News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

8 ವರ್ಷಗಳಲ್ಲಿ ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ 10 ಪಟ್ಟು ವೃದ್ಧಿಯಾಗಿದೆ: ಮೋದಿ

ನವದೆಹಲಿ: 2014ರ ಮೊದಲು 40 ಕೋಟಿ ಲೀಟರ್‌ನಷ್ಟು ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು, ಈಗ ಈ ಪ್ರಮಾಣ 400 ಕೋಟಿ ಲೀಟರ್‌ಗೆ 10 ಪಟ್ಟು ಏರಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ.

ಉತ್ತರ ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಹಿಮ್ಮತ್‌ನಗರ ಪಟ್ಟಣದ ಬಳಿ ಸಬರ್ ಡೈರಿಯ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣದಿಂದ ರೈತರ ಆದಾಯವೂ ಹೆಚ್ಚಾಗಿದೆ ಎಂದರು.

ಸಬರ್ ಡೈರಿಯು ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ (GCMMF) ನ ಒಂದು ಭಾಗವಾಗಿದೆ, ಇದು ಅಮುಲ್ ಬ್ರಾಂಡ್‌ನಡಿಯಲ್ಲಿ ಡೈರಿ ಮತ್ತು ಹಾಲಿನ ಉತ್ಪನ್ನಗಳನ್ನು  ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.

2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಕಳೆದ ಎಂಟು ವರ್ಷಗಳಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ತಮ್ಮ ಸರ್ಕಾರ ನಡೆಸಿದ ನಿರಂತರ ಪ್ರಯತ್ನಗಳು ಈಗ ಫಲಿತಾಂಶವನ್ನು ತೋರಿಸುತ್ತಿವೆ ಎಂದು ಮೋದಿ ಹೇಳಿದರು.

ಕಬ್ಬು ಮತ್ತು ಜೋಳದಂತಹ ಕೃಷಿ ಉತ್ಪನ್ನಗಳಿಂದ ಎಥೆನಾಲ್ ಅನ್ನು ಪಡೆಯಲಾಗಿರುವುದರಿಂದ ಎಥೆನಾಲ್ ಅನ್ನು ಪೆಟ್ರೋಲ್‌ಗೆ ಬೆರೆಸುವ ಸರ್ಕಾರದ ನಿರ್ಧಾರವು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

”ಇಂದು ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣದ ಪ್ರಮಾಣ ಶೇ.10ಕ್ಕಿಂತ ಹೆಚ್ಚಿದೆ. ಎಥೆನಾಲ್ ಕಬ್ಬು ಮತ್ತು ಜೋಳದಿಂದ ಬರುತ್ತದೆ. 2014ರ ಮೊದಲು ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣ 40 ಕೋಟಿ ಲೀಟರ್ ಗಿಂತ ಕಡಿಮೆ ಇತ್ತು. ಇಂದು ಅದು 400 ಕೋಟಿ ಲೀಟರ್‌ಗೆ ಏರಿದೆ” ಎಂದು ಮೋದಿ ಭಾಷಣದಲ್ಲಿ ಹೇಳಿದರು.

ಕೃಷಿಯಲ್ಲದೆ, ಜಾನುವಾರು ಸಾಕಣೆ, ತೋಟಗಾರಿಕೆ, ಮೀನುಗಾರಿಕೆ ಮತ್ತು ಜೇನು ಉತ್ಪಾದನೆಯಂತಹ ಸಂಬಂಧಿತ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸಹ ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

”ಕಳೆದ ಎಂಟು ವರ್ಷಗಳ ಕೇಂದ್ರದ ನಿರಂತರ ಪ್ರಯತ್ನದಿಂದಾಗಿ ಇಂದು ರೈತರ ಆದಾಯ ಹೆಚ್ಚಾಗಿದೆ. ಇದರಿಂದ ಭೂರಹಿತ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚು ಲಾಭವಾಗಿದೆ,” ಎಂದು ಪ್ರಧಾನಿ ಹೇಳಿದರು.

”ಆದಾಯದ ಪರ್ಯಾಯ ಮೂಲಗಳ ಮೇಲೆ ಕೇಂದ್ರೀಕರಿಸುವ ನಮ್ಮ ಕಾರ್ಯತಂತ್ರವು ಫಲಿತಾಂಶಗಳನ್ನು ತೋರಿಸುತ್ತಿದೆ. ಪ್ರಥಮ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗದ ವಹಿವಾಟು 1 ಲಕ್ಷ ಕೋಟಿ ರೂ. ದಾಟಿದೆ” ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರವು ಕಳೆದ ಎಂಟು ವರ್ಷಗಳಲ್ಲಿ ಹಳ್ಳಿಗಳ 1.5 ಕೋಟಿ ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

ಕೇಂದ್ರವು ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಜಾಗತಿಕ ಬೆಲೆಗಳು ಹಲವಾರು ಪಟ್ಟು ಹೆಚ್ಚಾಗಿದ್ದರೂ ಸಹ ರಸಗೊಬ್ಬರಗಳ ಮೇಲೆ ಯಾವುದೇ ಬೆಲೆ ಏರಿಕೆಯನ್ನು ಹೇರಿಲ್ಲ ಎಂದರು.

”ನಾವು ಬೇರೆ ದೇಶಗಳಿಂದ ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತೇವೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಬೆಲೆಗಳು ಹಲವು ಪಟ್ಟು ಹೆಚ್ಚಿದ್ದರೂ, ನಾವು ಆ ಹೊರೆಯನ್ನು ರೈತರಿಗೆ ವರ್ಗಾಯಿಸಿಲ್ಲ. 50 ಕೆಜಿ ಯೂರಿಯಾ ಚೀಲಕ್ಕೆ ಸರಕಾರ 3,500 ರೂ ನೀಡುತ್ತದೆ. ಆದರೆ, ನಾವು ಅದನ್ನು ರೈತರಿಗೆ ಕೇವಲ 300 ರೂ.ಗೆ ಮಾರಾಟ ಮಾಡುತ್ತೇವೆ” ಎಂದು ಮೋದಿ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top