ನವದೆಹಲಿ: ಆತ್ಮನಿರ್ಭರ್ ಸೆ ನಾರಿಶಕ್ತಿ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳ ಜೊತೆಗೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಹಾಗೆಯೇ ಸುಮಾರು 4 ಲಕ್ಷ ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದಂತೆ 1625 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರಿಗೆ ಅವಕಾಶಗಳು ಹೆಚ್ಚುತ್ತಿವೆ. ಅವರ ಆರೋಗ್ಯ, ಶಿಕ್ಷಣ, ಪೋಷಣೆ, ಲಸಿಕೆ, ಇತರ ಅಗತ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಹಳ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಮನೆ, ಶೌಚಾಲಯ, ವಿದ್ಯುತ್, ನೀರು, ಅನಿಲ ಸಂಪರ್ಕಗಳಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರು ಗ್ರಾಮವನ್ನು ಸಮೃದ್ಧವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಅನುಕೂಲ ಗಳನ್ನು ಒದಗಿಸುತ್ತಿದೆ. ಕೊರೋನಾ ಅವಧಿಯಲ್ಲಿ ಸ್ವಸಹಾಯ ಗುಂಪುಗಳ ಸಹೋದರಿಯರು ಸಲ್ಲಿಸಿದ ಸೇವೆ ಅಮೋಘ ಎಂದು ಅವರನ್ನು ಶ್ಲಾಘಿಸಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ತಯಾರಿ, ಆಹಾರ ತಯಾರಿಸಿ ಅಗತ್ಯ ಇರುವವರಿಗೆ ಒದಗಿಸುವುದು, ಜಾಗೃತಿ ಕೆಲಸಗಳನ್ನು ಮಾಡುವುದು ಮೊದಲಾದಂತೆ ಇನ್ನೂ ಹಲವಾರು ಮಾದರಿ ಕೆಲಸಗಳನ್ನು ಅವರು ಮಾಡಿದ್ದಾರೆ. ಹಾಗೆಯೇ, ಸಾಲಗಳ ಮರುಪಾವತಿಗೆ ಸಂಬಂಧಿಸಿದಂತೆಯೂ ಸ್ವಸಹಾಯ ಸಂಘಗಳು ಶ್ಲಾಘನೀಯ ಪ್ರಯತ್ನ ಮಾಡಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಜನ್ ಧನ್ ಯೋಜನೆ ಮೂಲಕ ಗ್ರಾಮೀಣ ಮಹಿಳೆಯರು ಬ್ಯಾಂಕ್ ಖಾತೆ ಹೊಂದುವಂತಾಗಿದೆ. ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ 7 ವರ್ಷಗಳಲ್ಲಿ ನಮ್ಮ ಸರ್ಕಾರ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಬೆಂಬಲ, ಸಹಕಾರ ಒದಗಿಸಿದೆ ಎಂದು ತಿಳಿಸಿದರು. ಜಲ ಸಂರಕ್ಷಣೆ, ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದಲ್ಲಿಯೂ ಸ್ವಸಹಾಯ ಗುಂಪುಗಳು ಸರ್ಕಾರದ ಜೊತೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಹಾಗೆಯೇ ಕೃಷಿ ಕ್ಷೇತ್ರದಲ್ಲಿ, ಕೃಷಿ ಸಂಬಂಧಿತ ಉದ್ಯಮದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಅಂತ್ಯವಿಲ್ಲದ ಸಾಧ್ಯತೆಗಳಿವೆ. ಇದಕ್ಕಾಗಿ ಸರ್ಕಾರ ವಿಶೇಷ ನಿಧಿ ಸ್ಥಾಪಿಸಿದ್ದು, ಎಲ್ಲಾ ಸದಸ್ಯರು ಇದರ ಲಾಭವನ್ನು ಪಡೆಯುವಂತೆ ಸೂಚಿಸಿದರು. ಹಾಗೆಯೇ ಸಮಂಜಸ ದರ ನಿಗದಿ ಜೊತೆಗೆ ಈ ಸದಸ್ಯರು ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಹೊಸ ಸುಧಾರಣೆಗಳಿಂದ ರೈತರು ಪ್ರಯೋಜನ ಪಡೆಯುತ್ತಾರೆ. ಆದರೆ ಈಗ ಸ್ವಸಹಾಯ ಗುಂಪುಗಳಿಗೂ ಸಾಧ್ಯತೆಗಳನ್ನು ಸರ್ಕಾರ ಸೃಷ್ಟಿಸುತ್ತಿದೆ. ಸ್ವಸಹಾಯ ಗುಂಪುಗಳು ನೇರವಾಗಿ ರೈತರಿಂದ ಖರೀದಿಸಿ, ನೇರವಾಗಿ ಮಾರಾಟ ಮಾಡುವ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ 75 ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಹೊಸ ಗುರಿ, ಹೊಸ ಶಕ್ತಿಯ ಜೊತೆಗೆ ಮುಂದುವರೆಯುವಂತೆ ಅವರು ನಾರೀ ಶಕ್ತಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಬಂಡವಾಳೀಕರಣ ಬೆಂಬಲ ನಿಧಿಯ 1625 ಕೋಟಿ ರೂ. ಗಳನ್ನು 4 ಲಕ್ಷ ಸ್ವಸಹಾಯ ಗುಂಪುಗಳಿಗೆ ಬಿಡುಗಡೆ ಮಾಡಿದರು. ಹಾಗೆಯೇ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ ಸ್ಕೀಂ ಅಡಿಯಲ್ಲಿ ಏಳು ಸಾವಿರದ ಐನೂರು ಸ್ವಸಹಾಯ ಸಂಘಗಳ ಸದಸ್ಯರಿಗೆ 25 ಕೋಟಿ ರೂ. ಬಿಡುಗಡೆ ಮಾಡಿದರು. ಮಿಷನ್ ಅಡಿಯಲ್ಲಿ ಪ್ರಚಾರಗೊಳ್ಳುತ್ತಿರುವ 75 ರೈತ ಉತ್ಪಾದಕ ಸಂಸ್ಥೆಗಳ ಎಫ್ಪಿಒಗಳಿಗೆ 4.13 ಕೋಟಿ ರೂ. ಬಿಡುಗಡೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.