ದೊಡ್ಡಬಳ್ಳಾಪುರ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಜನರಲ್ಲಿ ಬೇದಭಾವ ಮಾಡಿತ್ತು. ಪಕ್ಷಪಾತದ ಧೋರಣೆ ಅನುಸರಿಸಿತ್ತು, ಅದು ಕರ್ನಾಟಕಕ್ಕೆ ಹಣಕಾಸು ಆಯೋಗದ ಮೂಲಕ ಕೊಟ್ಟಿದ್ದು ಕೇವಲ 2 ಸಾವಿರ ಕೋಟಿ ರೂಪಾಯಿ. ಈಗ ಕೇಂದ್ರದ ನಮ್ಮ ಸರ್ಕಾರ ರಾಜ್ಯಕ್ಕೆ ಹಣಕಾಸು ಆಯೋಗದಿಂದ 5 ಸಾವಿರ ಕೋಟಿ ರೂ ಅನುದಾನ ಕೊಟ್ಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಜನಸ್ಪಂದನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,
ಕರ್ನಾಟಕದ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ 2022 ರಲ್ಲಿ ರಸ್ತೆ 9,700 ಕೋಟಿ ರೂ ಅನುದಾನ ಕೊಟ್ಟಿದೆ. ಕಳೆದ ಏಳು ವರ್ಷಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ 37 ಸಾವಿರ ಕೋಟಿ ರೂ ಕೊಡಲಾಗಿದೆ. ಭಾರತ್ ಮಾಲಾ ಯೋಜನೆ ಮೂಲಕ 55 ಸಾವಿರ ಕೋಟಿ ಕೊಡುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.
ನಮ್ಮ ಸರ್ಕಾರ ಬಂದ ನಂತರ 1600 ಕಿ.ಮೀ. ರೈಲ್ವೇ ಮಾರ್ಗ ನಿರ್ಮಾಣಗೊಂಡಿದೆ. 30 ವರ್ಷದ ಬಳಿಕ ಶಿಕ್ಷಣ ನೀತಿ ಬದಲಾಗಿದೆ. ನೂತನ ಶಿಕ್ಷಣ ನೀತಿ ಜಾರಿಯಲ್ಲಿ ಕರ್ನಾಟಕ ಮೊದಲ ರಾಜ್ಯ, ಇದಕ್ಕಾಗಿ ಬೊಮ್ಮಾಯಿ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
“ರಾಹುಲ್ ಗಾಂಧಿ ಭಾರತ್ ಜೋಡಿಸುತ್ತಿಲ್ಲ, ಭಾರತವನ್ನು ತುಂಡರಿಸುವ ಯಾತ್ರೆ ಮಾಡುತ್ತಿದ್ದಾರೆ. ಸರ್ದಾರ್ ಪಟೇಲ್ ಭಾವಚಿತ್ರವನ್ನೂ ಅವರ ಯಾತ್ರೆಯಲ್ಲಿ ಹಾಕಿಲ್ಲ. ಕನ್ಯಾಕುಮಾರಿಯಿಂದ ಭಾರತ್ ಜೋಡೋ ಮಾಡಿದ್ದರು. ಆದರೆ ವಿವೇಕಾನಂದರನ್ನೂ ಕನಿಷ್ಟ ಸ್ಮರಿಸಲಿಲ್ಲ” ಎಂದಿದ್ದಾರೆ
ಭಾರತದ ವಿರುದ್ಧ ಘೋಷಣೆ ಕೂಗಿದವರನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಸಿಕೊಂಡಿದ್ದಾರೆ ಎಂದಿದ್ದಾರೆ.
“ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರು ಹೇಡಿಗಳು. ಅವರ ಉದ್ದೇಶ ಆತಂಕ ಸೃಷ್ಟಿಸುವುದೇ ಆಗಿತ್ತು. ದೇಶಕ್ಕಾಗಿ ಪ್ರವೀಣ್ ರಕ್ತ ಕೊಟ್ಟಿದ್ದಾನೆ. ಆತಂಕವಾದಿ ಯಾಕೂಬ್ ಮೈಮೋನ್ ಸಮಾಧಿಯನ್ನು ಕಾಂಗ್ರೆಸ್ ಸರ್ಕಾರ ಇರುವ ರಾಜ್ಯದಲ್ಲಿ ಸೌಂದರ್ಯೀಕರಣ ಮಾಡಲಾಗಿತ್ತು. ಇದನ್ನು ಪ್ರಶ್ನಿಸಲು ರಾಹುಲ್ ಗಾಂಧಿಗೆ ಧೈರ್ಯ ಇಲ್ಲ” ಎಂದಿದ್ದಾರೆ.
“ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಗಾಂಧಿ ಕುಟುಂಬದ ಗುಲಾಮರು ಮಹಿಳಾ ರಾಷ್ಟ್ರ ಪತಿ ವಿರುದ್ಧ ಟೀಕೆ, ನಿಂದನೆ ಮಾಡಿದ್ದರು” ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ನಮ್ಮದಾಗಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಅಸಮರ್ಪಕ ಆಡಳಿತವನ್ನು ಜನತೆ ಪ್ರಶ್ನಿಸಬೇಕು. ಕರ್ನಾಟಕದ ಬಗ್ಗೆ ಪಕ್ಷಪಾತದ ಧೋರಣೆಯನ್ನು ಜನರು ಪ್ರಶ್ನಿಸಬೇಕು ಎಂದರಲ್ಲದೆ, ಮೋದಿ ಮತ್ತು ಬಿಜೆಪಿ ಸರಕಾರವು ಕರ್ನಾಟಕಕ್ಕೆ ಗರಿಷ್ಠ ಅನುದಾನ ನೀಡಿದೆ ಎಂದು ವಿವರಿಸಿದರು.
ರಸ್ತೆ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಗರಿಷ್ಠ ಅನುದಾನವನ್ನು ಬಿಜೆಪಿಯ ಕೇಂದ್ರ ಸರಕಾರ ನೀಡಿದೆ. ಕೇಂದ್ರದ ವಿವಿಧ ಯೋಜನೆಗಳಡಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಅನನ್ಯ ಎಂದು ಅವರು ವಿವರ ಕೊಟ್ಟರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ರೈಲ್ವೆ ಇಲಾಖೆಯೂ ಕರ್ನಾಟಕವನ್ನು ಕಡೆಗಣಿಸಿತ್ತು. ಆದರೆ, ಬಿಜೆಪಿ ಗರಿಷ್ಠ ಅನುದಾನವನ್ನು ನೀಡಿದೆ ಎಂದರು.
ಕರ್ನಾಟಕಕ್ಕೆ ಗರಿಷ್ಠ ಎಫ್ಡಿಐ ಲಭಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ಕರ್ನಾಟಕ ಸೆಮಿ ಕಂಡಕ್ಟರ್ ಹಬ್ ಆಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ರಾಹುಲ್ ಗಾಂಧಿ ಭಾರತ್ ಜೋಡೋ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟಗಾರರನ್ನು ಕಡೆಗಣಿಸಿತ್ತು ಎಂದು ಟೀಕಿಸಿದರು.
ಪ್ರಧಾನಿಯವರು ರಾಜಪಥ ಹೆಸರನ್ನು ಕರ್ತವ್ಯಪಥ ಎಂದು ಬದಲಿಸಿದ್ದಾರೆ. ಆದರೆ, ಗಾಂಧಿ ಕುಟುಂಬವು ಗುಲಾಮತನದ ಸಂಕೇತವನ್ನೇ ಇಟ್ಟುಕೊಂಡಿತ್ತು ಎಂದು ಆಕ್ಷೇಪ ಸೂಚಿಸಿದರು. ಕೋವಿಡ್ ಲಸಿಕೆ ಉಚಿತವಾಗಿ ನೀಡಿದ ವಿಚಾರವನ್ನೂ ಅವರು ವಿವರಿಸಿದರು. ಆದರೆ, ಗಾಂಧಿ ಕುಟುಂಬವು ಜನರಿಗೆ ಲಸಿಕೆ ಪಡೆಯದಂತೆ ತಿಳಿಸುವ ಷಡ್ಯಂತ್ರ ಮಾಡಿತ್ತು ಎಂದು ಟೀಕಿಸಿದರು. ಭಾರತ ಇಬ್ಬಾಗ ಮಾಡುವ ಘೋಷಣೆ ಕೂಗಿದ ವ್ಯಕ್ತಿಗಳನ್ನು ಜೊತೆಗೂಡಿಸಿಕೊಂಡು ರಾಹುಲ್ ಅವರು ತಮ್ಮ ಯಾತ್ರೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದು ರಾಷ್ಟ್ರದ್ರೋಹ ಎಂದು ತಿಳಿಸಿದರು. ರಾಹುಲ್ ಗಾಂಧಿ ಕುಟುಂಬವು ಅಧಿಕಾರದಾಹವನ್ನು ಹೊಂದಿದೆ ಎಂದು ಟೀಕಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಚಮಚಾಗಳು ಅವಮಾನ ಮಾಡಿದ್ದರು ಎಂದು ಅವರು ನುಡಿದರು. ಕಾಂಗ್ರೆಸ್ ಪಕ್ಷದ ಚಿಂತನೆಯನ್ನು ಇಲ್ಲಿನ ಜನರು ಪ್ರಶ್ನಿಸಬೇಕು ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.