ಶಬರಿಮಲೆ: ಎರಡು ತಿಂಗಳ ಕಾಲ ನಡೆಯುವ ವಾರ್ಷಿಕ ಮಂಡಲಂ-ಮಕರವಿಳಕ್ಕು ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಆವರಣ ಮತ್ತು ಅದರ ಸಮೀಪದ ಪ್ರದೇಶಗಳನ್ನು “ಮದ್ಯ ಮತ್ತು ಮಾದಕ ದ್ರವ್ಯ ಮುಕ್ತ ವಲಯ” ಎಂದು ಕೇರಳ ಸರ್ಕಾರ ಇಂದು ಘೋಷಿಸಿದೆ.
ಶಬರಿಮಲೆ ದೇಗುಲಕ್ಕೆ ದೇಶ ಮತ್ತು ಹೊರಗಿನ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ವಾರ್ಷಿಕ ಆಚರಣೆಯು ನವೆಂಬರ್ 17 ರಂದು ಪ್ರಾರಂಭವಾಗಿ ಜನವರಿ 15, 2023 ರಂದು ಮುಕ್ತಾಯಗೊಳ್ಳುತ್ತದೆ.
ದೇವಸ್ಥಾನ ಸಂಕೀರ್ಣ, ಪಂಬಾ, ತ್ರಿವೇಣಿ, ಮರಕೂಟಂ, ಶಬರಿ ಪೀಡಂ ಹೀಗೆ ಇಲ್ಲಿಯ ರನ್ನಿ ತಾಲೂಕಿನ ಪೆರಿನಾಡು ಮತ್ತು ಕೊಲ್ಲಮುಳ ಗ್ರಾಮಗಳ ಹಲವಾರು ಪ್ರದೇಶಗಳನ್ನು ಮದ್ಯ ಮತ್ತು ಮಾದಕ ದ್ರವ್ಯ ಮುಕ್ತ ವಲಯ ಎಂದು ಘೋಷಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಪ್ರದೇಶಗಳಲ್ಲಿ ನವೆಂಬರ್ 14 ರಿಂದ ಜನವರಿ 22, 2023 ರವರೆಗೆ ಮದ್ಯ, ಮಾದಕ ದ್ರವ್ಯಗಳು ಮತ್ತು ತಂಬಾಕು ಉತ್ಪನ್ನಗಳ ಸೇವನೆ ಮತ್ತು ಮಾರಾಟವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿದೆ.
ಶಬರಿಮಲೆ, ಪಂಬಾ, ನಿಲಕ್ಕಲ್ ಮತ್ತು ಪಕ್ಕದ ಪ್ರದೇಶಗಳಿಗೆ ಪ್ರವೇಶಿಸುವ ಯಾತ್ರಾರ್ಥಿಗಳು, ವ್ಯಾಪಾರಿಗಳೂ ಮತ್ತು ಇತರ ಎಲ್ಲ ಜನರು ಈ ನಿಟ್ಟಿನಲ್ಲಿ ಜಾಗರೂಕರಾಗಿರಬೇಕು ಎಂದು ಸೂಚನೆ ನೀಡಲಾಗಿದೆ.
ಮದ್ಯ ಮತ್ತು ಇತರೆ ಮಾದಕ ವಸ್ತುಗಳ ನಿಷೇಧದ ಕುರಿತು ವಿವಿಧೆಡೆ ಬಹುಭಾಷಾ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.
ನಿಷೇಧಾಜ್ಞೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಪೊಲೀಸ್, ಅಬಕಾರಿ ಮತ್ತು ಅರಣ್ಯ ಅಧಿಕಾರಿಗಳ ತಂಡ ಸಜ್ಜಾಗಿದೆ.
ಪಂಬಾ ಮೂಲದ ಅಬಕಾರಿ ನಿಯಂತ್ರಣ ಕೊಠಡಿಯು ನವೆಂಬರ್ 14 ರಿಂದ ಸಹಾಯಕ ಅಬಕಾರಿ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.