ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಇಂದು ಗುಂಡಿನ ದಾಳಿ ನಡೆದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ಲಾಹೋರ್ನಿಂದ ಇಸ್ಲಾಮಾಬಾದ್ಗೆ ಮೆರವಣಿಗೆ ನಡೆಸುತ್ತಿದ್ದ ಸಂದರ್ಭ ವಜೀರಾಬಾದ್ನಲ್ಲಿ ರ್ಯಾಲಿ ಆಯೋಜಿಸಿದ್ದಾಗ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ 6 ಜನರು ಗಾಯಗೊಂಡಿದ್ದಾರೆ ಮತ್ತು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಗುಂಡು ಹಾರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ರ್ಯಾಲಿ ಮೇಲೆ ಗುಂಡಿನ ದಾಳಿ ನಡೆಸಿದ ಉದ್ದೇಶವನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಇಮ್ರಾನ್ ಖಾನ್ ಗುರುವಾರ ವಜೀರಾಬಾದ್ ಪ್ರದೇಶದಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಇದೇ ವೇಳೆ ಇಮ್ರಾನ್ ಖಾನ್ ಅವರ ಕಂಟೈನರ್ ಬಳಿ ಗುಂಡಿನ ದಾಳಿ ನಡೆಸಲಾಯಿತು. ಈ ಘಟನೆಯಲ್ಲಿ ಗುಂಡು ತಗುಲಿ ಇಮ್ರಾನ್ ಖಾನ್ ಗಾಯಗೊಂಡಿದ್ದಾರೆ. ಅವರ ಆಪ್ತ ಸಹಾಯಕರಾದ ಇಮ್ರಾನ್ ಇಸ್ಮಾಯಿಲ್, ಫೈಸಲ್ ಜಾವೇದ್ ಸೇರಿದಂತೆ 5 ಬೆಂಬಲಿಗರಿಗೂ ಗುಂಡು ಹಾರಿಸಲಾಗಿದ್ದು, ಅವರೂ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ನಂತರ ಇಮ್ರಾನ್ ಖಾನ್ ಬೆಂಬಲಿಗರು ಅವರನ್ನು ಬುಲೆಟ್ ಪ್ರೂಫ್ ಕಾರಿನಲ್ಲಿ ಹಾಕಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅವರು ಗಾಯಗೊಂಡಿದ್ದರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಗೊಂಡಿದ್ದ ಇಮ್ರಾನ್ ಖಾನ್ ಅವರ ಬೆಂಬಲಿಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ದಾಳಿಕೋರನು ಎಕೆ-47 ರೈಫಲ್ನಿಂದ ಗುಂಡು ಹಾರಿಸಿದ್ದು, ಇಮ್ರಾನ್ ಖಾನ್ ಅವರ ಕಾಲಿಗೆ ಅನೇಕ ಗಾಯಗಳಾಗಿವೆ. ಅವರ ಕಾಲಿಗೆ ಪ್ಲಾಸ್ಟರ್ ಹಾಕಲಾಗಿದ್ದು, ಕುಂಟುತ್ತಿರುವುದು ಕಂಡು ಬಂದಿದೆ. ದಾಳಿಯ ನಂತರ ಹೇಳಿಕೆ ನೀಡಿರುವ ಅವರು ಆಸ್ಪತ್ರೆಯ ಹೊರಗೆ ತನ್ನ ಅನುಯಾಯಿಗಳತ್ತ ಕೈ ಬೀಸಿ, ಹಿಂತಿರುಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.