ಕಾಪು : ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ವಿವಾದಿತ ಯು.ಪಿ.ಸಿ.ಎಲ್. ಉಷ್ಣ ವಿದ್ಯುತ್ ಯೋಜನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಇದೀಗ ಮತ್ತೆ ಯೋಜನೆ ವಿಸ್ತರಿಸಿ 2ನೇ ಹಂತಕ್ಕೆ ಅನುಮತಿ ನೀಡಿದರೆ ಅದು ಕರಾವಳಿ ಜಿಲ್ಲೆಯ ದೊಡ್ಡ ದುರಂತವಾಗಲಿದೆ ಎಂದು ಗ್ರಾ.ಪಂ. ಒಕ್ಕೂಟದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಅಭಿವೃದ್ಧಿಗಲ್ಲ
ಸದ್ರಿ ಯೋಜನೆಯನ್ನು ಲ್ಯಾಂಕೋದಿಂದ ಅದಾನಿ ಗ್ರೂಪ್ನವರು ಖರೀದಿಸಿದ್ದು, ಯೋಜನೆ ಸಂಪೂರ್ಣವಾಗಿ ವ್ಯಾಪಾರದ ಉದ್ದೇಶಕ್ಕಾಗಿ ನಿರ್ಮಾಣವಾಗಿದೆಯೇ ಹೊರತು ಯಾವುದೇ ಅಭಿವೃದ್ಧಿಗಲ್ಲ. 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕ ಈಗಾಗಲೇ ಕಾರ್ಯಾರಂಭಗೊಂಡಿದ್ದು, ಮುಂದೆ ಮತ್ತೆ 1,650 ಮೆ.ವ್ಯಾ. ಉಷ್ಣ ವಿದ್ಯುತ್ ಘಟಕ ಸ್ಥಾಪಿಸಲು ಅನುಮತಿಗೆ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಸರಕಾರ ಅನುಮತಿ ನೀಡಿದರೆ ಕರಾವಳಿ ಜಿಲ್ಲೆ ಸಂಪೂರ್ಣ ಭಸ್ಮವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತುಳುನಾಡಿನ ಸೌಂರ್ದಯ ಕನಸಾಗಬಹುದು
ಇದರಿಂದ ಪರಿಸರ ಮತ್ತು ಆರೋಗ್ಯದಲ್ಲಿ ತೊಂದರೆ, ಮಾನವ ಮತ್ತು ಪ್ರಾಣಿಗಳಲ್ಲಿ ಭಯಾನಕ ರೋಗಗಳು ಹರಡುವ ಸಾಧ್ಯತೆಯಿದೆ. ವಿಪರೀತ ಬಿಸಿ, ಬೆಳೆ ನಾಶ, ಕುಡಿಯುವ ನೀರಿನಲ್ಲಿ ಉಪ್ಪು ನೀರು ಮತ್ತು ಹಾರುಬೂದಿ ಮಿಶ್ರವಾಗಿ ವಿಷಪೂರಿತವಾಗುವ ಸಂಭವವಿದೆ. ನಮ್ಮ ತುಳುನಾಡಿನ ಭವ್ಯ ಪರಂಪರೆ, ಕೃಷಿ, ಸುಂದರ ವಾತಾವರಣ ಕನಸಾಗಬಹುದು. ಸಮುದ್ರದಲ್ಲಿ ಮತ್ಸ್ಯ ನಾಶವಾಗುವಂತೆ ಭಯಾನಕ ವಾತಾವರಣ ಸೃಷ್ಟಿಯಾಗಲಿದೆ. ಆದುದರಿಂದ ಸದ್ರಿ ಯೋಜನೆಯನ್ನು ತತ್ಕ್ಷಣ ಕೈಬಿಡಬೇಕೆಂದು ಡಾ| ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.
ಸಚಿವರ ಹೇಳಿಕೆ ಸ್ವಾಗತಾರ್ಹ
ಯೋಜನ ಪ್ರದೇಶದ ಸುತ್ತಲೂ ಪಶ್ಚಿಮಘಟ್ಟ ಆವರಿಸಿದ್ದು, ಸಂಪೂರ್ಣ ಕೃಷಿ ಭೂಮಿ ಹೊಂದಿದೆ. ಇಂತಹ ದೈತ್ಯ ಉಷ್ಣ ವಿದ್ಯುತ್ ಸ್ಥಾವರಗಳು ನಮ್ಮ ಜಿಲ್ಲೆಗೆ ಯೋಗ್ಯವಲ್ಲವೆಂದು ಈಗಾಗಲೇ ತಜ್ಞರು ವರದಿ ಸಲ್ಲಿಸಿದ್ದಾರೆ. ಕರಾವಳಿ ಭಾಗ ಸೂಕ್ಷ್ಮ ಪ್ರದೇಶವಾಗಿದ್ದು, ಧಾರಣಾ ಸಾಮರ್ಥಯದ ಅಧ್ಯಯನ ನಡೆಸದೆ ಯೋಜನೆಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ನೀಡಿರುವ ಹೇಳಿಕೆ ಸ್ವಾಗತಾರ್ಹ ಎಂದು ಅವರು ಹೇಳಿದರು.
ನಮ್ಮ ಅಳಿವು-ಉಳಿವಿನ ಹೋರಾಟ
ಸದ್ರಿ ಯೋಜನೆಯಿಂದ ಅವಿಭಜಿತ ದ.ಕ. ಜಿಲ್ಲೆಗೆ ಯಾವುದೇ ಲಾಭವಾಗಿಲ್ಲ. ಪ್ರತಿ ತಿಂಗಳೂ ಬೆಸ್ಕಾಂ ಬೆಂಗಳೂರಿಗೆ 400 ಕೋ. ರೂ. ವಿದ್ಯುತ್ ನೀಡುತ್ತಿದ್ದು, ನಮ್ಮ ಉಭಯ ಜಿಲ್ಲೆಯ ಮೆಸ್ಕಾಂಗೆ ಕೇವಲ 40 ಲ. ರೂ. ವೆಚ್ಚದ ವಿದ್ಯುತ್ ಸರಬರಾಜಾಗುತ್ತಿದೆ. ಸ್ಥಳೀಯ ಗ್ರಾಮಪಂಚಾಯತ್ಗೆ ಕ್ರಮಬದ್ಧ ತೆರಿಗೆ ಕಟ್ಟುವುದರಲ್ಲೂ ವಂಚನೆ ಮಾಡುತ್ತಿದ್ದಾರೆ. ಸ್ಥಳೀಯಾಭಿವೃದ್ಧಿ ಯೋಜನೆಯ ಕ್ರಿಯಾ ಯೋಜನೆಯನ್ನೇ ಸಿದ್ದಪಡಿಸಿಲ್ಲ. ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ, ನಿರ್ವಸಿತರ ಕಾಲನಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಇದೀಗ ಬಂದಿರುವ ಅದಾನಿ ಗುಂಪು ಕೂಡ ಅದೇ ದಿಕ್ಕಿನಲ್ಲಿ ನಡೆಯುತ್ತಿದ್ದು, ಇದು ನಮ್ಮ ಮುಂದಿನ ಪೀಳಿಗೆಗೆ ಅಳಿವು-ಉಳಿವಿನ ಹೋರಾಟವಾಗಲಿದೆ ಎಂದು ಎಚ್ಚರಿಸಿದ್ದಾರೆ.
ರಾಜಕೀಯ ರಹಿತ ಹೋರಾಟಕ್ಕೆ ಪೇಜಾವರ ಶ್ರೀ ನೇತೃತ್ವ ವಹಿಸಲಿ
ಕರಾವಳಿ ಜಿಲ್ಲೆಯ ಸಮಸ್ತ ಬುದ್ಧಿಜೀವಿಗಳು, ವಿವಿಧ ಸಂಘಟನೆ, ವಿದ್ಯಾರ್ಥಿಗಳು, ರಾಜಕೀಯ ನಾಯಕರು, ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಉಸ್ತುವಾರಿ ಸಚಿವರು ಮತ್ತು ಎಲ್ಲ ಶಾಸಕರು, ಸಂಸದರ ಮೇಲೆ ಜನರಿಗೆ ವಿಶ್ವಾಸವಿದ್ದು, ನಮ್ಮೆಲ್ಲರ ಗುರುಗಳೂ ಈ ಬಗ್ಗೆ ಗಾಢ ಚಿಂತನೆ ಇರುವ ಪೇಜಾವರ ಶ್ರೀಗಳು ಸದ್ರಿ ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಡಾ| ದೇವಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.