News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜ್ಯದ 10 ಜಿಲ್ಲೆಗಳ ಬಿಜೆಪಿ ನೂತನ ಕಾರ್ಯಾಲಯ ಉದ್ಘಾಟಿಸಿದ ಜೆ.ಪಿ ನಡ್ಡಾ

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಇಂದು ರಾಜ್ಯದ 10 ಜಿಲ್ಲೆಗಳ ನೂತನ ಕಾರ್ಯಾಲಯ ಭವನಗಳ ಉದ್ಘಾಟನೆ ಮತ್ತು 3 ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು,  ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಜೊತೆ ಬಿಜೆಪಿ ಜನರ ಮುಂದೆ ಹೋಗಲಿದೆ ಎಂದರು.

“ಸಮರ್ಥ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವ, ಯಡಿಯೂರಪ್ಪ, ಬೊಮ್ಮಾಯಿ ಅವರ ನೇತೃತ್ವದಲ್ಲಿ ದೇಶ ಮತ್ತು ರಾಜ್ಯದಲ್ಲಿ ಮಹಿಳಾ ಸಶಕ್ತೀಕರಣ ಕಾರ್ಯ ನಡೆಯಿತು. 12 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ ನಡೆಯಿತು” ಎಂದು ಅವರು ವಿವರಿಸಿದರು.

ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷ ರೂಪಾಯಿಯ ಸ್ವಾಸ್ಥ್ಯ ರಕ್ಷಣೆ ಲಭಿಸಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಹರ್ ಘರ್ ಜಲ್ (ನಲ್ಲಿ ನೀರು) ಲಭಿಸುತ್ತಿದೆ. ಉಜ್ವಲ ಯೋಜನೆಯಡಿ 9 ಕೋಟಿ ಸಿಲಿಂಡರ್ ಸಂಪರ್ಕ ಕೊಡಲಾಗಿದೆ ಎಂದು ತಿಳಿಸಿದರು.

ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಕರ್ನಾಟಕ ಸರಕಾರ ನೀಡಿದೆ. ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ. ಸಂಕಷ್ಟದಲ್ಲಿರುವ ಸಮಾಜದ ಎಲ್ಲರಿಗೂ ಯಡಿಯೂರಪ್ಪ- ಬೊಮ್ಮಾಯಿ ಸರಕಾರ ನೆರವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಕಾರ್ಯಕರ್ತರು ಜನರ ಕಡೆ ತೆರಳಬೇಕು. ಬಿಜೆಪಿ ಸಮಾಜದ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಗ್ಗೆ ಜನರಿಗೆ ತಿಳಿಸಬೇಕು. ಇತರ ಪಕ್ಷಗಳು ಭ್ರಷ್ಟಾಚಾರಕ್ಕಾಗಿಯೇ ಕೆಲಸ ಮಾಡುತ್ತಿವೆ ಎಂಬುದನ್ನು ಮನವರಿಕೆ ಮಾಡಬೇಕು ಎಂದು ವಿನಂತಿಸಿದರು.

ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರಾ ಮಾಡಿದ್ದರು. ಅದು ಭಾರತ್ ಜೋಡೋ ಯಾತ್ರೆ ಅಲ್ಲ, ಅದು ಪ್ರಾಯಶ್ಚಿತ್ತ ಯಾತ್ರೆ. ಇವರ ಪೂರ್ವಜರೇ ಭಾರತದ ಒಡೆಯುವಿಕೆಗೆ ಕಾರಣರಾಗಿದ್ದರು ಎಂದು ಟೀಕಿಸಿದರು. ದೇಶದ್ರೋಹಿಗಳ ಜೊತೆ ಅವರು ಯಾತ್ರೆ ಮಾಡಿದ್ದರು ಎಂದು ಆಕ್ಷೇಪಿಸಿದರು.

ವಿಕಾಸ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತೇ ಇಲ್ಲ. ಭ್ರಷ್ಟತೆಯೇ ಕಾಂಗ್ರೆಸ್ ಹಿನ್ನೆಲೆ ಮತ್ತು ಇತಿಹಾಸ. ಅದೇ ಇತಿಹಾಸವನ್ನು ಇಲ್ಲಿಯೂ ಕಾಂಗ್ರೆಸ್ಸಿಗರು ಹೊಂದಿದ್ದಾರೆ ಎಂದ ಅವರು, ಬಿಜೆಪಿಯನ್ನು ಬೆಂಬಲಿಸಿದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಕೋವಿಡ್‍ನಿಂದ ಚೀನಾ ಮುಕ್ತವಾಗಿಲ್ಲ. ಯುರೋಪ್‍ನಲ್ಲಿ, ಅಮೇರಿಕಾದಲ್ಲೂ ಇದೇ ಸ್ಥಿತಿ ಇದೆ. ಭಾರತವು ಎಲ್ಲರಿಗೂ ಕೋವಿಡ್ ಲಸಿಕೆ ನೀಡಿ ಕೋವಿಡ್‍ ಮುಕ್ತ ದೇಶವನ್ನಾಗಿ ಮಾಡಿದ್ದೇವೆ. ಬಿಜೆಪಿ ಸಾಧನೆಯ ಜೊತೆ ಮುನ್ನಡೆದಿದೆ. ಸಿದ್ದರಾಮಯ್ಯ ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆ ಎಂದು ಹೇಳಲು ಅವರಲ್ಲಿ ವಿಷಯವೇ ಇಲ್ಲ ಎಂದು ಟೀಕಿಸಿದರು. ಶಿವಕುಮಾರ್ ಅವರದೂ ಇದೇ ಸ್ಥಿತಿ ಎಂದರು. ವಂದೇ ಭಾರತ್ ರೈಲು ಭಾರತದ ವಿಕಾಸಕ್ಕೆ ಪೂರಕ ಎಂದು ಅವರು ತಿಳಿಸಿದರು.

ಕೆಂಪೇಗೌಡ ವಿಮಾನನಿಲ್ದಾಣ ಅಭಿವೃದ್ಧಿಗೆ ಗರಿಷ್ಠ ಮೊತ್ತ ಹಣವನ್ನು ಹೂಡಲಾಗಿದೆ. ನವ ಮಂಗಳೂರು ಬಂದರು ಅಭಿವೃದ್ಧಿಯು ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.

370ನೇ ವಿಧಿ ರದ್ದು, ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜಾರೋಹಣ, ತುಷ್ಟೀಕರಣ ಇಲ್ಲದೆ ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಕಡೆ ಬಿಜೆಪಿ ಮುನ್ನಡೆದಿದೆ. ಶಾಬಾನೊ ಕೇಸಿನ ವಿರೋಧ ಮಾಡಿದ ಬಿಜೆಪಿ ಅಯೋಧ್ಯೆಯಲ್ಲಿ ಮಂದಿರಕ್ಕಾಗಿ ಶಿಲಾನ್ಯಾಸ ನೆರವೇರಿಸಿದೆ ಎಂದು ವಿವರಿಸಿದರು.

ನಮ್ಮಲ್ಲಿ ಪಕ್ಷ ಎಂದು ಒಂದು ಕುಟುಂಬ. ಇತರ ಪಕ್ಷಗಳಲ್ಲಿ ಒಂದು ಕುಟುಂಬವೇ ಪಕ್ಷ ಎಂಬ ಸ್ಥಿತಿ ಇದೆ. ಭಾರತ ಜಿ20 ಅಧ್ಯಕ್ಷತೆ ವಹಿಸಿದೆ. ಇದು ಹೆಮ್ಮೆಯ ವಿಚಾರ ಎಂದು ತಿಳಿಸಿದರು. 2014ರಲ್ಲಿ ಮೋದಿಜಿ ಮತ್ತು ಅಮಿತ್ ಶಾ ಅವರು ಜಿಲ್ಲಾ ಸ್ವಂತ ಕಾರ್ಯಾಲಯದ ವಿಚಾರವನ್ನು ಮಂಡಿಸಿದ್ದರು. ಬಿಜೆಪಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಾಲಯ ಹೊಂದುವತ್ತ ಮುನ್ನಡೆದಿದೆ ಎಂದು ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top