ಬೆಂಗಳೂರು: ದೇಶದ ಸಂವಿಧಾನ ಕರ್ತೃ ಮತ್ತು ಮಹಾನ್ ನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಅತಿ ಹೆಚ್ಚು ಅನುಷ್ಠಾನಕ್ಕೆ ತಂದ ಮತ್ತು ಅವರಿಗೆ ಗರಿಷ್ಠ ಗೌರವ ನೀಡಿದ ಪಕ್ಷ ಬಿಜೆಪಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ವರ್ಚುವಲ್ ಆಗಿ ಸೇರಿ ಉದ್ಘಾಟಿಸಿ ಅವರು ಮಾತನಾಡಿದರು. ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಲಾಲ್ ಸಿಂಗ್ ಆರ್ಯ ಅವರೂ ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸಿದ್ದರು.
ಡಾ. ಅಂಬೇಡ್ಕರ್ ಅವರನ್ನು ಸೋಲಿಸಿದ ಮತ್ತು ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಅವರ ಹೆಸರು ಹೇಳಿ ಮತ ಕೇಳುವ ಯಾವ ಹಕ್ಕೂ ಉಳಿದಿಲ್ಲ. ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶವನ್ನೂ ಕಾಂಗ್ರೆಸ್ ನೀಡಲಿಲ್ಲ ಎಂದು ಅವರು ಟೀಕಿಸಿದರು.
ಡಾ.ಅಂಬೇಡ್ಕರ್ ಅವರು ಹುಟ್ಟಿದ ಮಹುವಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಅದನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಮಾಡಿದೆ. ದೀಕ್ಷಾ ಭೂಮಿ, ಕರ್ಮ ಭೂಮಿ ಸೇರಿದಂತೆ ಅವರು ಕಾರ್ಯನಿರ್ವಹಿಸಿದ ಎಲ್ಲೆಡೆ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ. ಅದನ್ನು ದಲಿತರು, ಬುದ್ಧಿಜೀವಿಗಳಿಗೆ ತಿಳಿಸುವ ಕಾರ್ಯ ನಡೆಸಬೇಕು ಎಂದು ಆಶಿಸಿದರು.
ಬಿಜೆಪಿ ದಲಿತ ವಿರೋಧಿ ಎಂಬ ಅಪಪ್ರಚಾರವನ್ನು ಪ್ರಚಾರದ ಮೂಲಕ ಎದುರಿಸಬೇಕು ಎಂದು ಅವರು ಕರೆ ನೀಡಿದರು. ಕಾಂಗ್ರೆಸ್ನ ಚಿಂತನೆಗಳನ್ನು ಆಧರಿಸಿದ ಡಾ. ಅಂಬೇಡ್ಕರ್ ಅವರು ಕಾಂಗ್ರೆಸ್ಸನ್ನು ಉರಿಯುವ ಮನೆ ಎಂದು ಕರೆದಿದ್ದರು. ಇದನ್ನು ತಿಳಿವಳಿಕೆ ಇರುವ ಜನರ ನಡುವೆ ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ದೇಶ ಮೊದಲು ಎಂಬ ಚಿಂತನೆಯುಳ್ಳ ಬಿಜೆಪಿಯನ್ನು ಬಲಪಡಿಸಲು ವಿವಿಧ ಮೋರ್ಚಾಗಳು ಕಾರ್ಯ ನಿರ್ವಹಿಸಬೇಕು. ಶೇ 35ಕ್ಕೂ ಹೆಚ್ಚು ಜನಸಂಖ್ಯೆಯನ್ನು ಪ್ರತಿನಿಧಿಸುವ ಈ ಮೋರ್ಚಾವು ಗರಿಷ್ಠ ಜವಾಬ್ದಾರಿಯನ್ನು ಹೊಂದಿದೆ. ಈ ಮೋರ್ಚಾದ ಜವಾಬ್ದಾರಿ ನೀಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
100ಕ್ಕೂ ಹೆಚ್ಚು ದಲಿತರಿರುವ ಬೂತ್ನಲ್ಲಿ ದಲಿತ ಮೋರ್ಚಾದ ಸಂಘಟನೆಯನ್ನು ದೃಢಗೊಳಿಸಬೇಕು. ಎಸ್ಸಿ ವಿದ್ಯಾರ್ಥಿ ನಿಲಯಗಳಲ್ಲಿ ಉಸ್ತುವಾರಿಗಳನ್ನು ನೇಮಿಸಿ ವಾಸ್ತವಿಕ ಸಂಗತಿಗಳನ್ನು ತಿಳಿಸಬೇಕು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ದಲಿತ ಸಮುದಾಯದ ಮೇಲೆ ಪ್ರಭಾವ ಬೀರಬಹುದಾದ ನಾಯಕರನ್ನು ಗುರುತಿಸಿ ಅವರಿಗೆ ಪಕ್ಷದ ಕಾರ್ಯವನ್ನು ತಿಳಿಸಬೇಕು. ಇದರಿಂದ ನಮ್ಮ ಪಕ್ಷವನ್ನು ಬಲಪಡಿಸಲು ಅವಕಾಶವಿದೆ ಎಂದರು.
ದಲಿತರ ಹಿತಾಸಕ್ತಿ ಕಾಪಾಡುವುದು ಮತ್ತು ಆತ್ಮಗೌರವ ಬೆಳೆಸಿ ಆತ್ಮನಿರ್ಭರತೆ ಕಡೆ ಸಾಗುವ ಪ್ರಯತ್ನ ನಡೆಸಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತು ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದಲಿತರ ಹಿತಾಸಕ್ತಿ ಕಾಪಾಡಲು ಬೇಕಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾವು ಸದಾ ಕಾಲ ಜನ ಸಮುದಾಯದ ಹಿತವನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯದ ಪರಿಕಲ್ಪನೆಯು ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ಶೇ 100ಕ್ಕೆ ನೂರು ಸೌಕರ್ಯ ಈಗ ಸಾಕಾರಗೊಳ್ಳುತ್ತಿದೆ. ಹಿಂದೆ ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ ಎಲ್ಲೆಡೆ ಅಧಿಕಾರದಲ್ಲಿತ್ತು. ಆಗ 100 ರೂಪಾಯಿ ಅನುದಾನ ಬಿಡುಗಡೆಯಾದರೆ ಅದರಲ್ಲಿ ಕೇವಲ 15 ರೂಪಾಯಿ ಫಲಾನುಭವಿಗೆ ತಲುಪುತ್ತಿತ್ತು ಎಂದು ಸ್ವತಃ ರಾಜೀವ್ ಗಾಂಧಿ ಅವರೇ ಹೇಳಿಕೊಂಡಿದ್ದರು. ಹಾಗಿದ್ದರೆ ಭ್ರಷ್ಟಾಚಾರ ಯಾರಿಂದ ನಡೆಯುತ್ತಿತ್ತು ಎಂಬುದು ಅರ್ಥವಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ದಲಿತರಿಗಾಗಿ ಅತಿ ಹೆಚ್ಚು ಅನುದಾನ ಮತ್ತು ಅದರ ಸಮರ್ಪಕ ಅನುಷ್ಠಾನ ಕಾರ್ಯ ಬಿಜೆಪಿ ಸರಕಾರದಲ್ಲಿ ನಡೆದಿದೆ. ಈ ವಿಚಾರವನ್ನು ದಲಿತ ಸಮುದಾಯಕ್ಕೆ ತಿಳಿಸುವ ಕಾರ್ಯ ನಡೆಯಬೇಕು ಎಂದು ಅವರು ತಿಳಿಸಿದರು. ಇದನ್ನು ಕಾಂಗ್ರೆಸ್ ಅಥವಾ ನಮ್ಮ ರಾಜಕೀಯ ವಿರೋಧಿಗಳು ಪ್ರಚಾರ ಮಾಡುವುದಿಲ್ಲ ಎಂಬುದು ನಮ್ಮ ಗಮನದಲ್ಲಿರಲಿ ಎಂದರು. ಈ ಮೋರ್ಚಾದ ಪದಾಧಿಕಾರಿಗಳು ಜನಪರ ಕಾರ್ಯ ಮತ್ತು ಜನಪರ ಹೋರಾಟದ ಮೂಲಕ ಜನನಾಯಕರಾಗಿ ಬೆಳೆಯಬೇಕು ಎಂದು ಆಶಿಸಿದರು.
ಕಾಂಗ್ರೆಸ್ನವರು ಬಡವರ ಬಡತನ ದೂರ ಮಾಡಲು ಯಾವುದೇ ಯೋಜನೆ ರೂಪಿಸಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಜನ್ಧನ್ ಖಾತೆಗಳ ಮೂಲಕ ಬಡವರನ್ನು ಬ್ಯಾಂಕಿಂಗ್ ಜೊತೆ ಜೋಡಿಸಿದರು. ಅವರ ಖಾತೆಗೆ ಹಣ ಹಾಕಿ ಅವರ ಬದುಕಿನ ಆಲೋಚನೆಗಳನ್ನು ಬದಲಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ, ದೀನದಯಾಳ್ ವಿದ್ಯುತ್ತೀಕರಣ ಯೋಜನೆ, ಸೌಭಾಗ್ಯ ಯೋಜನೆ, ಉಜ್ವಲಾ ಗ್ಯಾಸ್ ಯೋಜನೆ- ಇವೆಲ್ಲವೂ ಬಡಜನರಿಗಾಗಿ ರೂಪಿತವಾದ ಯೋಜನೆಗಳು ಎಂದು ವಿವರಿಸಿದರು. ಕೋವಿಡ್ ಸಂಕಷ್ಟವನ್ನು ಗಮನಿಸಿ ಬಡವರಿಗೆ ಉಚಿತ ಪಡಿತರ ನೀಡುವ ಕಾರ್ಯವನ್ನೂ ಕೇಂದ್ರ ಸರಕಾರ ಮಾಡಿದೆ ಎಂದರು.
ವಲಸೆ ಕಾರ್ಮಿಕರನ್ನು ಗಮನದಲ್ಲಿ ಇಟ್ಟುಕೊಂಡು ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಗೊಳಿಸಲಾಗಿದೆ. ಮುದ್ರಾ ಯೋಜನೆ, ಸ್ಟಾರ್ಟಪ್ ಮೂಲಕ ಕೈಗಾರಿಕೆ ಸ್ಥಾಪನೆಗೆ ಶೂರಿಟಿ ಕೊಡಲಾಗಿದೆ. ಇವೆಲ್ಲವೂ ಕೆಲವು ಸ್ಯಾಂಪಲ್ಗಳಷ್ಟೇ ಎಂದರು. ಸಮೂಹವನ್ನು ಸಂಘಟಿಸುವ ಕೆಲಸವನ್ನು ಮೋರ್ಚಾಗಳು ಮಾಡಬೇಕು ಎಂದರು.
ಪಕ್ಷದ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ ಕೇಂದ್ರ ಸರಕಾರವು ದಲಿತರಿಗೆ ಸಂಪುಟದಲ್ಲಿ 20 ಸ್ಥಾನ ನೀಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ. ಇದರಿಂದ ಕಾಂಗ್ರೆಸ್ನವರು ವಿಚಲತರಾಗಿರುವುದು ಕಂಡುಬರುತ್ತದೆ. ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆಯವರು ಇದನ್ನು ಸ್ವಾಗತಿಸುವುದನ್ನು ಬಿಟ್ಟು ಟೀಕಿಸಿದ್ದು ಸಮಜಂಸವಲ್ಲ ಎಂದು ತಿಳಿಸಿದರು.
ದಲಿತ ಕವಿ ಶ್ರೀ ಸಿದ್ದಲಿಂಗಯ್ಯನವರು ನಿಧನರಾದಾಗ ಎಸ್ಸಿ ಮೋರ್ಚಾವು ಅದನ್ನು ಪಕ್ಷದ ಗಮನಕ್ಕೆ ತಂದಾಗ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದರು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಅವರು ಸಂತಾಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಸರಕಾರಿ ಗೌರವದ ಮೂಲಕ ಅಂತಿಮ ವಿಧಿ ನೆರವೇರಿಸುವ ನಿರ್ಧಾರ ಕೈಗೊಂಡರು. ಇವೆಲ್ಲವೂ ಬಿಜೆಪಿಯು ದಲಿತರ ನಿಲುವನ್ನು ಎತ್ತಿ ತೋರಿಸುತ್ತದೆ ಎಂದು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯದ ಮೇಲೆ ಮುಸ್ಲಿಂ ಸಮುದಾಯದವರ ದಾಳಿಗಳು ಹೆಚ್ಚುತ್ತಿದ್ದು ಇದರ ಬಗ್ಗೆ, ನಮ್ಮ ಸಮುದಾಯಗಳ ಮುಖಂಡರು ಇದರ ಕಾರಣದ ಬಗ್ಗೆ ಕೂಲಂಕಶವಾಗಿ ಪರಾಮರ್ಶಿಸಬೇಕು ಇದಕ್ಕೆ ಯಾರಾದರೂ ಕುಮ್ಮಕ್ಕು ನೀಡುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡುವಾಗ ಕಂಡುಕೊಂಡ ವಿಚಾರವೇನೆಂದರೆ ಭಾರತೀಯ ಜನತಾ ಪಕ್ಷದ ಕಡೆಗೆ ದಲಿತ ಸಮುದಾಯದವರ ಒಲವು ಬಹಳ ಹೆಚ್ಚುತ್ತಿದೆ. ಎಲ್ಲಿ ಹೋದರೂ ಸಮುದಾಯದವರು ತೋರುವ ಅದ್ದೂರಿ ಸ್ವಾಗತಗಳೇ ಇದಕ್ಕೆ ಸಾಕ್ಷಿ. ಇದು ಕೂಡ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ವಿಚಲಿತರಾಗಲು ದೊಡ್ಡ ಕಾರಣ ಎಂದು ವಿವರಿಸಿದರು.
ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಬಾಬು, ಜಗದೀಶ್, ಪದಾಧಿಕಾರಿಗಳು, ಆಹ್ವಾನಿತರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.