ಬೆಂಗಳೂರು: ಕಾಂಗ್ರೆಸ್ ಪಕ್ಷ ಮತ್ತು ಇತರ ಕೆಲವು ಸಂಘಟನೆಗಳು ಕೇಂದ್ರದ ಬಿಜೆಪಿ ಸರಕಾರ ಮತ್ತು ಪಕ್ಷದ ಮೇಲೆ ಪ್ರಮುಖ ವ್ಯಕ್ತಿಗಳ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದು ಅದು ಸಂಪೂರ್ಣವಾಗಿ ನಿರಾಧಾರವಾದುದು ಹಾಗೂ ಸತ್ಯಕ್ಕೆ ದೂರವಾದುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಈ ಸಂಬಂಧ ಸಾಕ್ಷಿ ಅಥವಾ ಆಧಾರ ನೀಡಿಲ್ಲ. ಫೋನ್ ಕದ್ದಾಲಿಕೆ ಸಂಸ್ಕೃತಿ ಇರುವುದು ಕಾಂಗ್ರೆಸ್ನಲ್ಲಿ ಮಾತ್ರ ಎಂದು ಅವರು ಆರೋಪಿಸಿದರು. 2013ರಲ್ಲಿ ಕಾಂಗ್ರೆಸ್ ಮೈತ್ರಿಕೂಟ (ಯುಪಿಎ) ಆಡಳಿತದಲ್ಲಿದ್ದಾಗ ಯುಪಿಎ ಸರ್ಕಾರವು ಪ್ರತಿ ತಿಂಗಳು ಸುಮಾರು 9,000 ಫೋನ್ಗಳ ಕದ್ದಾಲಿಕೆ ಮತ್ತು 500 ಇಮೇಲ್ ಖಾತೆಗಳ ಮೇಲೆ ಕಣ್ಗಾವಲು ಇಡುತ್ತಿದ್ದುದಾಗಿ ನಮ್ಮ ಪಕ್ಷದ ನಾಯಕರು ಮಾಹಿತಿ ಹಕ್ಕು ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರ ಲಭಿಸಿದೆ ಎಂದು ಅವರು ವಿವರಿಸಿದರು. ಯುಪಿಎ ಆಡಳಿತದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಸಚಿವರ ಮೇಲೆ ಮತ್ತು ನಾಯಕರ ವಿರುದ್ಧ ಕದ್ದಾಲಿಕೆ ನಡೆಸಲಾಗುತ್ತಿತ್ತು ಎಂದರು.
ನಮ್ಮ ಸರಕಾರ ಮತ್ತು ದೇಶದ ಮೇಲೆ ಇಲ್ಲಸಲ್ಲದ ಆರೋಪ ಮಾಡಲು ಆಮ್ನೆಸ್ಟಿ ಇಂಟರ್ನ್ಯಾಶನಲ್ ಸಂಸ್ಥೆ ಯತ್ನಿಸುತ್ತಿದೆ. ಅಂಕಿಅಂಶ ಲೀಕ್ ಆಗುತ್ತಿದೆ ಎಂದು ಆರೋಪಿಸುತ್ತಿದ್ದು, ಅದಕ್ಕೂ ಸರಕಾರಕ್ಕೂ ಸಂಬಂಧವೇನು ಎಂದು ಅವರು ಪ್ರಶ್ನಿಸಿದರು. ಡಾಟಾಬೇಸ್ ಹ್ಯಾಕ್ ಮತ್ತು ಲೀಕ್ ಆಗುತ್ತಿದ್ದರೆ ಕದ್ದಾಲಿಕೆ ಎಂದು ಆರೋಪ ಮಾಡುವುದು ಎಷ್ಟು ಸರಿ ಎಂದು ಕೇಳಿದರು. ವಾಟ್ಸ್ ಆ್ಯಪ್ ಹ್ಯಾಕ್ ಮಾಡಿ ಮಾಹಿತಿ ಸೋರಿಕೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ನ ಮುಖಂಡರು ಮತ್ತು ವಕೀಲರೂ ಆದ ಕಪಿಲ್ ಸಿಬಲ್ ಅವರೇ ಸುಪ್ರೀಂ ಕೋರ್ಟ್ ಮುಂದೆ ತಿಳಿಸಿದ್ದಾರೆ. ಫೋನ್ ಕದ್ದಾಲಿಕೆಯನ್ನು ಟೆಲಿಗ್ರಾಫ್ ಕಾಯ್ದೆಯಡಿ ಮಾತ್ರ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಪೆಗಸಿಸ್ ಸಂಸ್ಥೆಯ ಸಾಫ್ಟ್ವೇರ್ 45 ದೇಶಗಳಲ್ಲಿ ಬಳಕೆ ಆಗುತ್ತಿದೆ. ಕೇವಲ ಸಮಸ್ಯೆ ನಿರ್ಮಿಸಲು ಮತ್ತು ದೇಶಕ್ಕೆ ಅಗೌರವ ತರಲು ಹಾಗೂ ಸದನ ನಡೆಯದಂತೆ ತಡೆಯಲು ಇಂಥ ಆರೋಪ ಮಾಡಿದ್ದಾರೆ. ಪ್ರಧಾನಿಯವರು ತಮ್ಮ ಸಚಿವ ಸಂಪುಟದ ನೂತನ ಸದಸ್ಯರನ್ನು ಸದನಕ್ಕೆ ಪರಿಚಯಿಸಲು ಮುಂದಾದಾಗ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಇದು ಖಂಡನೀಯ ಎಂದರು. ನಮ್ಮ ಸರಕಾರದ ವಿರುದ್ಧ ಅಪಪ್ರಚಾರಕ್ಕೆ ದೇಶದ್ರೋಹಿಗಳು ಮತ್ತು ವಿದೇಶಿ ಏಜೆಂಟರು ಯತ್ನಿಸುತ್ತಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಮಾತನಾಡಿ, ಪ್ರಧಾನಿ ಮೋದಿ ಅವರು ಸರ್ವವ್ಯಾಪಿ, ಸರ್ವಸ್ಪರ್ಶಿ ಮಾದರಿಯಲ್ಲಿ ಮಂತ್ರಿ ಮಂಡಲ ರಚಿಸಿದ್ದಾರೆ. ಅದು ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಒಳಗೊಂಡಿದ್ದು, ನೂತನ ಸಚಿವರನ್ನು ಪರಿಚಯಿಸಲು ಅವಕಾಶ ಕೊಡದೆ ಗಲಭೆ ಎಬ್ಬಿಸಲಾಗಿದೆ. 50 ವರ್ಷ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ ನೀಡಲಾಗಿಲ್ಲ ಎಂಬ ಕಾರಣಕ್ಕೆ ಅದರ ವೈಫಲ್ಯವನ್ನು ಮುಚ್ಚಿ ಹಾಕಲು ಉದ್ದೇಶಪೂರ್ವಕವಾಗಿ ಗದ್ದಲ ಎಬ್ಬಿಸಿದ್ದಾರೆ. ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಈ ಹತಾಶ ಪ್ರಯತ್ನವನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ನಿನ್ನೆ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ವಿಚಾರಗಳ ಚರ್ಚೆ ನಡೆಯಬೇಕಿದೆ. ಅಲ್ಲದೆ ನಾವು ಎದುರಿಸಿದ ಕೋವಿಡ್ ಕುರಿತ ಚರ್ಚೆಯೂ ಆಗಬೇಕಿದೆ. ಹಿಂದಿನಿಂದಲೇ ಫೋನ್ ಟ್ಯಾಪಿಂಗ್ ಚರಿತ್ರೆಯನ್ನು ಹೊಂದಿದ ಕಾಂಗ್ರೆಸ್ ಪಕ್ಷವು ಯಾವುದೇ ಸಾಕ್ಷ್ಯಾಧಾರವಿಲ್ಲದೆ ಇಂಥ ಆರೋಪ ಮಾಡಿ ಸದನಕ್ಕೆ ಅಡ್ಡಿಪಡಿಸುತ್ತಿದೆ ಎಂದು ಅವರು ಟೀಕಿಸಿದರು.
ಆಮ್ನೆಸ್ಟಿ ಇಂಟರ್ನ್ಯಾಶನಲ್ ಸಂಸ್ಥೆಯು ಮತಾಂತರಕ್ಕೆ ಪ್ರೇರಣೆ ನೀಡುತ್ತಿತ್ತು. ದೇಶವಿರೋಧಿ ವಿದ್ಯಾರ್ಥಿ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುತ್ತಿತ್ತು. ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿತ್ತು. ಆ ಸಂಸ್ಥೆಯ ಮಾಹಿತಿ ಮತ್ತು ಲೆಕ್ಕ ಕೇಳಿದಾಗ ಸಂಸ್ಥೆ ದೇಶವನ್ನು ತೊರೆಯಿತು ಎಂದು ವಿವರಿಸಿದರು.
ಪ್ರಧಾನಿ ಮೋದಿ ಅವರ ಸರಕಾರದ ಅತ್ಯುತ್ತಮ ಕಾರ್ಯವೈಖರಿಯನ್ನು ಗಮನಿಸಿದ ಕಾಂಗ್ರೆಸ್ ಪಕ್ಷಕ್ಕೆ ಆತಂಕ ಉಂಟಾಗಿದೆ. ಕಾಂಗ್ರೆಸ್ ತನ್ನ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿ ಮಾಡುತ್ತಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ನಡುವಿನ ಮುಸುಕಿನ ಗುದ್ದಾಟದ ಮಾದರಿಯಲ್ಲೇ ರಾಜಸ್ಥಾನದಲ್ಲಿ, ಪಂಜಾಬ್ನಲ್ಲೂ ಕಾಂಗ್ರೆಸ್ ನಾಯಕರ ಗುದ್ದಾಟ ಮುಂದುವರಿದಿದೆ. ಇದನ್ನು ಮುಚ್ಚಿಟ್ಟುಕೊಳ್ಳುವ ಉದ್ದೇಶದಿಂದ ಸಂಸತ್ತಿನಲ್ಲಿ ಗಲಭೆ ಎಬ್ಬಿಸಲಾಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.