ಅಲಹಾಬಾದ್: ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮ ಮತ್ತು ಕೃಷ್ಣ, ಮಹಾನ್ ಗ್ರಂಥಗಳಾದ ರಾಮಾಯಣ ಮತ್ತು ಭಗವದ್ಗೀತೆ ಮತ್ತು ಅದನ್ನು ಬರೆದ ವಾಲ್ಮೀಕಿ ಮತ್ತು ವೇದವ್ಯಾಸರುಗಳಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಕಾನೂನನ್ನು ತರುವ ಅವಶ್ಯಕತೆಯಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಅವರುಗಳು ದೇಶದ ಸಂಸ್ಕೃತಿ ಮತ್ತು ಪರಂಪರೆ ಎಂದು ಹೈಕೋರ್ಟ್ ಅಭಿಪ್ರಾಯಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕಾಗಿ ದಾಖಲಾಗಿರುವ ಪ್ರಕರಣದ ಆರೋಪಿ ಹತ್ರಾಸ್ನ ಆಕಾಶ್ ಜಾತವ್ ಎಂಬಾತನ ಜಾಮೀನು ಅರ್ಜಿಯನ್ನು ಆಲಿಸುವಾಗ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಜಾತವ್ ಕಳೆದ 10 ತಿಂಗಳುಗಳಿಂದ ಜೈಲಿನಲ್ಲಿರುವುದನ್ನು ಪರಿಗಣಿಸಿ ನ್ಯಾಯಾಲಯವು ಜಾಮೀನಿಗೆ ಅನುಮತಿ ನೀಡಿದೆ. ಆತನ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ.
“ಸಂಸತ್ತಿನಲ್ಲಿ ರಾಮ, ಶ್ರೀಕೃಷ್ಣ, ರಾಮಾಯಣ, ಗೀತೆ ಮತ್ತು ಅದರ ಲೇಖಕರಾದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದ ವ್ಯಾಸರಿಗೆ ರಾಷ್ಟ್ರೀಯ ಗೌರವ ನೀಡುವ ಕಾನೂನನ್ನು ತರಬೇಕು, ಏಕೆಂದರೆ ಅವರು ದೇಶದ ಸಂಸ್ಕೃತಿ ಮತ್ತು ಪರಂಪರೆಯಾಗಿದ್ದಾರೆ”ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
“ದೇಶಾದ್ಯಂತ ಶಾಲೆಗಳಲ್ಲಿ ಕಡ್ಡಾಯವಾಗಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ” ಎಂದು ಹೈಕೋರ್ಟ್ ಅಭಿಪ್ರಾಯಿಸಿದೆ.
ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಭಗವಾನ್ ರಾಮನನ್ನು ನಂಬುವವರ ಪರವಾಗಿ ತನ್ನ ನಿರ್ಧಾರವನ್ನು ನೀಡಿದೆ. “ರಾಮ ಭಾರತದ ಆತ್ಮ ಮತ್ತು ಸಂಸ್ಕೃತಿ ಮತ್ತು ರಾಮನಿಲ್ಲದೆ ಭಾರತ ಅಪೂರ್ಣ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ವಿರುದ್ಧದ ಆರೋಪಗಳ ಉಲ್ಲೇಖಿಸಿದ ನ್ಯಾಯಾಧೀಶರು, ಅನೇಕ ದೇಶಗಳಲ್ಲಿ ಇಂತಹ ನಡವಳಿಕೆಗೆ ಕಠಿಣ ಶಿಕ್ಷೆಯ ಅವಕಾಶವಿದೆ ಎಂದಿದ್ದಾರೆ.
ಇಂತಹ ವಿಷಯಗಳಲ್ಲಿ ಅಶ್ಲೀಲ ಟೀಕೆ ಮಾಡುವ ಬದಲು ಅವರು ತಾವು ವಾಸಿಸುವ ದೇಶದ ದೇವತೆಗಳು ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ನ್ಯಾಯಾಲಯವು ಹೇಳಿದೆ.
“ಭಾರತದ ಸಂವಿಧಾನವು ಒಬ್ಬ ನಾಸ್ತಿಕನಾಗಲು ಅವಕಾಶ ನೀಡುತ್ತದೆ, ಆದರೆ ದೇವರು ಮತ್ತು ದೇವತೆಗಳ ವಿರುದ್ಧ ಅಶ್ಲೀಲ ಹೇಳಿಕೆಗಳನ್ನು ನೀಡಬಹುದು ಎಂದು ಇದರ ಅರ್ಥವಲ್ಲ” ಎಂದು ನ್ಯಾಯಮೂರ್ತಿ ಯಾದವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.