ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಕಾ. ಶ್ರೀ. ನಾಗರಾಜ್ ಅವರ ರಚನೆಯ “ಧರ್ಮ ಸಂರಕ್ಷಕ ಶ್ರೀ ಕೃಷ್ಣ” ಪುಸ್ತಕವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ಲೋಕಾರ್ಪಣೆ ಮಾಡಿದರು.
ಜಯನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಪುಸ್ತಕವನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಅವರು ನಮ್ಮ ರಕ್ಷಣೆಯಲ್ಲಿ ಕೃಷ್ಣನ ಪ್ರೇರಣೆಯ ಬಗ್ಗೆ ವಿವರಿಸುತ್ತಾ ಶಕ್ತಿ ಸಾಮರ್ಥ್ಯಗಳ ಜೊತೆ ನಿಸ್ವಾರ್ಥತೆ ಮುಖ್ಯ ಎಂಬುದು ಅರಿಯಬಹುದು ಎಂದು ಆರ್ಥೈಸಿದರು. ಸಮಾಜದಲ್ಲಿ ಆದರ್ಶ ನಾಗರಿಕರಿಗೆ ಶ್ರೀ ಕೃಷ್ಣನೇ ಮಾರ್ಗದರ್ಶನ ಎಂದು ಅಭಿಪ್ರಾಯಪಡುತ್ತಾ ಸಮಾಜದಲ್ಲಿ ವಿಚಾರ ನಿಷ್ಠೆಗೆ ಮಹತ್ವ ಇರಬೇಕೇ ಹೊರತು ವ್ಯಕ್ತಿಗಲ್ಲ ಎಂದು ತಿಳಿಸಿದರು. ಶ್ರೇಷ್ಠ ನಾಯಕರಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಇರಬೇಕಾದ ಮುಖ್ಯ ಗುಣಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿ, ಪ್ರೇರೇಪಿಸುವ ಕೌಶಲ್ಯ, ಧ್ಯೇಯ ನಿಷ್ಠೆ, ಸ್ವಾರ್ಥರಹಿತ ಪರಿಶ್ರಮದ ಬದುಕು ಎಂಬುದನ್ನು ಶ್ರೀ ಕೃಷ್ಣನಿಂದ ಕಲಿಯ ಬೇಕಾದ ಮುಖ್ಯ ವಿಚಾರಗಳು ಎಂದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸರಣಿ ಪುರಸ್ಕೃತರು ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅವರು ಪಾಲ್ಗೊಂಡು ಶ್ರೀ ಕೃಷ್ಣನು ಚೈತನ್ಯ ಸ್ವರೂಪ, ಆತ್ಮವಿಶ್ವಾಸದ ಸಂಕೇತ, ಭಾರತೀಯ ಸಂಸ್ಕೃತಿಯಲ್ಲಿ ಮುಖ್ಯ ಪಾತ್ರ ಎಂದು ತಿಳಿಸುತ್ತಾ ಈ ಪುಸ್ತಕವು ಭಗವದ್ಗೀತೆಯಷ್ಟು ಸಾರ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಮುಖ್ಯ ಅತಿಥಿ ವಿಜಯವಾಣಿ ಪತ್ರಿಕೆಯ ಸಂಪಾದಕ ಕೆ. ಎನ್. ಚೆನ್ನೆಗೌಡ ಅವರು ಪುಸ್ತಕದ ಮಹತ್ವವನ್ನು ಹೇಳುತ್ತಾ ಶ್ರೀ ಕೃಷ್ಣನ ಆದರ್ಶಗಳು ಇಂದಿನ ದಿನಗಳಲ್ಲಿ ಮುಖ್ಯ ಹಾಗೂ ಈ ಪುಸ್ತಕ ಸಮಾಜಕ್ಕೆ ಮಾರ್ಗ ದರ್ಶನ ನೀಡಲಿ ಎಂದರು.
ಎಸ್. ಎಸ್. ಶ್ರೀನಾಥ್ ಅವರು ಈ ಪುಸ್ತಕದ ಪ್ರಕಾಶಕರಾಗಿದ್ದಾರೆ. ಕಾ. ಶ್ರೀ. ನಾಗರಾಜ್ ಅವರು ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿ ವಿಚಾರಗಳಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ಈ ವರೆಗೂ ಬರೆದಿರುತ್ತಾರೆ.
ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಸೀಮಿತ ಆಹ್ವಾನಿತರೊಂದಿಗೆ ನಡೆದ ಸಮಾರಂಭವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.