ನವದೆಹಲಿ: ಜನರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಮತ್ತು ಪ್ರತಿ ಮತ ಕೂಡ ಅತ್ಯಮೂಲ್ಯ ಎಂಬುದನ್ನು ಮನದಟ್ಟು ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯ ಬಿಜೆಪಿ ಕಾರ್ಯಕರ್ತರೊಂದಿಗೆ ಇಂದು ಅವರು ಸಂವಾದ ನಡೆಸಿ ಮಾತನಾಡಿದರು.
ವಾರಣಾಸಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿದ ಅವರು, ನಗರವನ್ನು ಸ್ವಚ್ಛವಾಗಿಡುವಂತೆ ಕೇಳಿಕೊಂಡರು. ಪಕ್ಷಕ್ಕಾಗಿ ಪ್ರಚಾರ ಮಾಡುವಾಗ ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅವರು ಮನವಿ ಮಾಡಿದರು. ಹೊಸ ಕಾಶಿ ವಿಶ್ವನಾಥ ಧಾಮವನ್ನು ನೋಡಲು ಬರುವ ಜನರನ್ನು ಪಕ್ಷದ ಕಾರ್ಯಕರ್ತರು ನಗರದ ಇತರ ಪ್ರಮುಖ ಸ್ಥಳಗಳಾದ ಕಬೀರ್ ಚೌರಾ ಮತ್ತು ಸಂತ ರವಿದಾಸ್ ದೇವಸ್ಥಾನಗಳಿಗೆ ಕರೆದೊಯ್ಯಬೇಕು, ಈ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಏನು ಮಾಡಿದೆ ಎಂಬುದನ್ನು ಅವರು ನೋಡಬಹುದು ಎಂದಿದ್ದಾರೆ.
“ಪ್ರತಿ ಮತ ಕೂಡ ಅತ್ಯಮೂಲ್ಯವಾಗಿದೆ, ಮತದಾನದ ಮಹತ್ವದ ಬಗ್ಗೆ ನಾವು ಜನರಿಗೆ ಅರಿವು ಮೂಡಿಸಬೇಕಾಗಿದೆ” ಎಂದಿದ್ದಾರೆ.
ಚುನಾವಣಾ ಆಯೋಗವು 5 ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ದಿನಾಂಕವನ್ನು ಘೋಷಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷದ ಕಾರ್ಯಕರ್ತರನ್ನು ಒಳಗೊಂಡ ಮೊದಲ ರಾಜಕೀಯ ಸಂವಾದ ಇದಾಗಿದೆ.
ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಜನವರಿ 22 ರವರೆಗೆ ಯಾವುದೇ ರೀತಿಯ ರೋಡ್ ಶೋ, ಸಮಾವೇಶ, ಪಾದಯಾತ್ರೆಗಳನ್ನು ನಿಷೇಧ ಮಾಡಿದೆ.
ಫೆಬ್ರವರಿ 10ರಿಂದ ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಘೋಷಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.