ಬೆಂಗಳೂರು: ಮೇಕೆದಾಟು ಯೋಜನೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು. ರಾಜಕೀಯವಾಗಿ ಯಾವುದೇ ಪಕ್ಷ ಇದರ ದುರ್ಬಳಕೆ ಮಾಡಬಾರದು. ಎರಡು ದೇಶಗಳ ನೀರಿನ ಹಂಚಿಕೆ ಸುಗಮವಾಗಿ ನಡೆಯುತ್ತದೆ. ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆ; ಅದರಲ್ಲೂ ಕುಡಿಯುವ ನೀರಿನ ಹಂಚಿಕೆಯ ಸಮಸ್ಯೆ ಪರಿಹಾರ ಕಷ್ಟವೇನಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಹೊರಗಿನಿಂದ ಬಂದ ಶೇ 72ರಷ್ಟು ಜನ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಶೇ 70ಕ್ಕಿಂತ ಹೆಚ್ಚು ಜನ ಮಹಾರಾಷ್ಟ್ರದಿಂದ ಹೊರಗಿನವರು ಮುಂಬೈಯಲ್ಲೂ ವಾಸವಿದ್ದಾರೆ. ಚೆನ್ನೈಯಲ್ಲಿ ಶೇ 50ಕ್ಕೂ ಹೆಚ್ಚು ಹೊರರಾಜ್ಯಗಳ ಜನರು ನೆಲೆಸಿದ್ದಾರೆ. ಕುಡಿಯುವ ನೀರಿನ ವಿಚಾರವನ್ನು ಎರಡು ರಾಜ್ಯಗಳ ನಡುವಿನ ಸಂಘರ್ಷ ಎಂಬಂತೆ ಭಾವನಾತ್ಮಕವಾಗಿ ನೋಡಬಾರದು. ಅದನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು ಎಂದು ಅಭಿಪ್ರಾಯಪಟ್ಟರು.
ಕುಡಿಯುವ ನೀರು ಎಲ್ಲರಿಗೂ ಅವಶ್ಯಕ. ಈ ವಿಷಯದಲ್ಲಿ ರಾಜಕಾರಣ ಸಲ್ಲದು. ಬೆಂಗಳೂರಿನಲ್ಲಿ ಶೇ 15 ರಿಂದ 16 ಮಂದಿ ತಮಿಳುನಾಡಿನಿಂದ ಬಂದವರು ಇದ್ದಾರೆ. ಅವರಿಗೆ ಕುಡಿಯುವ ನೀರು ಕೊಡುವುದಿಲ್ಲ ಎನ್ನಲಾದೀತೇ ಎಂದು ಅವರು ಪ್ರಶ್ನಿಸಿದರು. ಈ ನೆಲೆಗಟ್ಟಿನಲ್ಲಿ ವಿಷಯ ಮನವರಿಕೆ ಮಾಡಬೇಕು ಎಂದು ಆಶಿಸಿದರು. ಕುಡಿಯುವ ನೀರಿನ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣಕ್ಕೆ ಅವಕಾಶವಿಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಯಬೇಕಾದ ವಿಚಾರ ಎಂದು ಅವರು ನುಡಿದರು.
ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿ ಹಲವು ತೀರ್ಪುಗಳು ಬಂದಿವೆ. ಆ ತೀರ್ಪಿನ ವ್ಯಾಪ್ತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ. ಆ ತೀರ್ಪನ್ನು ಮೀರಿದರೆ ವ್ಯಾಜ್ಯ ಆಗುತ್ತದೆ. ಕರ್ನಾಟಕವು ತೀರ್ಪಿನನ್ವಯ ಯೋಜನೆ ರೂಪಿಸಿದರೆ ಅದರಿಂದ ಏನೂ ಸಮಸ್ಯೆ ಆಗಲಾರದು. ಈ ಮಾತನ್ನು ತಮಿಳುನಾಡಿನಲ್ಲೂ ಹೇಳುತ್ತೇನೆ ಎಂದು ತಿಳಿಸಿದರು.
ಇಂದಿರಾ ಗಾಂಧಿ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 1984 ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18 ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮತ್ತು ದುಡ್ಡು ಹೊಡೆಯಲು ಮಾಡಿದ ನಿರ್ಧಾರ. ಬದ್ಧತೆಗಾಗಿ ಅಲ್ಲ ಎಂದು ತಿಳಿಸಿದ ಅವರು, 89- 94, 1999-2006, 2013 ರಿಂದ 2017 ರ ನಡುವೆ ಕಾಂಗ್ರೆಸ್ ಸರಕಾರ ಇದ್ದರೂ ಯಾಕೆ ಇಂದಿರಾ ಕ್ಯಾಂಟೀನ್ ತೆರೆದಿಲ್ಲ ಎಂದು ಪ್ರಶ್ನಿಸಿದರು. ಇಂದಿರಾ ಗಾಂಧಿ ಅವರ ಎಲ್ಲ ನಿರ್ಧಾರಗಳನ್ನು ವಿರೋಧಿಸುವ ಪೂರ್ವಗ್ರಹ ಪೀಡಿತ ಮನಸ್ಥಿತಿ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.
ದೇಶಕ್ಕೆ ನೆಹರೂ, ಇಂದಿರಾ ಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಅವರ ಗುಲಾಮರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಸ್ವಾತಂತ್ರ್ಯ ಲಭಿಸಲು ಅವರು ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಮೂರ್ಖರು ಮತ್ತು ಗುಲಾಮರು ಮಾತ್ರ ಒಪ್ಪಿಕೊಳ್ಳುತ್ತಾರೆ. ಆದರೆ, ನಾವು ಮೂರ್ಖರು ಮತ್ತು ಗುಲಾಮರಲ್ಲ ಎಂದು ನುಡಿದರು.
217 ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೇ ಎಂದು ಕೇಳಿದ ಅವರು, ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ. ದುರ್ಭಿಕ್ಷ ಬಂದಾಗ ಅನ್ನ ಕೊಡುವ ತಾಯಿ ಅವಳು. ಅದಕ್ಕೇ ಅನ್ನಪೂರ್ಣೇಶ್ವರಿ ಹೆಸರು ಇಡಲು ಹೇಳಿದ್ದೇನೆ. ನಾನೇನಾದರೂ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಹೆಸರು ಇಡಲು ಹೇಳಿದರೆ ಅದು ರಾಜಕಾರಣ ಆಗುತ್ತಿತ್ತು ಎಂದರು. ಬಡವರಿಗೆ ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಅನ್ನ ಕೊಟ್ಟರೇನು? ಇಂದಿರಾ ಹೆಸರಲ್ಲಿ ಅನ್ನ ಕೊಟ್ಟರೇನು? ಜನರ ತೆರಿಗೆಯಿಂದ ಅನ್ನ ಕೊಡುವುದಲ್ಲವೇ ಎಂದರು. ಕಾಂಗ್ರೆಸ್ ಕಾರ್ಯಾಲಯದಲ್ಲಿ ನೆಹರೂ ಅಥವಾ ಇಂದಿರಾ ಹೆಸರಿನಲ್ಲಿ ಕ್ಯಾಂಟೀನ್ ತೆರೆದರೆ ನಮ್ಮ ಅಡ್ಡಿ ಇಲ್ಲ ಎಂದು ತಿಳಿಸಿದರು. ಅನ್ನಪೂರ್ಣೇಶ್ವರಿ ಹೆಸರು ಸಲಹೆ ಮಾತ್ರ. ಆ ಕುರಿತು ಚರ್ಚೆ ನಡೆಯಲಿ ಎಂದು ತಿಳಿಸಿದರು.
ನಿಜವಾದ ಪ್ರೀತಿ ಇದ್ದರೆ ಇಂದಿರಾ ಹತ್ಯೆಯಾದ ಕೂಡಲೇ ಇಂದಿರಾ ಕ್ಯಾಂಟೀನ್ ತೆರೆಯಬೇಕಿತ್ತು. ಇಂದಿರಾ ಹತ್ಯೆಯ ನೆಪದಲ್ಲಿ ಹತ್ತಾರು ಸಾವಿರ ಸಿಖ್ಖರ ನರಮೇಧ ನಡೆದಿತ್ತು ಎಂದು ಅವರು ನೆನಪಿಸಿದರು. ನೆಹರೂ ಅವರ ಒಳ್ಳೆಯ ತೀರ್ಮಾನಗಳನ್ನು ಪಕ್ಷವು ನಮ್ಮ ತೀರ್ಮಾನ ಎಂದು ಭಾವಿಸಿ ಒಪ್ಪಿಕೊಳ್ಳಲಿದೆ. ಹಾಗೆಯೇ ಕೆಲವು ಎಡೆಬಿಡಂಗಿತನ ಮಾಡಿದ್ದಾರೆ. ಅಂಥ ಎಡೆಬಿಡಂಗಿತನವನ್ನು ಸರಿಪಡಿಸುವ ಕೆಲಸವನ್ನು 370ನೇ ವಿಧಿ ರದ್ದು ಮಾಡುವ ಮೂಲಕ ಮಾಡಲಾಗಿದೆ. ದೇಶದ ಹಿತದೃಷ್ಟಿಯಿಂದ ಸರಿಪಡಿಸಬೇಕಾದ ಕೆಟ್ಟ ತೀರ್ಮಾನವಿದ್ದರೆ, ಅದನ್ನು ಸರಿಪಡಿಸಲೇಬೇಕು ಎಂಬ ನಿಲುವು ತಮ್ಮದು ಎಂದರು.
ನಮ್ಮ ಆಗ್ರಹದ ಕಾರಣಕ್ಕಾಗಿಯೇ ಗೋಹತ್ಯಾ ನಿಷೇಧದ ಕಾಯ್ದೆ ಜಾರಿಯಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ದುರುದ್ದೇಶದಿಂದ ಹಾಕಿದ್ದ ಪ್ರಕರಣಗಳನ್ನು ಹಿಂದಿನ ಕಾಂಗ್ರೆಸ್ ಸರಕಾರ ರದ್ದುಪಡಿಸಿಲ್ಲ. ಅವರು ಬರೇ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳ ಕೇಸು ಹಿಂಪಡೆದಿದ್ದರು. ನಮ್ಮ ಆಗ್ರಹಕ್ಕಾಗಿಯೇ ಹಿಂದೂಗಳ ಮೇಲಿನ ದುರುದ್ದೇಶದ ಕೇಸು ರದ್ದಾಗುತ್ತಿದೆ ಎಂದು ವಿವರಿಸಿದರು. ಚರ್ಚೆ, ಅಭಿಪ್ರಾಯವಾಗಿ ತೀರ್ಮಾನ ಹೊರಬರಲು ಸಮಯ ಬೇಕಾಗುತ್ತದೆ ಎಂದರು.
ಹಿರಿಯರ ಆಶೀರ್ವಾದ ಪಡೆಯುವ ಗುಣವನ್ನು ಪ್ರತಿಯೊಂದು ರಾಜಕೀಯ ಪಕ್ಷಗಳೂ ಬೆಳೆಸಿಕೊಳ್ಳಬೇಕು. ಮುಖ್ಯಮಂತ್ರಿಗಳು ಹಿರಿಯರಾದ ದೇವೇಗೌಡರ ಆಶೀರ್ವಾದ ಪಡೆದಿದ್ದು ಖಂಡಿತಾ ತಪ್ಪಲ್ಲ. ಪಕ್ಷದ ಒಳಗೆ ರಾಜಕೀಯ ರಾಜಿ ಇರಬೇಕು. ಪಕ್ಷದ ಹೊರಗೆ ಇರಬಾರದು ಎಂದು ಅವರು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ವೈಯಕ್ತಿಕ ಬದುಕು ಚೆನ್ನಾಗಿರಲಿ ಎಂದು ಹಾರೈಸಿದರು. ಆಡಳಿತ ಪಕ್ಷದ ಶಾಸಕರಾದ ಸತೀಶ್ ರೆಡ್ಡಿ ಅವರ ಕಾರಿಗೆ ಬೆಂಕಿ ಹಾಕಿ ಸುಟ್ಟ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ. ವಿಶೇಷ ತನಿಖಾ ದಳವನ್ನು ರಚಿಸಿ ಈ ಹೀನ ಕೃತ್ಯ ಮಾಡಿದವರು, ಅವರ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಭಯದ ಮೂಲಕ ಜನ ನಾಯಕತ್ವವನ್ನು ಮಣಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನೇತೃತ್ವವನ್ನು ಭಾರತ ವಹಿಸುತ್ತಿದೆ. ಹಿಂದೆ ಭಾರತದಲ್ಲಿ ಗೋಧಿಯನ್ನು ಭಿಕ್ಷೆ ಬೇಡಿ ತರುವ ಸ್ಥಿತಿ ಇತ್ತು. ಅಲ್ಲಿಂದ ಇಂದು ಭಾರತ ಈ ಮಟ್ಟಕ್ಕೆ ಬೆಳೆದಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ, ಭಾರತ ಕೇಂದ್ರಿತ ಸಮರ್ಥ ವಿದೇಶಾಂಗ ನೀತಿಯಿಂದ ಭಾರತವು ದೊಡ್ಡ ಗೌರವಕ್ಕೆ ಪಾತ್ರವಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರವನ್ನು ಮರು ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ 127 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿರುವುದು ಒಂದು ಚಾರಿತ್ರಿಕ ಮತ್ತು ಮಹತ್ವದ ನಿರ್ಧಾರವಾಗಿದೆ. ರಾಜ್ಯಗಳಿಗೆ ಹಿಂದುಳಿದ ಜಾತಿಗಳ ನೈಜ ಸ್ಥಿತಿಗತಿ ಮತ್ತು ವಾಸ್ತವತೆಯ ನೆಲೆಗಟ್ಟಿನಲ್ಲಿ ವಿಳಂಬವಿಲ್ಲದೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದನ್ನು ಸ್ವಾಗತಿಸುವುದಾಗಿ ಹೇಳಿದರು.
ಬಿಜೆಪಿಗೆ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಎಂಬುದು ಒಂದು ಬದ್ಧತೆಯ ವಿಚಾರವಾಗಿದೆ. ಅಂತ್ಯೋದಯದ ಪರಿಕಲ್ಪನೆಗೆ, ಸಮಾಜದ ಎಲ್ಲ ವರ್ಗಕ್ಕೂ ಅವಕಾಶ ಸಿಗಬೇಕೆಂಬ ನಮ್ಮ ಆಲೋಚನೆಗೆ ಪೂರಕವಾಗಿ ನಮ್ಮ ಸರಕಾರ ನಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿಗೆ ಮೀಸಲಾತಿ ಕಲ್ಪಿಸುವ ಕೆಲಸ ಮಾಡಲಾಗಿದೆ. ದಲಿತರಿಗೆ ಸುಪ್ರೀಂ ಕೋರ್ಟ್ ಮುಂಬಡ್ತಿ ನಿರಾಕರಿಸಿದರೂ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಆದರೂ ನಮ್ಮ ರಾಜಕೀಯ ವಿರೋಧಿಗಳು ಬಿಜೆಪಿ ದಲಿತ ವಿರೋಧಿ, ಡಾ. ಅಂಬೇಡ್ಕರರ ವಿರೋಧಿ, ಮೀಸಲಾತಿ ವಿರೋಧಿ ಎಂಬ ತಮ್ಮ ಸವಕಲು ಪ್ಲೇಟ್ ಹಾಕುತ್ತಲೇ ಇರುತ್ತಾರೆ. ಆ ಸವಕಲು ಗ್ರಾಮಾಫೋನ್ ತಿರುಗಿಸುವವರಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಒಂದೋ ಪೂರ್ವಗ್ರಹಪೀಡಿತರಾಗಿ ಅಥವಾ ಸಾಫ್ಟ್ವೇರ್ ಅಪ್ಡೇಟ್ ಆಗದೆ ಹಳೇ ಗ್ರಾಮಾಫೋನ್ ಪ್ಲೇಟ್ ಹಾಕುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರೆ, ಡಾ. ಅಂಬೇಡ್ಕರರ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಅವರ ಜನ್ಮಸ್ಥಾನ ಮಹುವಾ, ಅವರ ಕರ್ಮಭೂಮಿ ನಾಗಪುರ, ಅವರು ಓದಿದ ಸ್ಥಳದ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರ ನೇತೃತ್ವದ ಸರಕಾರ ಕಾರಣವಾಗಿದೆ ಎಂದು ವಿವರಿಸಿದರು. ದೆಹಲಿಯ ಅವರ ವಾಸದ ಮನೆಯನ್ನು ಅಭಿವೃದ್ಧಿಪಡಿಸಿ ಅಂತರರಾಷ್ಟ್ರೀಯ ಸ್ಮಾರಕ ನಿರ್ಮಿಸಿದ್ದು ಕೂಡ ಬಿಜೆಪಿ ಸರಕಾರವೇ ಎಂದು ವಿವರಿಸಿದರು. ಸಿದ್ದರಾಮಯ್ಯ ಅವರು ಅಪ್ಡೇಟ್ ಆಗಬೇಕು ಎಂದು ತಿಳಿಸಿದರು.
ಒಂದು ಕುಟುಂಬದ ರಾಜಕೀಯ ಹಿತಾಸಕ್ತಿ ಕಾಪಾಡಲು ಮಾಡುವ ರಾಜಕೀಯ ನಾಟಕ ಇದಲ್ಲ. ಬಿಜೆಪಿ, ಕೇಂದ್ರದಲ್ಲಿ 13 ವರ್ಷಗಳಲ್ಲಿ ಅಧಿಕಾರದಲ್ಲಿದೆ. 7 ವರ್ಷಗಳಿಂದ ಹಿಂದುಳಿದವರೇ ಪ್ರಧಾನಿಯಾಗಿದ್ದಾರೆ. ಮೊದಲ ಬಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರಾದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಲಾಗಿತ್ತು. ಅಂಥ ದೊಡ್ಡ ಮನುಷ್ಯರನ್ನು ಎರಡನೇ ಅವಧಿಗೆ ಮುಂದುವರಿಸುವ ದೊಡ್ಡ ಮನಸ್ಸು ಕಾಂಗ್ರೆಸ್ಗೆ ಇರಲಿಲ್ಲ ಎಂದರು.
ಈಗ ದಲಿತ ವರ್ಗಕ್ಕೆ ಸೇರಿದ ಶ್ರೀ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾಗಿರುವುದು ನಮ್ಮ ಬದ್ಧತೆಯಾಗಿದೆ. ಆದರೆ, ದಲಿತ ಕಾಂಗ್ರೆಸ್ ಶಾಸಕ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದವರನ್ನು ಸಮರ್ಥಿಸಿಕೊಳ್ಳುವ ನೀಚತನ ಕಾಂಗ್ರೆಸ್ನ ಬದ್ಧತೆ ಎಂದು ವಿವರಿಸಿದರು.
ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಒಬಿಸಿಗೆ ಸೇರಿದ 27 ಜನರನ್ನು ಮೋದಿಯವರ ಸಂಪುಟದಲ್ಲಿ ಸಚಿವರನ್ನಾಗಿ ಮಾಡಲಾಗಿದೆ. ದಲಿತ ವರ್ಗದ 12 ಜನ, ಪರಿಶಿಷ್ಟ ಪಂಗಡದ 8 ಜನ ಮಾತ್ರವಲ್ಲದೆ ಎಸ್ಸಿ, ಎಸ್ಟಿ, ಮಹಿಳೆಯರಿಗೂ ನ್ಯಾಯ ನೀಡಲಾಗಿದೆ. ಪ್ರಾದೇಶಿಕವಾಗಿಯೂ ಪ್ರಾತಿನಿಧ್ಯತೆ ಕೊಡಲಾಗಿದೆ ಎಂದರು.
ಜಾತಿ ಗಣತಿಗೆ ಕಾಂಗ್ರೆಸ್ನವರು 300 ಕೋಟಿ ಖರ್ಚು ಮಾಡಿದ್ದರು. ಅವರಿಗೆ ನಿಜವಾಗಿಯೂ ಬದ್ಧತೆ ಇದ್ದರೆ 2015ರಲ್ಲೇ ಸಿಕ್ಕಿದ ಜಾತಿ ಗಣತಿ ವರದಿಯನ್ನು ಹೊರ ತರಲಿಲ್ಲವೇಕೆ ಎಂದು ಪ್ರಶ್ನಿಸಿದರು. ನೀವೇ ನೇಮಿಸಿದ ಸದಸ್ಯರು ಈ ಗಣತಿ ವರದಿಗೆ ವಿರೋಧ ಸೂಚಿಸಿದ್ದರು. ಇದು ನಿಮ್ಮ ಎಡೆಬಿಡಂಗಿತನ, ನಿಮ್ಮ ಗೋಸುಂಬೆತನ ಎಂದು ಟೀಕಿಸಿದರು. ಕಾಂಗ್ರೆಸ್ನದು ರಾಜಕೀಯ ನಾಟಕವಷ್ಟೇ ಎಂದರು.
ಆರ್ಥಿಕವಾಗಿ ಹಿಂದುಳಿದವರಿಗೂ ಶೇ 10 ಮೀಸಲಾತಿ ನೀಡುವ ಮೂಲಕ “ಎಲ್ಲರಿಗೂ ನ್ಯಾಯ” ಎಂಬ ಪರಿಕಲ್ಪನೆಯನ್ನು ಬಿಜೆಪಿ ಅನುಷ್ಠಾನಕ್ಕೆ ತಂದಿದೆ ಎಂದು ವಿವರಿಸಿದರು. ಸದನ ಮಾತಿನ ಮನೆ, ಸಕಾರಾತ್ಮಕವಾಗಿ ಕಾಂಗ್ರೆಸ್ ಸ್ಪಂದಿಸಬೇಕಿತ್ತು. ದೇಶ ಮತ್ತು ದೇಶದ ಹಿತದೃಷ್ಟಿಯನ್ನು ವಿಪಕ್ಷಗಳು ಮರೆತಿವೆ. ಸಂಸತ್ತಿನ ಮಾತಿನ ಮನೆಯನ್ನು ಖಾನ್ ಮಾರ್ಕೆಟ್ ಆಗಿ ಬದಲಿಸಿದ ಕುಖ್ಯಾತಿ ಕಾಂಗ್ರೆಸ್ನದು ಎಂದರು. ಕಾಂಗ್ರೆಸ್ ಪಕ್ಷವು ತನ್ನ ನಡವಳಿಕೆ ಮೂಲಕ ಲೋಕಸಭೆ, ರಾಜ್ಯಸಭೆಗೆ ಅಪಮಾನ ಮಾಡಿದ್ದು, ಅದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರವು ಆರಂಭಿಕವಾಗಿ ಒಳ್ಳೆಯ ಹೆಜ್ಜೆಗಳನ್ನಿಟ್ಟಿದೆ. ಜನಹಿತಕ್ಕೆ ಪೂರಕ ಆರಂಭಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ತನ್ನ ಸಂಪುಟದ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿ ಕೆಲಸ ತೆಗೆದುಕೊಳ್ಳುವ ಉತ್ಸಾಹವನ್ನು ತೋರಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯ ಹಣವನ್ನು 1 ಸಾವಿರದಿಂದ 1,200 ರೂಪಾಯಿಗೆ ಹೆಚ್ಚಿಸಿರುವುದು, ವಿಧವಾ ಮಾಸಾಶನ, ಅಂಗವಿಕಲರ ಮಾಸಾಶನ ಹೆಚ್ಚಳ ಒಳ್ಳೆಯ ಸಂದೇಶವನ್ನು ನೀಡಿದೆ ಎಂದು ಮೆಚ್ಚುಗೆ ಸೂಚಿಸಿದರು.
ಸಚಿವರಿಗೆ ಹಾರದ ಬದಲು ಕನ್ನಡ ಪುಸ್ತಕ ಕೊಡಿ ಎಂಬುದು ಕನ್ನಡದ ಕುರಿತಂತೆ ಅಭಿಮಾನದ ಪ್ರತೀಕವಾಗಿದೆ. ಅಧಿಕಾರ ಇರುವ ಪಕ್ಷದಲ್ಲಿ ಅಧಿಕಾರದ ಪೈಪೋಟಿ ಸ್ವಾಭಾವಿಕ. ಕಾಂಗ್ರೆಸ್ಗೆ ಏನಿದೆ ಅಧಿಕಾರ? ಒಂದರ ಹಿಂದೆ ಒಂದು ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಲೇ ಬಂದಿದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಶೂನ್ಯ ಸಂಪಾದನೆ, ಕೇರಳದಲ್ಲಿ ಅಧಿಕಾರಕ್ಕೆ ಬರುವ ಆಶಾವಾದವೂ ಚುನಾವಣಾ ಸೋಲಿನ ಮೂಲಕ ಮಣ್ಣುಪಾಲಾಗಿದೆ. ಆದರೂ, ಕಾಂಗ್ರೆಸ್ಸಿಗರು ಹಗಲುಗನಸು ಕಾಣುತ್ತಿದ್ದಾರೆ. ಅವರ ಹಗಲುಗನಸು ಹಗಲುಗನಸಾಗಿಯೇ ಉಳಿಯಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.