ನವದೆಹಲಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೆಹಲಿಯ 800 ವಿದ್ಯಾರ್ಥಿಗಳು ಮತ್ತು 60 ಶಿಕ್ಷಕರು ಭಾಗಿಯಾಗಿದ್ದು, ದೇಶದಾದ್ಯಂತ ಇರುವ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಯೊಂದಿಗೆ ಮಾತನಾಡಿದರು.
ದೆಹಲಿಯ ಮಾಣಿಕ್ಷಾ ಆಡಿಟೋರಿಯಂನಲ್ಲಿ ಬೆಳಿಗ್ಗೆ 10 ಗಂಟೆಯಿಂದ 11.15ರ ವರೆಗೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದಲ್ಲಿ ನೇರ ಪ್ರಸಾರ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಶಿಕ್ಷಕರ ದಿನದಂದು ವಿದ್ಯಾರ್ಥಿಗಳೊಂದಿಗೆ ಯಾಕೆ ಸಂವಾದ ನಡೆಸುತ್ತೀರಿ ಎಂದು ಕೆಲವರು ನನ್ನನ್ನು ಕೇಳುತ್ತಾರೆ, ಆಗ ನಾನು ವಿದ್ಯಾರ್ಥಿಗಳು ಶಿಕ್ಷಕರ ಗುರುತು ಎನ್ನುತ್ತೇನೆ. ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ, ಶಿಕ್ಷಕರು ಮಗುವಿಗೆ ಜೀವನ ನೀಡುತ್ತಾರೆ. ಎಳವೆಯಲ್ಲಿ ಮಕ್ಕಳು ಹೆಚ್ಚು ಪ್ರಭಾವಕ್ಕೊಳಗಾಗುತ್ತಾರೆ. ಶಿಕ್ಷಕರು ಹೇಳಿದ್ದನ್ನು ಜೀವನಪೂರ್ತಿ ನೆನಪಿಟ್ಟುಕೊಳ್ಳುತ್ತಾರೆ’ ಎಂದರು.
ಎಪಿಜೆ ಅಬ್ದುಲ್ ಕಲಾಂ ಅವರು ಮಕ್ಕಳನ್ನು ಅತೀವವಾಗಿ ಪ್ರೀತಿಸುತ್ತಿದ್ದರು, ಅವರು ಶಿಕ್ಷಕರಾಗಿ ಗುರುತಿಸಲ್ಪಡಲು ಬಯಸುತ್ತಿದ್ದರು. ಪ್ರತಿ ವಿಜ್ಞಾನಿ, ವೈದ್ಯೆ, ಎಂಜಿನಿಯರ್ನ ಹಿಂದೆ ಒಬ್ಬ ಶ್ರೇಷ್ಠ ಗುರು ಇರಬೇಕು ಎಂದರು.
ಮೋದಿ ಭಾಷಣದ ಬಳಿಕ ವಿದ್ಯಾರ್ಥಿಗಳು ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಮೌಂಟ್ ಎವರೆಸ್ಟ್ನ್ನು ಏರಿದ ಅತಿ ಕಿರಿಯ ಬಾಲಕಿ ಮಲ್ವತ್ ಪುರ್ಣ ಅವರು ಮೊದಲ ಪ್ರಶ್ನೆಯನ್ನು ಕೇಳಿದರು.
ವಿವಿಧ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳ ಬಗೆಗಿನ ಸಣ್ಣ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು, ಆ ವಿದ್ಯಾರ್ಥಿಗಳೂ ಮೋದಿಗೆ ಪ್ರಶ್ನೆಗಳನ್ನು ಕೇಳಿದರು.
ಈ ವೇಳೆ ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞ, ವಿದ್ವಾಂಸ ಡಾ.ಸರ್ವಪಳ್ಳಿ ರಾಧಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ 125 ರೂ. ಮತ್ತು 10 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಲಾಯಿತು.
ಅಲ್ಲದೇ ಶಿಕ್ಷಣವನ್ನು ಪ್ರಚುರಪಡಿಸುವ ಸಲುವಾಗಿ ಎಚ್ಆರ್ಡಿ ಸಚಿವಾಲಯ ರಚಿಸಿರುವ ‘ಕಲಾ ಉತ್ಸವ್’ಎಂಬ ವೆಬ್ಸೈಟ್ಗೆ ಚಾಲನೆ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.