ಬೆಂಗಳೂರು: ಕಾಂಗ್ರೆಸ್ನದ್ದು ಹಿಟ್ ಆ್ಯಂಡ್ ರನ್ ಪಾಲಿಸಿಯಾಗಿದೆ. ಕೋವಿಡ್ ವೇಳೆ ಅಧಿವೇಶನಕ್ಕೆ ಒತ್ತಾಯಿಸಿದ್ದ ಕಾಂಗ್ರೆಸ್ ಪಕ್ಷದವರು ಈಗ ಪೆಗಾಸಿಸ್ ಸೇರಿ ಬೇರೆ ಬೇರೆ ನೆಪದಲ್ಲಿ ಅಧಿವೇಶನ ನಡೆಯದಂತೆ ನೋಡಿಕೊಂಡರು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಖಂಡತೆ, ಸಮಗ್ರತೆ, ಜಾಗತಿಕ ವ್ಯವಸ್ಥೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ದಿನಗಳು ಇದಾಗಿವೆ. ನೆರೆಯ ಅಘಘಾನಿಸ್ಥಾನದ ಭಯೋತ್ಪಾದಕ ಸಂಘಟನೆಯ ಆತಂಕಕಾರಿ ಕ್ರಮಗಳು, ಪಾಕಿಸ್ತಾನ ಮತ್ತು ಚೀನಾದ ಸವಾಲುಗಳ ಕುರಿತು ಚರ್ಚಿಸಿ ತೀರ್ಮಾನ ಮಾಡಬೇಕಿತ್ತು. ಆದರೆ, ಕಳೆದ 19ರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯ ದೇಗುಲವನ್ನು ಅಪವಿತ್ರಗೊಳಿಸಲು ಕಾಂಗ್ರೆಸ್ಸಿಗರು ಯತ್ನಿಸುತ್ತಾ ಸಾಗಿದ್ದಾರೆ ಎಂದು ತಿಳಿಸಿದರು.
ಚರ್ಚಿಸಲು ವಸ್ತುಗಳಿಲ್ಲದೆ ಪಲಾಯನವಾದಕ್ಕೆ ಒತ್ತು ಕೊಡುವ ರೀತಿಯಲ್ಲಿ ಸಂಸತ್ತಿನ ಅಧಿವೇಶನ ಸ್ಥಗಿತಗೊಳಿಸಲು ಕಾಂಗ್ರೆಸ್ ಮುಂದಾಯಿತು. ಇದರಿಂದ, ಕೇವಲ 18 ಗಂಟೆಗಳ ಕಾಲ ಸಂಸತ್ತಿನ ಅಧಿವೇಶನ ನಡೆಯುವಂತಾಯಿತು. ಒಂದು ಗಂಟೆಯ ಪ್ರಶ್ನೋತ್ತರ ಕಾಲ ಅತ್ಯಂತ ಮಹತ್ವದ್ದು. ಅದನ್ನೂ ನಡೆಯಲು ಬಿಡಲಿಲ್ಲ ಎಂದು ತಿಳಿಸಿದರು. ಅತ್ಯಂತ ಗಂಭೀರವಾಗಿ ಅಧಿವೇಶನ ನಡೆಸುವ ದೃಷ್ಟಿಯಿಂದ ಪ್ರಧಾನಿಯವರು ಅಧಿವೇಶನಕ್ಕೆ ಮೊದಲು ಸರ್ವಪಕ್ಷಗಳ ಸಭೆ ನಡೆಸಿದ್ದರು. ಈ ಬಾರಿ ಅತ್ಯಂತ ಗಂಭೀರವಾಗಿ ಅಧಿವೇಶನ ನಡೆಸಬೇಕು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಆಡಳಿತ ಪಕ್ಷ ಸಿದ್ಧವಿದೆ ಎಂದು ತಿಳಿಸಿದ್ದರು. ಆದರೆ, ಮಹತ್ವಪೂರ್ಣ ಸದನವನ್ನು ಕಾಂಗ್ರೆಸ್ನವರು ಕೆಟ್ಟ ರೀತಿಯಲ್ಲಿ ಯತ್ನಿಸಿತು ಎಂದರು.
ರೈತರ ತಿದ್ದುಪಡಿ ಕಾಯ್ದೆ, ಕೋವಿಡ್ನಂಥ ಮಹತ್ವದ ವಿಚಾರಗಳಲ್ಲಿ ಚರ್ಚೆಗೆ ಕಾಂಗ್ರೆಸ್ ಮುಂದಾಗಲಿಲ್ಲ. ಇದು ಪ್ರಜಾತಂತ್ರಕ್ಕೆ ಮಾಡಿದ ಅಪಮಾನ. ರಾಹುಲ್ ಗಾಂಧಿ ಅವರ ಹೇಳಿಕೆಗಳು ಗಾಂಭೀರ್ಯತೆ ಹೊಂದಿಲ್ಲ ಎಂದು ತಿಳಿಸಿದರು. ಹಿಂದೆ ರಫೇಲ್ ಚರ್ಚೆಯ ಸಂದರ್ಭದಲ್ಲೂ ಭೌತಿಕ ದಿವಾಳಿತನಕ್ಕೆ ಸಾಕ್ಷಿಯಾಗುವ ಮಾದರಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಮಿತ್ರ ಪಕ್ಷದವರು ನಡೆದುಕೊಂಡಿದ್ದರು ಎಂದು ಹೇಳಿದರು.
ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವೇಳೆ ತಮ್ಮ ಮೇಲೆ ಬೇಹುಗಾರಿಕೆ ನಡೆದಿದೆ ಎಂದು ಕಾಂಗ್ರೆಸ್ನ ಹಣಕಾಸು ಸಚಿವರೇ ಹೇಳಿದ್ದರು. ಪೆಗಾಸಿಸ್, ಟೂಲ್ಕಿಟ್ನ ಮುಂದುವರಿದ ಭಾಗ ಎಂಬ ಅನಿಸಿಕೆ ಕಾಡುವಂತಾಗಿದೆ ಎಂದು ತಿಳಿಸಿದರು. ಸೈನಿಕರ ಮೇಲೆ ಕಲ್ಲು ತೂರಾಟ, ಜಿಹಾದಿ ಸಾಹಿತ್ಯ ಒದಗಿಸುವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಾರೆ. ಸದನದಲ್ಲಿ ಈ ಕುರಿತು ಕಾಯ್ದೆ ಮಂಡಿಸಿದಾಗ ಅದನ್ನು ಕಾಂಗ್ರೆಸ್ ವಿರೋಧಿಸಿದ್ದು, ಇದು ದೇಶಪ್ರೇಮದ ಸಂಕೇತವೇ ಎಂದು ಅವರು ಪ್ರಶ್ನಿಸಿದರು. ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಅತ್ಯಂತ ಕೆಟ್ಟ ದಿನಗಳು ಈಗ ಬರುತ್ತಿವೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೇ ಸಿಕ್ಕಿಲ್ಲ. ಇನ್ನೊಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿಯೂ ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಡಾ. ಪರಮೇಶ್ವರ್ ಅವರು ತಮ್ಮದೇ ಆದ ಬೆಂಬಲಿಗರ ಜೊತೆ ನಡೆಸುತ್ತಿರುವ ಕಾರ್ಯಾಚರಣೆಗಳೂ ಮುಂದುವರಿದಿವೆ. ತುಮಕೂರಿನಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ರನ್ನು ಹೊರಗಿಟ್ಟು ಸಭೆ ನಡೆಸುವ ದಯನೀಯ ಪರಿಸ್ಥಿತಿ ಕಾಂಗ್ರೆಸ್ಗೆ ಬಂದಿದೆ ಎಂದು ತಿಳಿಸಿದರು. ರಕ್ಷಾ ರಾಮಯ್ಯ- ನಲಪಾಡ್ ಜಟಾಪಟಿಯೂ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಎಂದರು.
ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸನ್ನು ದುರ್ಬೀನು ಹಿಡಿದು ಹುಡುಕುವಂತಾಗಿದೆ. ಕೇರಳ, ಪುದುಚೇರಿಯಲ್ಲೂ ಇದೇ ಸ್ಥಿತಿ ಇದೆ. ಕಾಂಗ್ರೆಸ್ ತನ್ನೆಲ್ಲವನ್ನೂ ಕಳೆದುಕೊಳ್ಳುವಂತಾಗಿದೆ. ಪಂಜಾಬ್ನಲ್ಲೂ ಒಳಜಗಳ ಮುಂದುವರಿದಿದೆ. ಇಷ್ಟಾದರೂ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ ಎಂದರು. ಬಿಜೆಪಿ, ಕೋವಿಡ್ ಸಂದರ್ಭದಲ್ಲಿ ಕೊರೊನಾ ಮುಕ್ತ ಬೂತ್ಗಾಗಿ ನಿರಂತರ ಶ್ರಮಿಸಿದೆ. ಆದರೆ, ಕಾಂಗ್ರೆಸ್ ಪಕ್ಷದವರು ಕೊರೊನಾಕ್ಕೆ ಪರವಾಗಿ ಕೆಲಸ ಮಾಡಿದರು. ರಾಜಸ್ಥಾನದಲ್ಲಿ ರಾಜ್ಯದ ಸಚಿವರ ಜನ್ಮದಿನ ಆಚರಣೆ ಸಾರ್ವಜನಿಕವಾಗಿ ನಡೆಯಿತು. ಕೇರಳದಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಈದ್ ಆಚರಣೆ ನಡೆಸಲಾಯಿತು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರ ಪರಿಣಾಮವಾಗಿ ಕೇರಳ ರಾಜ್ಯದಿಂದ ಶೇ 50ರಷ್ಟು ಕೋವಿಡ್ ಪೀಡಿತರು ಕಾಣುವಂತಾಗಿದೆ ಎಂದರು.
ನಿಗದಿತ ದಿನಗಳವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಒಂದು ವಾರವಾದರೂ ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯಕ್ಕೆ ಬೇಕಾದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಮೇಕೆದಾಟು ವಿಚಾರದಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೇಕೆದಾಟು ಯೋಜನೆ ಅನುಷ್ಠಾನದಿಂದ ನೀರಿನ ಸಂಗ್ರಹ ಹೆಚ್ಚಲಿದೆ. ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗದು. ನೆರೆ ನಿಯಂತ್ರಣಕ್ಕೂ ಇದು ಪೂರಕ. ರಾಜ್ಯದ ಎಲ್ಲ 25 ಬಿಜೆಪಿ ಸಂಸದರು ಈ ಯೋಜನೆ ಅನುಷ್ಠಾನವನ್ನು ಬೆಂಬಲಿಸಲಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಎಲ್ಲ 25 ಸಂಸದರೂ ಶ್ರಮಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸಂಸತ್ತು ದೇಶದ ಶ್ರದ್ಧಾ ಕೇಂದ್ರವಾಗಿದೆ. ಜನರ ಭಾವನೆಗಳಿಗೆ ಅನುಗುಣವಾಗಿ ತೀರ್ಮಾನ ನಡೆಯಬೇಕೆಂಬ ನಿಟ್ಟಿನಲ್ಲಿ ಈ ಶ್ರದ್ಧಾ ಕೇಂದ್ರ ಕಾರ್ಯ ನಿರ್ವಹಿಸಬೇಕಿತ್ತು. ಆದರೆ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಜನರು ನಿರುದ್ಯೋಗಿಗಳಾದ ಸಂದರ್ಭ, ಉದ್ಯಮಗಳ ಕುಸಿತ, ಭಾರತದ ವೇಗಕ್ಕೆ ಸಣ್ಣ ಮಟ್ಟಿನ ತಡೆ ಉಂಟಾದ ಈ ಸಂದರ್ಭದಲ್ಲಿ ಇದಕ್ಕೆಲ್ಲ ಉತ್ತರ ಕೊಡಬೇಕಾದ ಸಂಸತ್ತಿನ ಅಧಿವೇಶನ ಇದಾಗಿತ್ತು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.