ನವದೆಹಲಿ: ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸಿಎಂ ದೈಹಿಕವಾಗಿ ಹಾನಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ದೂರಿದ್ದಾರೆ.
ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಸದಸ್ಯರು ಆರಿಫ್ ಖಾನ್ ಅವರ ವಾಹನದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಗವರ್ನರ್ ಖಾನ್ ಅವರ ಆರೋಪಗಳನ್ನು ಮಾಡಿದ್ದಾರೆ.
ರಾಜ್ಯಪಾಲರು ನವದೆಹಲಿಗೆ ತೆರಳಲು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅವರ ವಾಹನದ ಮೇಲೆ ದಾಳಿ ನಡೆದಿದ್ದು ಇದು ರಾಜ್ಯದಲ್ಲಿ ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಗವರ್ನರ್ ಖಾನ್ ಅವರು ಮಾಧ್ಯಮವನ್ನುದ್ದೇಶಿಸಿ ಮಾತನಾಡುತ್ತಾ, ಮುಖ್ಯಮಂತ್ರಿ ವಿಜಯನ್ ಅವರು ಕೃತ್ಯದ ಹಿಂದೆ ಇದ್ದಾರೆ, ಅವರು ನನಗೆ ದೈಹಿಕ ಹಾನಿಯನ್ನುಂಟುಮಾಡಲು ಪ್ರಯತ್ನ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಘಟನೆಯು ಆಕಸ್ಮಿಕವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ತನ್ನನ್ನು ಗುರಿಯಾಗಿಸಿಕೊಂಡು ನಡೆದ ಕೃತ್ಯ ಎಂದು ಅವರು ಹೇಳಿದ್ದಾರೆ.
“ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯುತ್ತಿದ್ದರೆ, ಪ್ರತಿಭಟನಾಕಾರರಿರುವ ಕಾರುಗಳನ್ನು ಆ ಸ್ಥಳಕ್ಕೆ ತರಲು ಸಾಧ್ಯವೇ? ಅವರನ್ನು ಮುಖ್ಯಮಂತ್ರಿಗಳ ಕಾರಿನ ಬಳಿ ಬರಲು ಪೊಲೀಸರು ಬಿಡುತ್ತಾರೆಯೇ? ಆದರೆ ಇಲ್ಲಿ ಪ್ರತಿಭಟನಾಕಾರರ ಕಾರುಗಳು ಅಲ್ಲಿ ನಿಂತಿದ್ದವು ಮತ್ತು ಪೊಲೀಸರು ಪ್ರತಿಭಟನಾಕಾರರನ್ನು ಕಾರಿಗೆ ತಳ್ಳಿ ಅವರು ಓಡಿಹೋಗುವಂತೆ ಮಾಡಿದರು” ಎಂದು ಖಾನ್ ಆರೋಪಿಸಿದ್ದಾರೆ.
“ಆದ್ದರಿಂದ, ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಮುಖ್ಯಮಂತ್ರಿಗಳೇ ಪಿತೂರಿ ಮಾಡುತ್ತಿದ್ದಾರೆ ಮತ್ತು ನನ್ನನ್ನು ದೈಹಿಕವಾಗಿ ನೋಯಿಸಲು ಜನರನ್ನು ಕಳುಹಿಸುತ್ತಿದ್ದಾರೆ. ಗೂಂಡಾಗಳು ತಿರುವನಂತಪುರಂನ ರಸ್ತೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ” ಎಂದು ಖಾನ್ ಆರೋಪಿಸಿದ್ದಾರೆ.
ಗವರ್ನರ್ ಖಾನ್, ಘಟನೆಯನ್ನು ಖಂಡಿಸಿದ್ದು, ಕೇರಳದಲ್ಲಿ ಪ್ರಜಾಪ್ರಭುತ್ವದ ಹದಗೆಟ್ಟ ಸ್ಥಿತಿಯನ್ನು ಖಂಡಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳು ದೈಹಿಕ ಹಿಂಸೆಗೆ ಕಾರಣವಾಗಬಾರದು ಎಂದು ಅವರು ಒತ್ತಿ ಹೇಳಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತನ್ನ ಮೇಲೆ ಕಪ್ಪು ಬಾವುಟವನ್ನು ಬೀಸಿದರು ಮಾತ್ರವಲ್ಲದೆ ತನ್ನ ವಾಹನವನ್ನು ಎರಡೂ ಬದಿಗಳಲ್ಲಿ ಬಡಿದರು ಎಂದು ಖಾನ್ ಆರೋಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.