ಜಗತ್ತಿಗೇ ತಿಳಿದಿರುವಂತೆ, ಸುಮಾರು 500 ವರ್ಷಗಳ ಸಂಘರ್ಷದ ನಂತರ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ, ಶ್ರೀರಾಮ ಜನ್ಮಸ್ಥಾನದಲ್ಲಿ, ಭವ್ಯ ಮಂದಿರವು ನಿರ್ಮಾಣ ಗೊಳ್ಳುತ್ತಿದ್ದು, ದಿನಾಂಕ 22.01.2024 ರಂದು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ದಿನವನ್ನು ಭಾರತೀಯರೆಲ್ಲರೂ ಒಂದು ರಾಷ್ಟ್ರೀಯ ಉತ್ಸವವನ್ನಾಗಿ, ಹಬ್ಬವನ್ನಾಗಿ ಸಂತೋಷ, ಸಂಭ್ರಮ, ಸಡಗರ, ಉಲ್ಲಾಸಗಳಿಂದ ಆಚರಿಸುವ ಸಿದ್ಧತೆಗಳನ್ನು ಮಾಡಿಕೊಳ್ಳತ್ತಿದ್ದಾರೆ. ಈಗಾಗಲೇ ಎಲ್ಲ ಮನೆಗಳಿಗೂ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ರಾಮ ಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರವನ್ನು ತಲುಪಿಸುವ ಕಾರ್ಯ ಅತ್ಯುತ್ಸಾಹದಿಂದ, ಭಕ್ತಿಯಿಂದ ನಡೆಯುತ್ತಿದ್ದು, ಭಾರತವೇ ಏಕೆ, ಇಡೀ ವಿಶ್ವವೇ ಈ ಮುಹೂರ್ತವನ್ನು ಕಾತರದಿಂದ ಎದುರು ನೋಡುತ್ತಿದೆ. 22.01.2024 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವಾಗ, ಇಡೀ ಭಾರತದಲ್ಲಿ ಗ್ರಾಮ- ನಗರಗಳಲ್ಲಿರುವ ವಿವಿಧ ದೇವತಾ ಮಂದಿರಗಳಲ್ಲಿ ಹೋಮ, ಯಜ್ಞ, ಪೂಜೆ, ಜಪ, ಭಜನೆ, ಪ್ರವಚನ, ಆರತಿ, ಪ್ರಸಾದ ವಿನಿಯೋಗ ದೊಂದಿಗೆ ಪರದೆಯಲ್ಲಿ ಅಯೋಧ್ಯೆಯ ನೇರ ಪ್ರಸಾರವನ್ನು ಎಲ್ಲರೂ ಒಟ್ಟಿಗೆ ಕುಳಿತು ವೀಕ್ಷಿಸುವ ವ್ಯವಸ್ಥೆಗಳು ಸಿದ್ಧಗೊಳ್ಳುತ್ತಿವೆ.
ನಮ್ಮ ರಾಜ್ಯದಲ್ಲಿ ಅಂದು ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸುವಂತೆ ಸರ್ಕಾರವೇ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ ರಜೆಯನ್ನೇ ಘೋಷಿಸಲಾಗಿದೆ. ಈ ಶುಭ ದಿನವು ಕೆಲಸದ ದಿನವಾಗಿರುವುದರಿಂದ, ಮಂದಿರಗಳಿಗೆ ತೆರಳಿ ವೀಕ್ಷಿಸಲು ಅನಾನುಕೂಲವಾಗಿರುವಂತಹ ಭಕ್ತಜನತೆಗೆ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲೇ ಸರಳವಾಗಿ ರಾಮನಿಗೆ ಪೂಜೆ ಮಾಡಿ, ಅಯೋಧ್ಯೆಯ ನೇರಪ್ರಸಾರದ ವೀಕ್ಷಣೆಯ ವ್ಯವಸ್ಥೆಯನ್ನು ಮಾಡುವ ಮೂಲಕ ಬಹು ನಿರೀಕ್ಷಿತ ಈ ಸುವರ್ಣ ಘಳಿಗೆಯ ವೀಕ್ಷಣೆಯ ಅವಕಾಶವನ್ನು ಮಾಡಿಕೊಡುವಂತೆ ಉದ್ಯಮಪತಿಗಳ, ಸಂಘ ಸಂಸ್ಥೆಗಳ, ವ್ಯಾಪಾರ ಮಳಿಗೆಗಳ (ಮಾಲ್ ಗಳ), ವ್ಯಾಪಾರಿಗಳ, ಶಾಲಾ ಕಾಲೇಜು ಆಡಳಿತ ಮಂಡಳಿಗಳ, ಸರ್ಕಾರಿ ಕಚೇರಿಗಳ ಮುಖ್ಯಸ್ಥರನ್ನು ವಿಶ್ವ ಹಿಂದೂ ಪರಿಷದ್ ವಿನಮ್ರ ಪೂರ್ವಕವಾಗಿ ಕೇಳಿಕೊಳ್ಳುತ್ತಿದೆ. ಈ ಐತಿಹಾಸಿಕ ಕ್ಷಣಗಳು ಇತಿಹಾಸದ ಗರ್ಭವನ್ನು ಸೇರುವಾಗ, ನಮ್ಮೆಲ್ಲರ ಈ ಸಾಮೂಹಿಕ ಪಾಲ್ಗೊಳ್ಳುವಿಕೆಯು ನವ ಇತಿಹಾಸವನ್ನು ಸೃಷ್ಟಿಸಲಿದೆ.
ಇದರ ಜೊತೆಜೊತೆಗೆ, ಅಂದು ಸಂಜೆ ಸೂರ್ಯಾಸ್ತದ ನಂತರ ಎಲ್ಲರ ಮನೆಗಳ ಮುಂದೆ ಮತ್ತು ದೇವಸ್ಥಾನಗಳಲ್ಲಿ ಸಂಭ್ರಮದ ದೀಪೋತ್ಸವವನ್ನು ಆಚರಿಸುವ ಮೂಲಕ, ನಭೋ ಮಂಡಲದಲ್ಲಿ ವಿಶಿಷ್ಟ ಚೈತನ್ಯವನ್ನು ತುಂಬಿ, ಶ್ರೀರಾಮನ ಜನ್ಮಭೂಮಿ ಮಂದಿರ ನಿರ್ಮಾಣಕ್ಕಾಗಿ ಹೋರಾಡಿ ಹುತಾತ್ಮರಾದ ಎಲ್ಲಾ ಬಲಿದಾನಿಗಳ ಆತ್ಮಗಳಿಗೆ ತೃಪ್ತಿಯಾಗುವಷ್ಟು ದೀಪಗಳನ್ನು ಬೆಳಗಿ, ಅಯೋಧ್ಯೆಯ ಕಡೆ ಮುಖ ಮಾಡಿ ಶ್ರೀರಾಮನಿಗೆ ಆರತಿಯನ್ನು ಬೆಳಗಿ, ಮತ್ತೊಂದು ನವ ಇತಿಹಾಸ ನಿರ್ಮಿಸುವಂತೆ ಕರೆ ನೀಡಿದೆ. ಈ ದೀಪೋತ್ಸವದ ಸಂದರ್ಭದಲ್ಲಿ ಉಪಗ್ರಹದಿಂದ ಭಾರತವನ್ನು ವೀಕ್ಷಿಸಿದರೆ, ಭಾರತವೇ ಜ್ಯೋತಿರ್ಮಯವಾಗಿ ಗೋಚರವಾಗುವಂತೆ, ಎಲ್ಲಾ ದೇವಾಧಿದೇವತೆಗಳು ಮೇಲಿನ ಲೋಕಗಳಿಂದ ನಮ್ಮ ಭಾರತವನ್ನು ಸಂಭ್ರಮದಿಂದ ವಿಕ್ಷಿಸುವಂತಹ ದೀಪಾರಾಧನೆ ಮಾಡಿ, ಕಣ್ಣುಗಳಲ್ಲಿ ತುಂಬಿಸಿಕೊಂಡು ಧನ್ಯತೆಯನ್ನು ಪಡೆಯುವಂತೆ ಸಮಸ್ತ ಸಮಾಜವನ್ನು ವಿನಂತಿಸುತ್ತಿದೆ.
ಜಗನ್ನಾಥ ಶಾಸ್ತ್ರೀ ಪ್ರಾಂತ ಕಾರ್ಯದರ್ಶಿ
ವಿಶ್ವ ಹಿಂದೂ ಪರಿಷದ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.