ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು, ಬಾಕಿ ಇರುವ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು 2022ರ ಸೆಪ್ಟೆಂಬರ್ ವರೆಗೆ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ-1 ಮತ್ತು 2ರ ಮುಂದುವರಿಸಬೇಕೆಂಬ ಗ್ರಾಮೀಣಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಸ್ತಾವನೆಗಳಿಗೆ ತನ್ನ ಅನುಮೋದನೆ ನೀಡಿದೆ.
ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಿಗೆ (ಆರ್.ಸಿಪಿಎಲ್.ಡಬ್ಲ್ಯುಇಎ) ರಸ್ತೆ ಸಂಪರ್ಕ ಯೋಜನೆಯನ್ನು ಮಾರ್ಚ್ 2023ರವರೆಗೆ ಮುಂದುವರಿಸಲೂ ಸಿಸಿಇಎ ತನ್ನ ಅನುಮೋದನೆ ನೀಡಿದೆ.
ಭಾರತ ಸರ್ಕಾರವು, ರಸ್ತೆ ಸಂಪರ್ಕ ಇಲ್ಲದ 500+ ಜನಸಂಖ್ಯೆ ಇರುವ ಸಾಧಾರಣ ಪ್ರದೇಶಗಳು ಮತ್ತು 250+ ಜನಸಂಖ್ಯೆಯಿರುವ ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳ ಜನವಸತಿಗಳಿಗೆ ಸಂಪರ್ಕ ಒದಗಿಸಲು ಪಿಎಂಜಿಎಸ್ ವೈ-1 ಅನ್ನು ಪ್ರಾರಂಭಿಸಿದೆ. ಆಯ್ದ ಎಡಪಂಥೀಯ ಉಗ್ರವಾದ ವಿಭಾಗಗಳಲ್ಲಿ, 100+ ಜನಸಂಖ್ಯೆಯ ಜನವಸತಿಗಳಿಗೂ ಸಂಪರ್ಕವನ್ನು ಒದಗಿಸಲಾಗುತ್ತಿದೆ. ಒಟ್ಟು 1,84,444 ಜನವಸತಿಗಳ ಪೈಕಿ ಕೇವಲ 2,432 ಜನವಸತಿ ಪ್ರದೇಶಗಳು ಮಾತ್ರ ಈಗ ಬಾಕಿ ಇವೆ. ಒಟ್ಟು ಮಂಜೂರಾದ 6,45,627 ಕಿ.ಮೀ ಉದ್ದದ ರಸ್ತೆ ಮತ್ತು 7,523 ಸೇತುವೆಗಳ ಪೈಕಿ 20,950 ಕಿ.ಮೀ ಉದ್ದದ ರಸ್ತೆ ಮತ್ತು 1,974 ಸೇತುವೆಗಳು ಮಾತ್ರ ಪೂರ್ಣಗೊಳ್ಳಲು ಬಾಕಿ ಇವೆ. ಹೀಗಾಗಿ, ಈ ಕಾಮಗಾರಿಗಳು ಈಗ ಪೂರ್ಣಗೊಳ್ಳಲಿವೆ.
ಪಿಎಂಜಿಎಸ್ ವೈ-2ರ ಅಡಿಯಲ್ಲಿ 50,000 ಕಿ.ಮೀ ಗ್ರಾಮೀಣ ರಸ್ತೆ ಜಾಲವನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಒಟ್ಟು 49,885 ಕಿ.ಮೀ ಉದ್ದದ ರಸ್ತೆ ಮತ್ತು 765 ಎಲ್.ಎಸ್.ಬಿಗಳನ್ನು ಮಂಜೂರು ಮಾಡಲಾಗಿದೆ, ಅವುಗಳಲ್ಲಿ 4,240 ಕಿ.ಮೀ ಉದ್ದದ ರಸ್ತೆ ಮತ್ತು 254 ಸೇತುವೆಗಳು ಮಾತ್ರ ಬಾಕಿ ಇವೆ. ಹೀಗಾಗಿ, ಈ ಕಾಮಗಾರಿಗಳು ಈಗ ಪೂರ್ಣಗೊಳ್ಳಲಿವೆ.
ಕೋವಿಡ್ ಲಾಕ್ ಡೌನ್, ವ್ಯಾಪಕ ಮಳೆ, ಚಳಿಗಾಲ, ಅರಣ್ಯ ಸಮಸ್ಯೆಗಳಂತಹ ಅಂಶಗಳಿಂದಾಗಿ ಪಿಎಂಜಿಎಸ್ ವೈ-1 ಮತ್ತು 2 ರ ಅಡಿಯಲ್ಲಿ ಬಾಕಿ ಇರುವ ಹೆಚ್ಚಿನ ಕಾಮಗಾರಿಗಳು ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಲ್ಲಿವೆ. ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ಈ ನಿರ್ಣಾಯಕ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯ ವಿಸ್ತರಣೆಗಾಗಿ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವಿನಂತಿಸಿವೆ. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈ ರಾಜ್ಯಗಳಿಗೆ ಸಹಾಯ ಮಾಡಲು ಸೆಪ್ಟೆಂಬರ್, 2022ರವರೆಗೆ ಕಾಲಾವಧಿಯನ್ನು ವಿಸ್ತರಿಸಲಾಗುತ್ತಿದೆ.
ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳ ರಸ್ತೆ ಸಂಪರ್ಕ ಯೋಜನೆಯನ್ನು (ಆರ್.ಸಿಪಿಎಲ್.ಡಬ್ಲ್ಯುಇಎ) 2016ರಲ್ಲಿ 9 ರಾಜ್ಯಗಳ 44 ಎಲ್.ಡಬ್ಲ್ಯು.ಇ ಬಾಧಿತ ಜಿಲ್ಲೆಗಳಲ್ಲಿ ಸಂಪರ್ಕ ಸುಧಾರಣೆಗಾಗಿ ಪ್ರಾರಂಭಿಸಲಾಯಿತು. 5,714 ಕಿ.ಮೀ ಉದ್ದದ ರಸ್ತೆ 358 ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳಲು ಬಾಕಿ ಉಳಿದಿವೆ ಮತ್ತು ಇನ್ನೂ 1,887 ಕಿ.ಮೀ ಉದ್ದದ ರಸ್ತೆ ಮತ್ತು 40 ಸೇತುವೆಗಳನ್ನು ಮಂಜೂರು ಮಾಡಲಾಗುತ್ತಿದೆ. ಸಂವಹನ ಮತ್ತು ಭದ್ರತಾ ದೃಷ್ಟಿಯಿಂದಿಂದ ಬಹಳ ನಿರ್ಣಾಯಕವಾಗಿರುವ ಈ ಯೋಜನೆಗಳನ್ನು ಪೂರ್ಣಗೊಳಿಸಲು ಈ ಯೋಜನೆಯನ್ನು ಮಾರ್ಚ್, 2023 ರವರೆಗೆ ವಿಸ್ತರಿಸಲಾಗುತ್ತಿದೆ.
ಗ್ರಾಮೀಣ ರಸ್ತೆಗಳ ನಿರ್ಮಾಣದಲ್ಲಿ ಹೊಸ ಮತ್ತು ಹಸಿರು ತಂತ್ರಜ್ಞಾನದ ಬಳಕೆಯನ್ನು ಪಿಎಂಜಿಎಸ್.ವೈ ಉತ್ತೇಜಿಸುತ್ತದೆ. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ರಸ್ತೆ ನಿರ್ಮಾಣದಲ್ಲಿ ವೆಚ್ಚ- ದಕ್ಷ ಮತ್ತು ವೇಗದ ನಿರ್ಮಾಣವನ್ನು ಉತ್ತೇಜಿಸುವ ಸಲುವಾಗಿ ಬಳಸಲಾಗುತ್ತದೆ. ಇಲ್ಲಿಯವರೆಗೆ ಹೊಸ ಮತ್ತು ಹಸಿರು ತಂತ್ರಜ್ಞಾನವನ್ನು ಬಳಸಿಕೊಂಡು 1 ಲಕ್ಷ ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 61,000 ಕಿ.ಮೀ.ಗೂ ಹೆಚ್ಚು ಪೂರ್ಣಗೊಂಡಿದೆ. ಉತ್ತರ ಪ್ರದೇಶ ರಾಜ್ಯಕ್ಕೆ ಇತ್ತೀಚೆಗೆ ಪೂರ್ಣ ಆಳ ಸುಧಾರಣೆ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಾಣಕ್ಕಾಗಿ 1,255 ಕಿ.ಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿದೆ, ಇದು ವೆಚ್ಚ ಮತ್ತು ಸಮಯವನ್ನು ದೊಡ್ಡ ರೀತಿಯಲ್ಲಿ ಉಳಿಸುವುದಲ್ಲದೆ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುತ್ತದೆ ಮತ್ತು ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡುತ್ತದೆ.
ನಿರ್ಮಾಣ ಮತ್ತು ನಿರ್ಮಾಣದ ನಂತರದ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಪಿಎಂಜಿಎಸ್.ವೈ ಮೂರು ಹಂತದ ಗುಣಮಟ್ಟ ಖಾತ್ರಿ ವ್ಯವಸ್ಥೆಯನ್ನು ರೂಪಿಸುತ್ತದೆ. ಉತ್ತಮ ಗುಣಮಟ್ಟದ ನಿರ್ವಹಣೆಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಗುಣಮಟ್ಟದ ನಿಗಾ ಸಂಖ್ಯೆಯನ್ನು ಮತ್ತು ತಪಾಸಣೆಗಳ ತೀವ್ರತೆಯನ್ನು ಹೆಚ್ಚಿಸಲಾಗಿದೆ. ತೃಪ್ತಿಕರ ಕಾಮಗಾರಿಗಳ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಗೆ ಸಾಕ್ಷಿಯಾಗಿದೆ.
2025ರ ಮಾರ್ಚ್ ವೇಳೆಗೆ 1,25,000 ಕಿ.ಮೀ ಉದ್ದದ ರಸ್ತೆಯ ಬಲವರ್ಧನೆಗಾಗಿ ಸರ್ಕಾರ 2019ರಲ್ಲಿ ಪಿಎಂಜಿಎಸ್ ವೈ-3 ಅನ್ನು ಪ್ರಾರಂಭಿಸಿತು. ಪಿಎಂಜಿಎಸ್ ವೈ-3 ರ ಅಡಿಯಲ್ಲಿ ಈವರೆಗೆ ಸುಮಾರು 72,000 ಕಿ.ಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿದೆ, ಇದರಲ್ಲಿ 17,750 ಕಿ.ಮೀ ಪೂರ್ಣಗೊಂಡಿದೆ.
ಪಿಎಂಜಿಎಸ್.ವೈ.ನ ಎಲ್ಲಾ ಪ್ರಸ್ತುತ ಕಾಮಗಾರಿಗಳನ್ನು ಪೂರ್ಣಗೊಳಿಸಲು 2021-22 ರಿಂದ 2024-25 ರವರೆಗೆ ರಾಜ್ಯದ ಪಾಲೂ ಸೇರಿದಂತೆ ಒಟ್ಟು 1,12,419 ಕೋಟಿ ರೂ. ವೆಚ್ಚ ಮಾಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.