದಾರೆ. ಮುಸ್ಲಿಂರು ಮಾತ್ರವಲ್ಲದೇ ಸಮಾನ ಮನಸ್ಕ ಹಿಂದೂ ಯುವಕರು ಈ ಗುಂಪಲ್ಲಿದ್ದಾರೆ. ಹೈದರಾಬಾದ್ನಲ್ಲಿ ನೆಲೆಕಂಡಿರುವ ಅರಬ್ ಮೂಲದವರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
250 ವರ್ಷಗಳ ಹಿಂದೆ ಬ್ರಿಟಿಷ್ ರಾಜ್ ಆರಂಭವಾದ ಬಳಿಕವಷ್ಟೇ ಭಾರತೀಯ ಮುಸ್ಲಿಮರು ಗೋಮಾಂಸ ತಿನ್ನಲು ಆರಂಭಿಸಿದ್ದಾರೆ. ಹಿಂದೂ ಮುಸ್ಲಿಮರ ಬಾಂಧವ್ಯವನ್ನು ಒಡೆಯುವ ಸಲುವಾಗಿಯೇ ಬ್ರಿಟಿಷರು ಗೋಮಾಂಸವನ್ನು ಪ್ರಚಾರಪಡಿಸಿದರು ಎಂಬುದಾಗಿ ಈ ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ಲಾ ಬಿನ್ ಅಲಿ ಬಹಮೈದ್ ಹೇಳುತ್ತಾರೆ.
’ಹಿಂದೂ ಸಹೋದರರಿಗೆ ಗೋವು ಪವಿತ್ರ ಪ್ರಾಣಿ. ಬಾಬರ್ ಆಡಳಿತದಿಂದ ಹಿಡಿದು ಮುಘಲ್ ಆಡಳಿತದವರೆಗೂ ಗೋವು ಮತ್ತು ಹಿಂದೂ ಭಾವನೆಗಳಿಗೆ ಗೌರವ ಕೊಡಲಾಗಿತ್ತು. ಆದರೆ ಬ್ರಿಟಿಷರು ಗೋಮಾಂಸ ಭಕ್ಷಣೆಯನ್ನು ಪ್ರೇರಪಿಸಿದರು. ಹಿಂದೂ ಮುಸ್ಲಿಂರನ್ನು ಬೇರ್ಪಡಿಸಲು ಅವರು ಈ ರೀತಿ ಮಾಡಿದರು’ ಎಂದು ಅವರು ಹೇಳುತ್ತಾರೆ.
ಪ್ರವಾದಿಯವರೂ ಗೋಮಾಂಸ ತಿನ್ನಿ ಎಂದಿಲ್ಲ. ಗೋಮಾಂಸ ತಿಂದರೆ ರೋಗರುಜಿನ ಬರುವ ಎಚ್ಚರಿಕೆ ನೀಡಿದ್ದರು. ಆದರೆ ಮುಸ್ಲಿಮರಲ್ಲಿ ಈ ಬಗ್ಗೆ ತಪ್ಪು ತಿಳುವಳಿಕೆ ಇದೆ ಎಂದು ಅವರು ಬಹಮೈದ್ ಬೇಸರ ವ್ಯಕ್ತಪಡಿಸುತ್ತಾರೆ.
ಹಲವಾರು ಮುಸ್ಲಿಮರ ವಿರೋಧವನ್ನು ಕಟ್ಟಿಕೊಂಡು ಇವರು ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂಬುದು ವಿಶೇಷ. ದೆಹಲಿ ಸೇರಿದಂತೆ ಇತರ ಭಾಗಗಳಿಗೂ ತಮ್ಮ ಸಂಘಟನೆಯನ್ನು ವಿಸ್ತರಿಸುವ ಉದ್ದೇಶ ಬಹಮೈದ್ ಮತ್ತು ಅವರ ಸಂಗಡಿಗರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.