ಗುಜರಾತಿನ ಭುಜ್ ಕಚ್ ಜಿಲ್ಲೆಯ ಖತಿಯಾ ಗ್ರಾಮದ ಚೇತನ್ ಜಜನಿ ಆಗಸ್ಟ್ 5 ರಂದು ಗೋವಾದ ಬೊಗ್ಮಲ್ಲೊ ಬೀಚ್ ರೆಸಾರ್ಟ್ನಲ್ಲಿ ನಡೆದ ರುಬರು ಮಿಸ್ಟರ್ ಇಂಡಿಯಾ 2023ಯ 19 ನೇ ಆವೃತ್ತಿಯಲ್ಲಿ ಗುಜರಾತ್ ಅನ್ನು ಪ್ರತಿನಿಧಿಸಿ, ರುಬರು ಮಿಸ್ಟರ್ ಇಂಡಿಯಾ ವೆಸ್ಟ್ 2023 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರ ಮತ್ತು ಭಾರತದ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿತ್ವ ಬಿರುದನ್ನುಪಡೆದುಕೊಂಡರು.
32 ವರ್ಷದ ಚೇತನ್ ಜಜಾನಿ ಅವರು ಗಾಲಿಕುರ್ಚಿಯಲ್ಲಿ ಗುಜರಾತ್ ಅನ್ನು ಪ್ರತಿನಿಧಿಸಿ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಗೆದ್ದ ಏಕೈಕ ವ್ಯಕ್ತಿಯಾಗಿದ್ದಾರೆ. ಅವರು ಗಾಲಿಕುರ್ಚಿಯಲ್ಲೇ ಸಾಂಪ್ರದಾಯಿಕ ಗುಜರಾತಿ ವೇಷಭೂಷಣವನ್ನು ಪ್ರದರ್ಶಿಸಿ ಗಮನಸೆಳೆದರು. ಗುಜರಾತ್ನ ಕ್ರಮಿಕ್ ಯಾದವ್ ನಂತರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಎರಡನೇ ವ್ಯಕ್ತಿ. ಕ್ರಮಿಕ್ ಭಾರತವನ್ನು ಪ್ರತಿನಿಧಿಸಿ 2022 ರಲ್ಲಿ ಮಿಸ್ಟರ್ ಕ್ಯಾಬಲೆರೊ ಯೂನಿವರ್ಸಲ್ ಅನ್ನು ಗೆದ್ದುಕೊಂಡಿದ್ದರು.
ಚೇತನ್ ಜಜಾನಿ ಅವರು ನಾರಣಭಾಯ್ ಜಜಾನಿ ಮತ್ತು ಸಾಮಬೆನ್ ಜಜಾನಿ ಅವರ ಪುತ್ರ ಮತ್ತು ಪ್ರಸ್ತುತ ಕರ್ನಾಟಕದ ಮಂಗಳೂರಿನಲ್ಲಿ ನೆಲೆಸಿದ್ದಾರೆ, ಅವರು ಕಶರ್ಪ್ ಫಿಟ್ನೆಸ್ನಲ್ಲಿ ಫಿಟ್ನೆಸ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಚೇತನ್ ಜಜಾನಿ ಅವರು ತಮ್ಮ 2 ನೇ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾರೆ. ಭಾರತದಲ್ಲಿ ದಿವ್ಯಾಂಗ ವ್ಯಕ್ತಿಗೆ ಜೀವನ ಕಷ್ಟಕರವಾಗಿರುತ್ತದೆ ಎಂದು ಅವರು ಎಳವೆಯಲ್ಲಿ ಅರಿತುಕೊಂಡಿದ್ದರು. ಬಾಲ್ಯದಿಂದಲೂ ಗಾಲಿಕುರ್ಚಿಯಲ್ಲಿ ಜೀವನ ನಡೆಸುವಾಗ ಬಂದ ಆಲೋಚನೆಗಳು ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧರನ್ನಾಗಿ ಮಾಡಿತು. ವಿದ್ಯಾಭ್ಯಾಸ ಮುಗಿಸಿ ಸ್ವತಂತ್ರವಾಗಿ ದುಡಿದು ಬದುಕತೊಡಗಿದರು. ಆದರೆ ಕೆಲಸ ಮತ್ತು ಸಾಮಾನ್ಯ ಜೀವನ ಅವರಿಗೆ ಸಂತೋಷ ನೀಡಲಿಲ್ಲ. ಆದ್ದರಿಂದ ಅವರು ಅಥ್ಲೆಟಿಕ್ ಆಟಗಳು ಮತ್ತು ಪ್ಯಾರಾ ಪವರ್ಲಿಫ್ಟಿಂಗ್ ಆಟಗಳಲ್ಲಿ ಭಾಗವಹಿಸಲು ಆರಂಭಿಸಿ ಅನೇಕ ರಾಜ್ಯ ಪದಕಗಳನ್ನು ಗೆದ್ದರು, ಅಷ್ಟಕ್ಕೆ ಸಯಮ್ಮನಾಗಲಿಲ್ಲ.
ಗೋವಾದಲ್ಲಿ ಆಗಸ್ಟ್ 2 ರಿಂದ 5 ರವರೆಗೆ ನಡೆದ ರುಬರು ಮಿಸ್ಟರ್ ಇಂಡಿಯಾ 2023 ಪುರುಷರ ಸ್ಪರ್ಧೆಗೆ ಭಾರತದ ವಿವಿಧ ರಾಜ್ಯಗಳಿಂದ ಬಂದ 32 ಸ್ಪರ್ಧಿಗಳ ಪೈಕಿ ಆಯ್ಕೆಯಾದ ಗಾಲಿಕುರ್ಚಿಯ ಏಕೈಕ ಸ್ಪರ್ಧಿ ಅವರಾಗಿದ್ದರು. ಚೇತನ್ ಪ್ರಕಾರ, ಇದು ಜೀವನದಲ್ಲಿ ಅವರ ಮೊದಲ ಮಾಡೆಲಿಂಗ್ ಅನುಭವವಾಗಿದೆ, ಇದಕ್ಕಾಗಿ ಮಾರ್ಚ್ 2023 ರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಿ ಪ್ರಾರಂಭಿಸಿದರು, ಇದರಲ್ಲಿ ಆಡಿಷನ್ಗಳು, ಸಂದರ್ಶನಗಳು, ಫಿಟ್ನೆಸ್, ವ್ಯಕ್ತಿತ್ವ ಮತ್ತು ಪ್ರತಿಭಾ ಸುತ್ತುಗಳು ಸೇರಿದ್ದವು. ಅವರು ವೀಲ್ಚೇರ್ನಲ್ಲಿನ ಎಲ್ಲಾ ಅಡೆತಡೆಗಳನ್ನು ಸೋಲಿಸಿ ರುಬರು ಇಂಡಿಯಾ ವೆಸ್ಟ್ 2023 ಟೈಟಲ್ ತಮ್ಮದಾಗಿಸಿಕೊಂಡರು.
ರುಬರು ಮಿಸ್ಟರ್ ಇಂಡಿಯಾ ಟೈಟಲ್ ಹೋಲ್ಡರ್ ಆಗುವುದು ಒಂದು ಜವಾಬ್ದಾರಿಯಾಗಿದ್ದು, ಅವರು ದಿವ್ಯಾಂಗ ಜನರಲ್ಲಿ ಜಾಗೃತಿ ಮೂಡಿಸುವ ಕ್ಷೇತ್ರದಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ, ಅವರ ಶಿಕ್ಷಣ ಮತ್ತು ಅವರ ಪ್ರತಿಭೆ ಹೊರತರುವಲ್ಲಿ ಮಗ್ನರಾಗಿದ್ದಾರೆ. ದಿವ್ಯಾಂಗರ ಕನಸುಗಳನ್ನು ಸದೃಢ ಮನಸ್ಸಿನಿಂದ ಸಾಧಿಸಲು ಪ್ರೇರೇಪಿಸುತ್ತಿದ್ದಾರೆ. ಅವರು 2023 ರ ಮೋಸ್ಟ್ ಇನ್ಸ್ಪಿರೇಷನ್ ಪರ್ಸನಾಲಿಟಿ ಶೀರ್ಷಿಕೆ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿದ್ದಾರೆ.
ರುಬರು ಮಿಸ್ಟರ್ ಇಂಡಿಯಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಖರಬಂದ ಅವರು ತನ್ನ ಮೇಲೆ ನಂಬಿಕೆಯಿಟ್ಟು ಈ ಅವಕಾಶವನ್ನು ನೀಡಿದಕ್ಕಾಗಿ ಚೇತನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರಸ್ತುತ ಅವರು ಭವಿಷ್ಯದಲ್ಲಿನ ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಈ ನಡುವೆ ಗುಜರಾತ್ ರಾಜ್ಯಕ್ಕೆ ರುಬರು ಮಿಸ್ಟರ್ ಇಂಡಿಯಾ ಬಿರುದನ್ನು ತಂದಿದ್ದಕ್ಕಾಗಿ ಮತ್ತು ಈ ಸಾಧನೆಯಿಂದ “ಖತಿಯಾ” ಎಂಬ ಸಣ್ಣ ಗ್ರಾಮವನ್ನು ಹೆಮ್ಮೆಪಡುವಂತೆ ಮಾಡಿದಕ್ಕಾಗಿ ಅವರಿಗೆ ಗುಜರಾತ್ ರಾಜ್ಯದಾದ್ಯಂತ ಅನೇಕ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.