ಬೆಂಗಳೂರು: ಪಕ್ಷದೊಳಗಿನ ನಾಯಕತ್ವ ಬಿಕ್ಕಟ್ಟನ್ನು ಮರೆ ಮಾಚಿ ಹುಸಿ ಒಗ್ಗಟ್ಟನ್ನು ಪ್ರದರ್ಶಿಸಲು ಕಾಂಗ್ರೆಸ್ ನಾಯಕರು ಸದನವನ್ನು ದುರುಪಯೋಗ ಪಡಿಸಿಕೊಳ್ಳವ ಹುನ್ನಾರ ನಡೆಸಿದ್ದಾರೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಪ್ರಯತ್ನಿಸಿದ ನಾಗರಿಕರನ್ನು ಗುಂಡಿಟ್ಟು ಕೊಂದ ಇತಿಹಾಸ ಹೊಂದಿರುವ ಕಾಂಗ್ರೆಸ್ ನಾಯಕರು ಅದೇ ರಾಷ್ಟ್ರ ಧ್ವಜವನ್ನು ಧ್ವಜ ಸಂಹಿತೆಗೆ ವಿರುದ್ಧವಾಗಿ ಸದನದಲ್ಲಿ ಪ್ರದರ್ಶಿಸಿದ್ದಾರೆ. ರಾಷ್ಟ್ರ ಧ್ವಜವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಬಳಸಿಕೊಂಡಿರುವುದು, ಆ ಪಕ್ಷದ ದುರ್ಬಲ ಸ್ಥಿತಿಯನ್ನು ಪ್ರತಿಫಲಿಸುತ್ತದೆ” ಎಂದು ಅಭಿಪ್ರಾಯ ವ್ಯಕ್ತಡಿಸಿದರು.
ಸಚಿವ ಕೆ ಎಸ್ ಈಶ್ವರಪ್ಪರವರಂಥ ಅಪ್ಪಟ ರಾಷ್ಟ್ರ ಪ್ರೇಮಿ ಹಾಗೂ ನಾಯಕರನ್ನು ಗುರಿಯಾಗಿಟ್ಟುಕೊಂಡು, ಕೆಸರೆರುಚುವ ವ್ಯರ್ಥ ಪ್ರಯತ್ನ ಬಿಟ್ಟು, ಕಾಂಗ್ರೆಸ್ ಶಾಸಕರು, ಸದನದ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.
ಗೌರವಾನ್ವಿತ ರಾಜ್ಯಪಾಲರು, ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ಸಾಂವಿಧಾನಿಕ ಕರ್ತವ್ಯ ನಿರ್ವಹಣೆ, ಜನರ ಕುಂದು ಕೊರತೆಗಳ ನಿವಾರಣೆಗೆ ಬೆಳಕು ಚಲ್ಲುವಂತಹ ವೇದಿಕೆಯನ್ನು, ರಾಜಕೀಯ ಅಂಗಳ ವನ್ನಾಗಿ ಮಾಡುತ್ತಿರುವುದು ವಿಷಾದನೀಯ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಹಿಜಾಬ್ ವಿಷಯವನ್ನು ಕೆಲವು ಮತೀಯ ಸಂಘಟನೆಗಳು, ಸಮಾಜ ಒಡೆಯುವ ಅಸ್ತ್ರವನ್ನಾಗಿ ಮಾಡಿಕೊಳ್ಳುವುದನ್ನು ಸಹಿಸುವುದಿಲ್ಲ. ಇದರ ಹಿಂದಿರುವ ಷಡ್ಯಂತ್ರವನ್ನು ಪೊಲೀಸರು, ಬಯಲುಗೊಳಿಸುತ್ತಾರೆ ಹಾಗೂ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.