ನವದೆಹಲಿ: ಪಂಜಾಬ್, ಛತ್ತಿಸ್ಗಢ ಮತ್ತು ಕೇರಳ ಕಾಂಗ್ರೆಸ್ನಲ್ಲಿ ಮೂಡಿರುವ ಬಿರುಕಿಗೆ ತೇಪೆ ಹಾಕುವುದರಲ್ಲಿ ಪಕ್ಷದ ನಾಯಕತ್ವ ಬ್ಯುಸಿಯಾಗಿದೆ. ಈ ನಡುವೆ ಅದರ ನಾಯಕ ದಿಗ್ವಿಜಯ್ ಸಿಂಗ್ ಅವರು ಏಕಾಏಕಿ ಕೇಂದ್ರ ಗೃಹಸಚಿವ ಅಮಿತ್ ಶಾ , ಆರ್ಎಸ್ಎಸ್ ಬಗ್ಗೆ ಹೊಗಳಿಕೆಯನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಭೋಪಾಲದಲ್ಲಿ ನಿನ್ನೆ ನಡೆದ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, ಅಮಿತ್ ಷಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ, ನಾಲ್ಕು ವರ್ಷಗಳ ಹಿಂದಿನ ನರ್ಮದ ಪರಿಕ್ರಮದ ತಮ್ಮ ಅನುಭವಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
“ನರ್ಮದ ಪರಿಕ್ರಮ ಯಾತ್ರೆಯ ಸಂದರ್ಭದಲ್ಲಿ ರಾತ್ರಿ ವೇಳೆ ಗುಜರಾತ್ ತಲುಪಿದಾಗ ಅರಣ್ಯ ಪ್ರದೇಶದಲ್ಲಿ ಮುಂದೆ ಹೋಗಲು ದಾರಿ ಇರಲಿಲ್ಲ ಮತ್ತು ರಾತ್ರಿ ತಂಗಲು ಸೌಲಭ್ಯವಿರಲಿಲ್ಲ. ಆ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ಆಗಮಿಸಿದರು ಮತ್ತು ನಮ್ಮೊಂದಿಗೆ ಸಹಕರಿಸುವಂತೆ ಅಮಿತ್ ಶಾ ಅವರು ನನಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು, ಇದು ನಮಗೆ ಅಚ್ಚರಿ ಮೂಡಿಸಿತು” ಎಂದಿದ್ದಾರೆ.
ಕುಗ್ರಾಮ ಪ್ರದೇಶವಾದರೂ ಅಲ್ಲಿ ಅಮಿತ್ ಶಾ ಅವರ ನಿರ್ದೇಶನದಂತೆ ಆಹಾರ ಮತ್ತು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಅದು ಗುಜರಾತ್ ಚುನಾವಣೆಯ ಸಂದರ್ಭವಾಗಿತ್ತು ಮತ್ತು ನಾನು ಅಮಿತ್ ಶಾ ಅವರ ದೊಡ್ಡ ಟೀಕಾಕಾರನಾಗಿದ್ದೆ. ಆದರೂ ಶಾ ಅವರು ನಾವು ನಮ್ಮ ಯಾತ್ರೆಯನ್ನು ಸುರಕ್ಷಿತವಾಗಿ ಕೈಗೊಳ್ಳಲು ಸಹಾಯ ಮಾಡಿದರು ಎಂದಿದ್ದಾರೆ.
ಅಮಿತ್ ಶಾ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲವಾದರೂ, ಅವರಿಗೆ ನಾನು ಕೃತಜ್ಞತೆಗಳನ್ನು ತಿಳಿಸಿದೆ ಎಂದಿರುವ ದಿಗ್ವಿಜಯ್ ಸಿಂಗ್, ರಾಜಕೀಯ ವಿರೋಧಿಗಳು ಪರಸ್ಪರ ಯಾವ ರೀತಿ ಗೌರವಪೂರ್ವಕವಾಗಿ ಇರಬೇಕು ಎಂಬುದನ್ನು ಅಮಿತ್ ಶಾ ಅವರ ನಡೆ ತೋರಿಸಿಕೊಟ್ಟಿದೆ ಎಂದಿದ್ದಾರೆ.
ಆರ್ಎಸ್ಎಸ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್, ನರ್ಮದಾ ಪರಿಕ್ರಮ ಯಾತ್ರೆಯ ಸಂದರ್ಭದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ನನ್ನನ್ನು ನಿರಂತರವಾಗಿ ಭೇಟಿಯಾಗುತ್ತಿದ್ದರು ಮತ್ತು ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದರು ಎಂದಿದ್ದಾರೆ. ಅಲ್ಲದೆ ಗುಜರಾತಿನ ಬರುಚಾ ಪ್ರದೇಶದಲ್ಲಿ ಮನ್ಜಿಹಿ ಸಮುದಾಯ ನಡೆಸುತ್ತಿದ್ದ ಧರ್ಮಶಾಲಾದಲ್ಲಿ ರಾತ್ರಿ ತಂಗಲು ನನಗೆ ಆರೆಸ್ಸೆಸ್ ಕಾರ್ಯಕರ್ತರು ಸಹಾಯ ಮಾಡಿದ್ದರು ಎಂದಿದ್ದಾರೆ. ಆರ್ಎಸ್ಎಸ್ ಸ್ವಯಂಸೇವಕರು ನೀಡಿದ ಆದಿತ್ಯ ಮತ್ತು ಕಾಳಜಿ ನನಗೆ ಆಶ್ಚರ್ಯ ಉಂಟು ಮಾಡಿತು, ನೀವು ಯಾಕೆ ಇಷ್ಟೊಂದು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ನಾನು ಪ್ರಶ್ನೆ ಕೇಳಿದೆ. ಅದಕ್ಕೆ ಉತ್ತರಿಸಿದ ಅವರು, ದಿಗ್ವಿಜಯ್ ಸಿಂಗ್ ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವಂತೆ ಹಿರಿಯರು ನಿರ್ದೇಶನ ನೀಡಿದ್ದಾರೆ ಎಂದರು.
ಸದಾ ಬಿಜೆಪಿ ಮತ್ತು ಅದರ ನಾಯಕರ ಮೇಲೆ ವಾಗ್ದಾಳಿ ನಡೆಸುತ್ತಿರುವ ದಿಗ್ವಿಜಯ್ ಸಿಂಗ್ ಅವರು ಮೊದಲ ಬಾರಿಗೆ ಅಮಿತ್ ಶಾ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದು ಅಚ್ಚರಿ ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.