ಬೆಂಗಳೂರು: ಕೇಂದ್ರ ಸರಕಾರದ ನೂತನ ಸಚಿವರು ತಮ್ಮ ರಾಜ್ಯಗಳಿಗೆ ತೆರಳಿ ಜನರ ಆಶೀರ್ವಾದ ಪಡೆಯುವಂತೆ ಬಿಜೆಪಿ ಸೂಚಿಸಿದೆ. ಅದರನ್ವಯ ಆಗಸ್ಟ್ 16ರಿಂದ 19ರ ನಡುವಿನ ಅವಧಿಯಲ್ಲಿ ಸಚಿವರು ಆಶೀರ್ವಾದ ಯಾತ್ರೆ ನಡೆಸಲಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಾರಾಯಣಸ್ವಾಮಿ ಮತ್ತು ರಾಜೀವ್ ಚಂದ್ರಶೇಖರ್ ಅವರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಒ.ಬಿ.ಸಿ. ಮೋರ್ಚಾದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಕೆ. ಲಕ್ಷ್ಮಣ್ ಅವರು ತಿಳಿಸಿದರು.
ನಂದಿ ಹಿಲ್ಸ್ನಲ್ಲಿ ವೃಕ್ಷಾರೋಹಣ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಇಂದು ದೇವನಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬಿಸಿ ಮೋರ್ಚಾದ ರಾಜ್ಯ ಘಟಕಕ್ಕೆ 60 ಸಾವಿರ ಸಸಿ ನೆಡುವ ಗುರಿ ನೀಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಸಸಿ ನೆಟ್ಟು ಅದು ಜಾಗತಿಕ ತಾಪಮಾನ ನಿಯಂತ್ರಣದ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದೆ. ಇದಕ್ಕಾಗಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು ಮತ್ತು ಅವರ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.
ದೇಶದ ಒಟ್ಟು ಜನಸಂಖ್ಯೆಯ ಶೇ 50ಕ್ಕೂ ಹೆಚ್ಚು ಜನರು ಒಬಿಸಿ ಸಮುದಾಯಕ್ಕೆ ಸೇರಿದ್ದಾರೆ. ಮೊದಲ ಬಾರಿಗೆ ಒಬಿಸಿ ಸಮುದಾಯದ ವ್ಯಕ್ತಿಯೊಬ್ಬರು ಪ್ರಧಾನಿಯಾಗಲು ಬಿಜೆಪಿ ಕಾರಣವಾಗಿದೆ. ಇದು ಕೇವಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು. ದೇಶವನ್ನು ಸುಮಾರು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು ಕೇವಲ ನೆಹರೂ ವಂಶದ ಆಡಳಿತಕ್ಕೆ ತನ್ನನ್ನು ಸೀಮಿತಗೊಳಿಸಿತ್ತು. ಒಬಿಸಿ ಸಮುದಾಯವನ್ನು ಮತಬ್ಯಾಂಕ್ ಆಗಿ ಕಾಂಗ್ರೆಸ್ ಪಕ್ಷ ಬಳಸಿಕೊಂಡಿತ್ತು ಎಂದು ಅವರು ವಿವರಿಸಿದರು. ಬಿಜೆಪಿ ಸರಕಾರದಲ್ಲಿ ಒಬಿಸಿ ಸಮುದಾಯಕ್ಕೆ ಗರಿಷ್ಠ ಆದ್ಯತೆ ಕೊಡಲಾಗಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು. ಸಂಸತ್ತಿನಲ್ಲಿ ಒಬಿಸಿ, ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸದಂತೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿದೆ ಎಂದು ಅವರು ಆಕ್ಷೇಪಿಸಿದರು.
ಒಬಿಸಿ ಸಮುದಾಯದ ಬಗ್ಗೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ವಿಶೇಷ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮೀಸಲಾತಿ, ಒಬಿಸಿ ಸಮುದಾಯದ ಎಲ್ಲರಿಗೂ ಮೀಸಲಾತಿಯ ಲಾಭ ಸಿಗುವ ದೃಷ್ಟಿಯಿಂದ ಆಯೋಗವನ್ನೂ ರಚಿಸಿದ್ದಾರೆ. ಇದು ಶ್ಲಾಘನೀಯ ಎಂದು ತಿಳಿಸಿದರು.
ಮೀನುಗಾರಿಕೆಗೆ ಸಂಬಂಧಿಸಿ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಬಜೆಟ್ ಹೊಂದಿರುವುದು ಕೂಡ ಮೆಚ್ಚತಕ್ಕ ವಿಚಾರ ಎಂದು ತಿಳಿಸಿದರು. ಮೀನುಗಾರರ ಬೋಟ್ಗಳಿಗೆ ವಿಶೇóಷ ಸಹಾಯಧನ ನೀಡಿದ್ದು, ಮೀನುಗಾರರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡಲಾಗುತ್ತಿದೆ ಎಂದು ವಿವರಿಸಿದರು. ಕೇಂದ್ರ ಸರಕಾರದಲ್ಲಿ ಶೇ 35 ಸಚಿವ ಸ್ಥಾನಗಳನ್ನು ಒಬಿಸಿ ಸಮುದಾಯಕ್ಕೆ ನೀಡಿದ್ದು, ಇದರಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಕುಟುಂಬದ ಕುರಿತು ಚಿಂತಿಸುವ ವ್ಯಕ್ತಿಯಲ್ಲ. ವಿವಿಧ ಸಮುದಾಯಗಳ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ (ಇಡಬ್ಲ್ಯುಎಸ್) ಶೇ 10 ಮೀಸಲಾತಿಯನ್ನೂ ಅವರು ನೀಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ, ಜೆಡಿಎಸ್ ಮತ್ತು ಇತರ ವಿರೋಧ ಪಕ್ಷಗಳು ವಂಶಾಡಳಿತಕ್ಕೆ ಆದ್ಯತೆ ಕೊಡುತ್ತಿವೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಕ್ರಮಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಒಬಿಸಿ ಸಮುದಾಯಕ್ಕೆ 4 ಸಾವಿರ ಮತ್ತು ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗೆ 1,500 ಸೀಟುಗಳು ಲಭಿಸಲಿವೆ. ಕಾಲೇಜುಗಳ ಸಂಖ್ಯೆ ಹೆಚ್ಚಾದರೆ ಸೀಟುಗಳ ಸಂಖ್ಯೆಯೂ ಹೆಚ್ಚಾಗಲಿದೆ. ಈ ಎಲ್ಲ ಕ್ರಾಂತಿಕಾರಿ ಕ್ರಮಗಳು ಕೇವಲ ಏಳು ವರ್ಷಗಳಲ್ಲಿ ಆಗಿವೆ. ಹಿಂದೆ ಕಾಂಗ್ರೆಸ್ ಪಕ್ಷವು ಒಬಿಸಿ ಸಮುದಾಯವನ್ನು ಮತ ಬ್ಯಾಂಕ್ ಆಗಿ ನೋಡುತ್ತಿತ್ತು. ಅವರನ್ನು ಮನುಷ್ಯರೆಂದೇ ಪರಿಗಣಿಸಲು ಸಿದ್ಧ ಇರಲಿಲ್ಲ ಎಂದು ಅವರು ವಿವರಿಸಿದರು.
ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆಯರು ಮತ್ತು ಶೋಷಿತರ ಸಶಕ್ತೀಕರಣಕ್ಕೆ ಶ್ರೀ ನರೇಂದ್ರ ಮೋದಿ ಅವರು ತಮ್ಮ ಅಧಿಕಾರದ ಮೊದಲ ದಿನದಿಂದಲೇ ಶ್ರಮಿಸುತ್ತ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಕೇಂದ್ರ ಸರಕಾರದ ಸಚಿವ ಸಂಪುಟದ ಪುನಾರಚನೆ ವೇಳೆ ಎಸ್ಸಿ ಸಮುದಾಯದ 12, ಎಸ್ಟಿ-8, ಒಬಿಸಿ-27, ಮಹಿಳೆಯರು-11 ಹಾಗೂ ಅಲ್ಪಸಂಖ್ಯಾತ ಸಮುದಾಯದ 5 ಜನರಿಗೆ ಸೇರಿದಂತೆ ಒಟ್ಟು ಶೇ 70 ಪ್ರಾತಿನಿಧ್ಯತೆಯನ್ನು ದುರ್ಬಲ ವರ್ಗಕ್ಕೇ ನೀಡಿದ್ದಾರೆ. ಇದು ಶ್ಲಾಘನೀಯ. ಇದರಿಂದ ಒಬಿಸಿ ಸಮುದಾಯವು ಬಿಜೆಪಿಯತ್ತ ಆಕರ್ಷಿತವಾಗುತ್ತಿದ್ದು, ಭವಿಷ್ಯದಲ್ಲಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘಟನೆಯನ್ನು ಬಲಪಡಿಸಲು ಒಬಿಸಿ ವತಿಯಿಂದ ಮೀನುಗಾರರ ಸಮ್ಮೇಳನ, ನೇಕಾರರ ಸಮ್ಮೇಳನ ಸೇರಿದಂತೆ ವಿವಿಧ ಸಮ್ಮೇಳನಗಳ ಮೂಲಕ ಮೋದಿ ಅವರ ಕಾರ್ಯಕ್ರಮಗಳ ಬಗ್ಗೆ, ಭ್ರಷ್ಟಾಚಾರ ರಹಿತವಾಗಿ ಕೆಲಸ ನಿರ್ವಹಿಸುತ್ತಿರುವುದರ ಕುರಿತು ಹಾಗೂ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ವಿಚಾರದಲ್ಲಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು ಅವರು ಮಾತನಾಡಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಬಿಜೆಪಿ ಮುನ್ನಡೆಯುತ್ತಿದೆ. ಒಂದು ಲಕ್ಷ ಸಸಿ ನೆಟ್ಟ ಮೋರ್ಚಾವು 5 ಲಕ್ಷ ಬೀಜದುಂಡೆಗಳನ್ನು ಮಳೆಗಾಲ ಮುಗಿಯುವುದರೊಳಗೆ ಬಿತ್ತುತ್ತಿದೆ. 310 ಮಂಡಲಗಳಲ್ಲಿ ಶ್ರಮದಾನವನ್ನೂ ಮಾಡಲಾಗಿದೆ ಎಂದರು. ನಂದಿ ಬೆಟ್ಟದ ಸ್ವಚ್ಛತೆಯೂ ನಡೆಯಲಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.