ನವದೆಹಲಿ: ಅಂತರಾಷ್ಟ್ರೀಯ ವ್ಯಾಪಾರದ ಜೀವನಾಡಿಗಳಾಗಿವೆ ಸಮುದ್ರ ಮಾರ್ಗಗಳು. ಇವುಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆ, ವ್ಯಾಜ್ಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅತ್ಯುನ್ನತ ಮಟ್ಟದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಕ್ತ ಸಮುದ್ರ ವ್ಯಾಪಾರ ಬಹಳ ಹಿಂದಿನಿಂದಲೂ ಭಾರತದ ಸಂಸ್ಕೃತಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ತಿಳಿಸಿದರು.
ಸಮುದ್ರಗಳು ವಿಶ್ವದ ಪಾಲಿನ ಪರಂಪರೆ ಎಂದು ಘೋಷಿಸಿದ ಅವರು, ಸಮುದ್ರ ಮಾರ್ಗಗಳು ಅಂತರಾಷ್ಟ್ರೀಯ ವ್ಯಾಪಾರದ ಜೀವನಾಡಿಗಳಾಗಿವೆ. ಹಂಚಿಕೆಯ ಪರಂಪರೆಯ ಸಮುದ್ರಗಳಿಗೆ ಸಂಬಂಧಿಸಿದಂತೆ ಹಲವು ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಕಡಲ್ಗಳ್ಳತನ, ಭಯೋತ್ಪಾದನೆ ಮೊದಲಾದವುಗಳ ಮೂಲಕ ಸಮುದ್ರ ಮಾರ್ಗಗಳ ದುರ್ಬಳಕೆ ಆಗುತ್ತಿದೆ. ಇಂತಹ ಅಡ್ಡಿಗಳಿಂದ ಅಂತರಾಷ್ಟ್ರೀಯ ವ್ಯಾಪಾರ ಸಂಬಂಧಕ್ಕೆ, ಆರ್ಥಿಕತೆಗೆ ಹಾನಿಯಾಗುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮುದ್ರ ವ್ಯಾಪಾರವು ಯಾವುದೇ ಅಡೆತಡೆಗಳಿಲ್ಲದೆ ಕಾನೂನು ಬದ್ಧವಾಗಿ ನಡೆಯುವಂತಾಗಬೇಕು. ಕಡಲ ವ್ಯಾಪಾರದ ವಿವಾದಗಳನ್ನು ಶಾಂತಿಯುತ ಮತ್ತು ಅಂತರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಬಗೆಹರಿಸಿಕೊಳ್ಳಬೇಕು. ನೈಸರ್ಗಿಕ ವಿಕೋಪಗಳಂತಹ ಸವಾಲುಗಳನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು ಎಂದು ಅವರು ತಿಳಿಸಿದರು.
ಸಮುದ್ರ ಮತ್ತು ಸಾಗರ ಸಂಪನ್ಮೂಲಗಳನ್ನು ವಿಸ್ತರಣೆ, ಸಂರಕ್ಷಣೆ ಮಾಡಲು ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ. ಸಮುದ್ರ ವಿಪತ್ತುಗಳನ್ನು ಬಗೆಹರಿಸುವಲ್ಲಿ ಮೊದಲ ಸ್ಪಂದನೆ ಭಾರತದ್ದಾಗಿರುತ್ತದೆ ಎಂದು ಅವರು ಹೇಳಿದರು. ಸಾಗರದ ಸುರಕ್ಷೆ, ಭದ್ರತೆ, ಸ್ಥಿರತೆ ಸಾಧಿಸಲು ಭಾರತ ಮಹತ್ವ ನೀಡುತ್ತದೆ. ಸಾಗರ ವಹಿವಾಟುಗಳ ವಿಸ್ತರಣೆಗೆ ಮೂಲಸೌಕರ್ಯ ನಿರ್ಮಾಣ ಯೋಜನೆಗಳು, ದೇಶದ ಸಾಮರ್ಥ್ಯ ಮತ್ತು ಭೌತಿಕ ಸುಸ್ಥಿರತೆಯನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳುವಂತೆಯೂ ಅವರು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.