ಮಂಗಳೂರು : ಮಿಫ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ‘ಆಟಿದ ಆಯನ’ ಕಾರ್ಯಕ್ರಮವನ್ನು ಚೆನ್ನೆಮನೆ ಆಟವನ್ನು ಆಡುವುದರ ಮೂಲಕ ಕದ್ರಿ ನವನೀತ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುನಾಡು ವಿಶಿಷ್ಟವಾದ ಪರಂಪರೆಯನ್ನು ಹೊಂದಿರುವ ನಾಡು. ಇಲ್ಲಿ ಪುರಾತನ ಕಾಲದಿಂದಲೂ ಅನೇಕ ರೀತಿಯ ತಿಂಡಿ ತಿನಿಸುಗಳು ಹಾಗೂ ಬದುಕುವ ವಿಧಾನವನ್ನು ಹಿರಿಯರು ನಮಗೆ ಕಲಿಸಿ ಕೊಟ್ಟಿದ್ದಾರೆ. ಇದನ್ನು ಈಗಿನ ಪೀಳಿಗೆ ಮರೆತಿರುವುದು ದುರದೃಷ್ಟಕರ ಸಂಗತಿ ಎಂದರು. ಇಂತಹ ಸಂದರ್ಭದಲ್ಲಿ ಮಿಫ್ಟ್ ಕಾಲೇಜು ವಿದ್ಯಾರ್ಥಿಗಳಿಗೆ ಇಂತಹ ಪರಂಪರೆಯನ್ನು ನೆನಪಿಸಿಕೊಡುವ ನಿಟ್ಟಿನಲ್ಲಿ ‘ಆಟಿದ ಆಯನ’ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿಸಿದ್ದ ಹಿರಿಯ ಉಪನ್ಯಾಸಕರಾದ ಶ್ರೀ ತುಳಜಾರಾಮ ಮಾತನಾಡಿ, ಈ ನಾಡಿನ ಗೌರವವನ್ನು ಪರ ಊರಿನಲ್ಲಿದ್ದು, ತುಳು ಮಾತನಾಡುವವರ ಮೂಲಕ ನಮ್ಮ ಊರಿನ ಜನರು ಇಲ್ಲಿಗೆ ಗೌರವವನ್ನು ಸಲ್ಲಿಸಿದ ಪರಿಯಾಗಿದೆ. ಆದ್ದರಿಂದ ಈ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕಾಲೇಜಿನ ಸಂಚಾಲಕರಾದ ರಮೇಶ ಕೆ. ಮಾತನಾಡಿ ವಿಶ್ವವಿದ್ಯಾಲಯವು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿಚಾರವನ್ನು ಪದವಿ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡುವುದರ ಮೂಲಕ ಮುಂದಿನ ಯುವಜನತೆಗೆ ಸಮಗ್ರವಾದ ವಿಚಾರವನ್ನು ತಿಳಿಸುವ ಪ್ರಯತ್ನವನ್ನು ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ನಿರ್ದೇಶಕರಾದ ಶ್ರೀ ಎಂ.ಜಿ. ಹೆಗಡೆ ತುಳುನಾಡಿನ ವೈಶಿಷ್ಟ್ಯವನ್ನು ಮುಂದಿನ ದಿನಗಳಲ್ಲಿ ಮ್ಯೂಜಿಯಂಗಳಲ್ಲಿ ನೋಡುವ ಪರಿಸ್ಥಿತಿ ಬರಬಾರದು. ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ಇಂದಿನ ಯುವ ಜನತೆ ತಮ್ಮ ಮನೆಯಲ್ಲಿ ಮಾಡುವ ಆಚಾರ-ವಿಚಾರದೊಂದಿಗೆ ಕಲಿಯಬೇಕೆಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕು.ಚಂದ್ರಲೇಖ ಗೌಡ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಜೆಸ್ಮಿತಾ ಗೌಡ ಮತ್ತು ತಂಡದಿಂದ ಪ್ರಾರ್ಥನೆ ನಡೆಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸಂಪತ್ ಪಕ್ಕಳ ಸ್ವಾಗತಿಸಿದರು. ಕಾಲೇಜು ಉಪನ್ಯಾಸಕ ಕಿಶೋರ್ ಧನ್ಯವಾದವಿತ್ತರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.