ಹಂಪಿ: ಕೇಂದ್ರ ಸಂಸ್ಕೃತಿ ಸಚಿವಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ ಎಸ್ ಐ) ಯು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಫೆಬ್ರವರಿ 25 ಮತ್ತು 26 ರಂದು ಕರ್ನಾಟಕದ ಹಂಪಿಯಲ್ಲಿ ಆಯೋಜಿಸಿರುವ ಎರಡು ದಿನಗಳ ಭಾರತೀಯ ದೇವಾಲಯಗಳ ವಾಸ್ತುಶಿಲ್ಪ ಕುರಿತ ‘ದೇವಾಯತನಂ’’ ಅಂತರರಾಷ್ಟ್ರೀಯ ಸಮ್ಮೇಳನ ನಿನ್ನೆ ಪ್ರಾರಂಭವಾಯಿತು.
ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಸಮ್ಮೇಳನವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, “ದೇವಾಲಯಗಳು ಭಾರತದ ಸಂಸ್ಕೃತಿ ಮತ್ತು ಜೀವನ ವಿಧಾನದ ಪ್ರತೀಕವಾಗಿವೆ. ದೇಶದ ಶ್ರೀಮಂತವಾದ ಮೂರ್ತ ಮತ್ತು ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಮತ್ತು ರಕ್ಷಿಸುವ ಅಗತ್ಯವಿದೆ” ಎಂದು ಅವರು ಹೇಳಿದರು.
“ಈ ಸಮ್ಮೇಳನವು ಭಾರತೀಯ ದೇವಾಲಯಗಳು, ಕಲೆ ಮತ್ತು ವಾಸ್ತುಶಿಲ್ಪದ ಭವ್ಯತೆಯನ್ನು ಜಗತ್ತಿಗೆ ತಿಳಿಸಲು ಮತ್ತು ಪ್ರಸಾರ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 5 ‘ವಿ’ ಗಳ ಒಟ್ಟಾರೆ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಅವುಗಳೆಂದರೆ, ವಿಕಾಸ್ (ಅಭಿವೃದ್ಧಿ), ವಿರಾಸತ್ (ಪರಂಪರೆ), ವಿಶ್ವಾಸ್ (ನಂಬಿಕೆ), ವಿಜ್ಞಾನ್ (ವಿಜ್ಞಾನ). ಇವು ನಮ್ಮನ್ನು ವಿಶ್ವಗುರುವಾಗುವಂತೆ ಮಾಡುತ್ತವೆ, ಇದರಿಂದ ಭಾರತವು ಜಗತ್ತಿಗೆ ದಾರಿ ತೋರಿಸುತ್ತದೆ” ಎಂದು ಅವರು ಹೇಳಿದರು.
ಈ ನೆಲದ ದೇವಾಲಯಗಳನ್ನು ಬಹು ಆಯಾಮಗಳಿಂದ ನೋಡಬೇಕು ಎಂದ ಸಚಿವರು, ಇವು ಏಕಕಾಲದಲ್ಲಿ ಆತ್ಮಕ್ಕೆ ಆಧ್ಯಾತ್ಮಿಕ ಯೋಗಕ್ಷೇಮ, ಶಿಕ್ಷಣದಿಂದ ಜ್ಞಾನೋದಯ, ಸ್ಥಳೀಯ ಸಮುದಾಯಕ್ಕೆ ಆರ್ಥಿಕ ಅವಕಾಶಗಳು, ಕುಶಲಕರ್ಮಿಗಳು, ಕಲಾವಿದರು ಮತ್ತು ಕುಶಲಕರ್ಮಿಗಳಿಗೆ ಸೃಜನಶೀಲ ಅವಕಾಶಗಳನ್ನು ಒದಗಿಸುತ್ತಿವೆ. ಇವು ನಮ್ಮ ಸಂಸ್ಕೃತಿಯ ಭಂಡಾರವಾಗಿವೆ ಮತ್ತು ನಮ್ಮ ಗತಕಾಲದ ವೈಭವವನ್ನು ಸಾರುತ್ತಿವೆ ಎಂದು ಹೇಳಿದರು. ಹಿಂದೂ ದೇವಾಲಯಗಳು ಶಿಲ್ಪಶಾಸ್ತ್ರ, ವಾಸ್ತು ಶಾಸ್ತ್ರ, ಜ್ಯಾಮಿತಿ ಮತ್ತು ಸಮ್ಮಿತಿಗಳನ್ನು ಒಳಗೊಂಡಿರುವ ಕಲೆ ಮತ್ತು ವಿಜ್ಞಾನದ ಸಂಯೋಜನೆಗಳಾಗಿವೆ ಎಂದು ಅವರು ಹೇಳಿದರು. ದೇವಾಲಯಗಳು ಏಕತೆ, ಸಮಗ್ರತೆ ಮತ್ತು ನಾಗರಿಕತೆಯನ್ನು ಉತ್ತೇಜಿಸುತ್ತವೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಕಲ್ಪಗಳು ದೇವಾಲಯದ ಅಗ್ನಿಯ ಬಳಿಯೇ ಆಗುತ್ತಿದ್ದವು ಎಂದು ಅವರು ಹೇಳಿದರು.
ಹಂಪಿಯ ದೇವಾಲಯಗಳು ತಮ್ಮ ತೇಜಸ್ಸು, ಕಲ್ಪನೆ ಮತ್ತು ಅದ್ಭುತ ವಾಸ್ತುಶಿಲ್ಪದಿಂದಾಗಿ ಈಗಾಗಲೇ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿವೆ ಎಂದು ಅವರು ಹೇಳಿದರು. ಭಾರತದ 40 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸುಮಾರು 10 ವಿವಿಧ ವಾಸ್ತುಶಿಲ್ಪ ಶೈಲಿಗಳು, ಮಾದರಿಗಳ ಹಿಂದೂ ದೇವಾಲಯಗಳಾಗಿವೆ ಎಂದು ಅವರು ಹೇಳಿದರು.
ಈ ವರ್ಷ ಕೇಂದ್ರ ಸರ್ಕಾರವು ಬೇಲೂರು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಲ್ಲದೆ ಭಾರತವು ಅನೇಕ ಭವ್ಯವಾದ ದೇವಾಲಯಗಳನ್ನು ಪುನರ್ನಿರ್ಮಿಸುತ್ತಿದೆ ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮನ ಭವ್ಯ ಮಂದಿರದ ಕುರಿತು ಸಚಿವರು ಮಾತನಾಡಿದರು. ಸುಮಾರು 250 ವರ್ಷಗಳ ನಂತರ, ಭಾರತದ ಆಧ್ಯಾತ್ಮಿಕ ರಾಜಧಾನಿ – ಕಾಶಿಯು ಪುನರುಜ್ಜೀವಗೊಂಡಿದೆ ಮತ್ತು ಭಕ್ತರಿಗೆ ಸೌಲಭ್ಯಗಳು ಮತ್ತು ಉತ್ತಮ ಮೂಲಸೌಕರ್ಯಗಳೊಂದಿಗೆ ಹೆಚ್ಚಿನ ಪ್ರವೇಶವನ್ನು ನೀಡುತ್ತಿದೆ ಎಂದರು. ತೆಲಂಗಾಣ ರಾಜ್ಯವು 1,000 ಕೋಟಿ ರೂ. ಮೌಲ್ಯದ 2 ಬೃಹತ್ ಶಿಲಾ ದೇವಾಲಯಗಳನ್ನು ನಿರ್ಮಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕೇಂದ್ರ ಸರ್ಕಾರದ ಗಮನವು ಅಸ್ತಿತ್ವದಲ್ಲಿರುವ ಆಧ್ಯಾತ್ಮಿಕ ಸ್ಥಳಗಳನ್ನು ಉತ್ತಮ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ಸೌಕರ್ಯಗಳ ಮೂಲಕ ಭಕ್ತರಿಗೆ ಲಭ್ಯವಾಗುವಂತೆ ಮಾಡುವುದಾಗಿದೆ ಎಂದರು.
ಪ್ರವಾಸೋದ್ಯಮ ಮೂಲಸೌಕರ್ಯವನ್ನು ಸುಗಮಗೊಳಿಸಲು ಮತ್ತು ಆಧ್ಯಾತ್ಮಿಕ ಸ್ಥಳಗಳಲ್ಲಿ ಉತ್ತಮ ಪ್ರವೇಶ ಮತ್ತು ಅನುಭವವನ್ನು ಒದಗಿಸಲು ಪ್ರವಾಸೋದ್ಯಮ ಸಚಿವಾಲಯವು 7,000 ಕೋಟಿ ರೂ. ಅಂದರೆ ಸರಿಸುಮಾರು 1 ಬಿಲಿಯನ್ ಡಾಲರ್.ವೆಚ್ಚದಲ್ಲಿ ಪ್ರಸಾದ್ ಮತ್ತು ಸ್ವದೇಶ ದರ್ಶನ್ ಯೋಜನೆಯನ್ನು ರೂಪಿಸಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ಕರ್ನಾಟಕದ ಸಚಿವರು, ಎಎಸ್ಐ ಅಧಿಕಾರಿಗಳು ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಭಾರತದ ದೇವಾಲಯಗಳ ಮಾಹಿತಿ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.