ಬೆಂಗಳೂರು: ಕಾಂಗ್ರೆಸ್ಸಿನ ಸಂಕುಚಿತ ಭಾವನೆಗಳಿಗೆ ಜನರು ಉತ್ತರ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಡಗರದ ವಾತಾವರಣ ಇದೆ. ಜನರ ಅಸ್ಮಿತೆಯಾಗಿದ್ದ ಶ್ರೀರಾಮಮಂದಿರ ನಿರ್ಮಾಣ ಆಗಿದ್ದು, 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದನ್ನು ಕಾಂಗ್ರೆಸ್ನವರು ಮನ ಬಂದಂತೆ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನಿಲುವನ್ನು ವಿರೋಧಿಸುವುದಾಗಿ ತಿಳಿಸಿದರು.
ಸಿದ್ದರಾಮಯ್ಯನವರ ಟೀಕೆಗೆ ಉತ್ತರ ಸಿಗಲು ಶುರುವಾದ ಬಳಿಕ ಅವರು ಬದಲಾವಣೆ ಮಾಡಿದ್ದಾರೆ. ರಾಮಪ್ರಜ್ಞೆಯನ್ನು ಅವರ ಮನಸ್ಸಿನಲ್ಲಿ ತಂದ ಜನತೆಗೆ ಕೃತಜ್ಞತೆಗಳು. ಕೆ.ಎನ್.ರಾಜಣ್ಣ, ಪ್ರಿಯಾಂಕ್ ಖರ್ಗೆಯವರು ಮನ ಬಂದಂತೆ ಮಾತನಾಡಿದ್ದು, ಸೂಕ್ತ ಸಂದರ್ಭದಲ್ಲಿ ಸರಿಯಾದ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದರು.
ಶ್ರೀರಾಮನ ಪೋಸ್ಟರ್ಗಳಿಗೆ ಕತ್ತರಿ ಹಾಕುತ್ತಿದ್ದಾರೆ. ಹಿಂದೂ ಪರ ಕಾರ್ಯಕರ್ತರು ಮಂತ್ರಾಕ್ಷತೆ ಹಂಚುತ್ತಿದ್ದಾರೆ. ಅದನ್ನು ಕಾಂಗ್ರೆಸ್ಸಿಗರು ಬಿಸಾಡುತ್ತಿದ್ದಾರೆ. ನಾವು ಕೊಟ್ಟ ಅಕ್ಕಿಯನ್ನು ಇವರು ಮಂತ್ರಾಕ್ಷತೆಗೆ ಬಳಸುವುದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. 5 ಕೆಜಿ ಅಕ್ಕಿ ಮೋದಿಜೀ ಅವರದು. ನಿಮ್ಮ ಅಕ್ಕಿ ಎಲ್ಲಿ? ಎಂದು ಪ್ರಶ್ನಿಸಿದರು. ಇದು ಜನರ ಕಿವಿ ಮೇಲೆ ಹೂವು ಇಡುವ ಕಾರ್ಯ ಎಂದು ಟೀಕಿಸಿದರು.
ಪ್ರಿಯ ಕೃಷ್ಣ, ಲೇಔಟ್ ಕೃಷ್ಣಪ್ಪ 40- 50 ಅಡಿ ಕಟೌಟ್ ಹಾಕಿದ್ದಾರೆ. ಅದಕ್ಕೆ ಕತ್ತರಿ ಹಾಕಿದ್ದೀರಾ ಎಂದು ಕೇಳಿದರು. ಪ್ರತಿಯೊಬ್ಬರ ಮನಸ್ಸಿನಲ್ಲಿ ಶ್ರೀರಾಮ ಇದ್ದಾನೆ. ಪ್ರಿಯಾಂಕ್ ಖರ್ಗೆಯವರ ಮನೆಯಲ್ಲಿ ರಾಮನಾಮ, ಹೊರಗಡೆ ಮಾತ್ರ ಓಟ್ ಓಲೈಕೆಗಾಗಿ ರಹೀಮ ನಾಮ ಎಂದು ಆರೋಪಿಸಿದರು. ನಿಮ್ಮ ಬಂಡವಾಳ ನನಗೆ ಗೊತ್ತಿದೆ. ಇಷ್ಟೆಲ್ಲ ಮಾಡಿದರೂ ನಿಮ್ಮ ಪಕ್ಷಕ್ಕೆ ಭವಿಷ್ಯ ಇಲ್ಲ. ಜನತೆ ನಿಮ್ಮ ಅಲ್ಪಸಂಖ್ಯಾತರ ಓಲೈಕೆಗೆ ಪಾಠ ಕಲಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು.
ಪ್ರಿಯಾಂಕ್ ಖರ್ಗೆ ಅವರು ನಡ್ಡಾ, ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ನಕಲಿ ಮಾಡುವವರಿದ್ದರೆ ಅದನ್ನು ನಡ್ಡಾ ಅವರನ್ನು ಕೇಳುವುದಲ್ಲ. ತಪ್ಪು ಮಾಡಿದ್ದರೆ ಜೈಲಿಗೆ ಹಾಕಿ. ನರಿಕೂಗು ಗಿರಿಗೆ ಮುಟ್ಟುವುದಿಲ್ಲ. ನರಿ ಕೆಲಸ ನರಿಯೇ ಮಾಡಬೇಕು. ಗಿರಿ ಕೆಲಸ ಗಿರಿಯೇ ಮಾಡಬೇಕು. ಪ್ರಿಯಾಂಕ್ ಖರ್ಗೆ ಅವರು ಮತಿಭ್ರಮಣೆ ಆದವರಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಇನ್ನೂ ಪಡ್ಡೆ ಹುಡುಗ ಇರಲಿ ಎಂದು ನಾವು ಮಾತನಾಡಿರಲಿಲ್ಲ. ನಾನು 1978-79ರಲ್ಲಿ ರಾಜಕಾರಣಕ್ಕೆ ಬಂದವ. ಆಗ ಅವರು ಹುಟ್ಟಿರಬೇಕಷ್ಟೇ ಎಂದು ವಿವರಿಸಿದರು.
ಮಹಾವೀರ ಬಾಬುಲಾಲ್ ಜೈನ್ ಮೇಲೆ ಎಫ್ಐಆರ್ ಆಗಿದೆ. ಮಹಾವೀರ ಮಹೇಂದ್ರ ಜೈನ್ ಅವರ ಹೆಸರು ಹೇಳಿದ್ದಾರೆ. ಚಿತ್ತಾಪುರ ಎಲ್ಲಿ? ಉತ್ತರ ಪ್ರದೇಶ ಎಲ್ಲಿ? ದೆಹಲಿ ಎಲ್ಲಿ? ಎಂದು ಕೇಳಿದರು. ಯಾರನ್ನು ಕೇಳ್ತಿದ್ದಾರೆ? ದೇಶದ ಅಸ್ಮಿತೆ ಶ್ರೀರಾಮನನ್ನು ಟೀಕಿಸುವುದು ಸರಿಯೇ ಎಂದು ಪ್ರಶ್ನೆ ಹಾಕಿದರು.
ಸಂವಿಧಾನದಲ್ಲೂ ರಾಮ ಇದ್ದಾರೆ. ಡಾ. ಭೀಮರಾವ್ ರಾಮ್ಜೀ ಅಂಬೇಡ್ಕರ್ ಹೆಸರಿನಲ್ಲಿ ರಾಮ ಇದ್ದಾನೆ. ಹಿಂದೂ ಧರ್ಮದ ನ್ಯೂನತೆ ಸರಿಪಡಿಸಲು ಅವರು ಹೋರಾಟ ಮಾಡಿದ್ದರು. ಪರಿವರ್ತನೆಯ ದಾರಿ ತೋರಲು ಅವರು ಬೌದ್ಧ ಧರ್ಮಕ್ಕೆ ಹೋದರು. ಅವರು ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಹೋಗಲಿಲ್ಲ ಎಂದು ವಿಶ್ಲೇಷಿಸಿದರು. ಅಯೋಧ್ಯೆ ಪೂಜಾ ಕೆಲಸಕ್ಕೆ ನೇಮಿಸಿದ 24 ಪೂಜಾರಿಗಳ ಪೈಕಿ ಇಬ್ಬರು ದಲಿತರಿದ್ದಾರೆ ಎಂದರು. ಹಿಂದೂ ಧರ್ಮ ಬದಲಾಗುತ್ತಿದೆ; ಪರಿವರ್ತನೆಗೆ ಇದು ಉದಾಹರಣೆ ಎಂದರು.
ಕೆ.ಎನ್.ರಾಜಣ್ಣ ಬಹಳ ಮಾತನಾಡಿದ್ದಾರೆ. ರಾಮನ ಟೆಂಟ್, ಚಿಕ್ಕ ಚಿಕ್ಕ ಗೊಂಬೆಗಳಿದ್ದವು ಎಂದಿದ್ದಾರೆ. ಶ್ರೀರಾಮ ಮಂದಿರ ಇದ್ದುದು ನಿಜ. ಬಾಬರ್ ಅದನ್ನು ಒಡೆದುದು ನಿಜ. ಅಲ್ಲಿ ಬಾಬರಿ ಮಸೀದಿ ನಿರ್ಮಿಸಿದ್ದೂ ನಿಜ. ಇದನ್ನು ಮುಸ್ಲಿಮರು ಒಪ್ಪಿಕೊಂಡಿದ್ದಾರೆ. 370ನೇ ವಿಧಿ ರದ್ದು, ಜಮ್ಮು- ಕಾಶ್ಮೀರದಲ್ಲಿ ಡಾ. ಅಂಬೇಡ್ಕರರ ಸಂವಿಧಾನ ಜಾರಿ, ರಾಮಮಂದಿರದಲ್ಲಿ ಮಂದಿರ ನಿರ್ಮಿಸುವುದಾಗಿ ಬಿಜೆಪಿ ತನ್ನ ಉಗಮದಿಂದಲೇ ಹೇಳಿತ್ತು. ಇದಕ್ಕೆ ನಿಮಗೆ ಯಾಕೆ ಬೆಂಕಿ ಬಿದ್ದಿದೆ ಎಂದು ಕೇಳಿದರು.
ಕೆ.ಎನ್.ರಾಜಣ್ಣ ಅವರು ಮೈಸೂರಿನ ಕಲ್ಲಿನಿಂದ ಶ್ರೀರಾಮ ವಿಗ್ರಹ ಆಗಿದೆ ಎಂದಿದ್ದಾರೆ. ಇದು ಖುಷಿ ಪಡಬೇಕಾದ ವಿಷಯ. ಇಡೀ ಕಾಂಗ್ರೆಸ್ ಸಿಎಂ ಹೇಳಿಕೆ ವಿರುದ್ಧ ತಿರುಗಿಬಿದ್ದಿದೆ. ಡಿಕೆಶಿವಕುಮಾರ್ ಅವರೂ ಸಿಎಂ ಮಾತನ್ನು ಒಪ್ಪಿಲ್ಲ. ಕೆ.ಎನ್.ರಾಜಣ್ಣ ಅವರು ಸಿಎಂ ಕೃಪಾಕಟಾಕ್ಷ ಗಳಿಸಲು ಹೀಗೆ ಮಾಡಿದ್ದಾರೆ ಎಂದು ಟೀಕಿಸಿದರು.
ಟಿಪ್ಪು ಸುಲ್ತಾನ್ ಕೆಆರ್ಎಸ್ ಕಟ್ಟಿದ್ದಾಗಿ ಸುಳ್ಳು ಹೇಳಿದ್ದಾರೆ. ಜನ ಪ್ರಬುದ್ಧರಾಗುವವರೆಗೂ ಕಾಂಗ್ರೆಸ್ ಸುಳ್ಳು ಹೇಳುತ್ತಿತ್ತು. ಈಗಲೂ ಅದನ್ನೇ ಮುಂದುವರೆಸಿದ್ದಾರೆ. ಟಿಪ್ಪು ಸುಲ್ತಾನ್ ದೇವನಹಳ್ಳಿಯಲ್ಲಿ 1751ರಲ್ಲಿ ಹುಟ್ಟಿದ್ದು, 1799ರಲ್ಲಿ ಮೃತಪಟ್ಟರು. ಕೆ.ಆರ್.ಎಸ್.ಗೆ ಆಗ ಅಡಿಪಾಯ ಹಾಕಿತ್ತೇ? 1911ರಲ್ಲಿ ಪ್ರಾರಂಭವಾಗಿ 1931ರಲ್ಲಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಮುಗಿದಿದೆ. ಇದು ಚರಿತ್ರೆ. ಸಚಿವರಿಗೆ ಸಾಮಾನ್ಯ ಜ್ಞಾನದ ಕೊರತೆ ಎಂದು ಜನರು ಹೇಳುತ್ತಾರೆ ಎಂದು ಆಕ್ಷೇಪಿಸಿದರು.
ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಬಂದರೆ ಚಪ್ಪಲಿಯಲ್ಲಿ ಹೊಡೆಯಲು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದು ಕೆಟ್ಟ ಪದವಲ್ಲವೇ? ನಾವು ಮಾತನಾಡಿದರೆ ಬಿಜೆಪಿ ಹೇಳಿಕೆ ಎನ್ನುತ್ತಾರೆ. ಆದರೆ, ಅವರದು ವೈಯಕ್ತಿಕ ಎನ್ನುತ್ತಾರೆ ಎಂದರು.
ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿರಲು ಹೆಚ್ಚು ಸ್ಥಾನ ಗೆಲ್ಲಬೇಕೆಂದು ಯತೀಂದ್ರ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಗ್ಯಾರಂಟಿ ಮುಂದುವರೆಯಲು ಹೆಚ್ಚು ಲೋಕಸಭಾ ಸ್ಥಾನ ಕೊಡಿ ಎಂಬಂತೆ ಮಾತನಾಡಿದ್ದಾರೆ. ಇದು ಡಿ.ಕೆ.ಶಿವಕುಮಾರರಿಗೆ ಚೆಕ್ಮೇಟ್. ಗ್ಯಾರಂಟಿ ಮುಂದುವರೆಯುವುದಿಲ್ಲ ಎಂದು ಯತೀಂದ್ರ ಹೇಳಿದಂತಿದೆ. ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಾರದು ಎಂಬ ಮಾತು ಅವರದು ಎಂದು ನುಡಿದರು.
ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ, ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.