ಮಂಗಳೂರು: ಇಂದು ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ನ ಮೊದಲ ಗೋಷ್ಠಿಯಲ್ಲಿ Post Pandemic Narrative: Reimagining the India Way ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಾಯಿತು.
ಶಕ್ತಿ ಸಿನ್ಹಾ ಅವರು ವಿಚಾರ ಮಂಡಿಸಿ, ಕೊರೋನಾ ಬಳಿಕ ಭಾರತ ತನ್ನದೇ ಆದ ರೀತಿಯಲ್ಲಿ ಈ ಸಂಕಷ್ಟದ ಸ್ಥಿತಿಯನ್ನು ನಿಯಂತ್ರಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾರತ ವಿಶ್ವಗುರುವಾಗುವತ್ತ ಈ ನಿಲುವುಗಳು ಸಹ ಪ್ರಾಮುಖ್ಯತೆ ಪಡೆದಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಅಂತರಾಷ್ಟ್ರೀಯ ವಿಚಾರಗಳಲ್ಲಿ ಸಾಧನೆ ಮೆರೆದಿದೆ. ಕೊರೋನಾಗೆ ಲಸಿಕೆ ಹುಡುಕಿ ಅದನ್ನು ದೇಶ, ವಿದೇಶಗಳಿಗೆ ತಲುಪಿಸುವ ಕೆಲಸವನ್ನು ಮಾಡಿದೆ ಎಂದು ಹೇಳಿದರು.
ನಾವು ಈ ಸಂಕಷ್ಟದ ಸಂದರ್ಭದಲ್ಲಿಯೂ ಅಭಿವೃದ್ಧಿಯತ್ತ ಹೆಜ್ಜೆ ಇರಿಸಿದ್ದೇವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಆತ್ಮನಿರ್ಭರದ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸಿದೆ. ಆ ಮೂಲಕ ನಾಯಕನ ಸ್ಥಾನವನ್ನು ಪಡೆದಿದೆ ಎಂದು ಅವರು ಹೇಳಿದರು.
ವಿಕ್ರಂ ಸೂದ್ ಅವರು ಮಾತನಾಡಿ, ಕೊರೋನಾ ಬಳಿಕ ಭಾರತ ಚೇತರಿಸಿಕೊಳ್ಳಲು ಆಯ್ಕೆ ಮಾಡಿದ ದಾರಿಯೇ ಅದ್ಭುತ. ಭಾರತ ಪಡೆದುಕೊಳ್ಳುವ ಸಂಸ್ಕೃತಿಯಿಂದ ನೀಡುವ ಸಂಸ್ಕೃತಿಗೆ ಬೆಳೆದಿದೆ. ಭಾರತ ಚೀನಾ ವಿರುದ್ಧ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದೆ. ಭಾರತದ ರಾಷ್ಟ್ರೀಯ ಆಸ್ಥೆಗಳು ದೇಶವನ್ನು ಸಮೃದ್ಧವಾಗಿಸಿದೆ. ನಮ್ಮ ಸಂಸ್ಕೃತಿ ಇತಿಹಾಸವನ್ನು ಮರೆಯದೆ ಮುಂದುವರೆಯಬೇಕು ಎಂದು ಹೇಳಿದರು.
ಪ್ರೊ. ಮಾಧವ್ ನಲಪತ್ ಮಾತನಾಡಿ, ನಮ್ಮ ದೇಶಕ್ಕೆ ಅದರದ್ದೇ ಆದ ಇತಿಹಾಸವಿದೆ. ನಾವು ನಮ್ಮಲ್ಲಿನ ಶಕ್ತಿಯನ್ನು ತಿಳಿದುಕೊಳ್ಳುವಲ್ಲಿ ಸಾಧ್ಯವಾಗಿದೆ. ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಸಹಾಯವಾಗಿದೆ. ನಾಗರೀಕತೆಯ ಬಗ್ಗೆ ನಮ್ಮಲ್ಲಿ ಅರಿವು ಮೂಡಿದೆ. ಆ ಮೂಲಕ ಜಗತ್ತಿಗೆ ನಾವು ಯಾವ ರೀತಿಯಲ್ಲಿ ಗುರುತಿಸಿಕೊಳ್ಳಬೇಕು ಎಂಬುದರ ಬಗ್ಗೆ ಭಾರತ ತಿಳಿದುಕೊಂಡಿದೆ. ವಿಶ್ವಕ್ಕೆ ಸಮಸ್ಯೆಗಳನ್ನು ಹೇಳುವ ಬದಲು, ವಿಶ್ವದ ಸಮಸ್ಯೆಗೆ ಪರಿಹಾರ ನೀಡುವಂತಾಗಬೇಕು ಎಂಬ ಗುರಿಯ ಜೊತೆಗೆ ಭಾರತ ಇಂದು ಹೆಜ್ಜೆ ನೆಟ್ಟಿದೆ. ಭಾರತ ವಸುದೈವ ಕುಟುಂಬಕಂ ಎಂಬ ಧ್ಯೇಯದ ಜೊತೆಗೆ ವಿಶ್ವಮಾನ್ಯವಾಗುತ್ತಿದೆ ಎಂದು ತಿಳಿಸಿದರು. ಕೊರೋನಾ ಸಂಕಷ್ಟದಲ್ಲಿ ಜಗತ್ತು ಒಂದು ಕುಟುಂಬ ಎಂಬಂತೆ ಭಾರತ ವಿಶ್ವವನ್ನು ಗಣನೆಗೆ ತೆಗೆದುಕೊಂಡಿದೆ. ಕೊರೋನಾ ಅವಧಿಯನ್ನು ಭಾರತ ಅವಕಾಶವಾಗಿ ಬಳಸಿಕೊಂಡಿದೆ ಎಂದು ಹೇಳಿದರು.
ಡಾ. ದತ್ತೇಶ್ ಡಿ ಪ್ರಭು ಪರುಲೇಖಾ ಅವರು ಮಾತನಾಡಿ, ಕೊರೋನಾ ನಂತರದಲ್ಲಿ ಭಾರತದ ವಿದೇಶೀ ನೀತಿಯಲ್ಲಿ ಬದಲಾವಣೆಯಾಗಿದೆ. ಭಾರತದ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಸಂಕಷ್ಟದ ಸಮಯ ಸಹಾಯ ಮಾಡಿದೆ. ನಾಲ್ಕೂ ದಿಕ್ಕುಗಳಲ್ಲಿ ಭಾರತದ ಸ್ಥಾನ ಉನ್ನತಸ್ಥರಕ್ಕೇರಿದೆ. ಭಾರತ ರಾಜಕೀಯವಾಗಿ ವಿಶ್ವದೆದುರು ತನ್ನನ್ನು ಪ್ರದರ್ಶಿಸದೆ, ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕೆಲಸಗಳನ್ನು ನಿರ್ವಹಿಸಿದೆ. ಕೊರೋನಾ ಸಂಕಷ್ಟ ನಿವಾರಣೆಯ ನಾಯಕತ್ವವನ್ನು ಭಾರತ ವಹಿಸಿದೆ ಎಂದೆನ್ನಬಹುದು ಎಂದು ತಮ್ಮ ವಿಚಾರಗಳನ್ನು ಮಂಡಿಸಿದರು.
ಕೊರೋನಾ ಬಳಿಕ ದೇಶ ಸಮೃದ್ಧವಾಗಿದೆ. ತನ್ನ ಜೊತೆಗೆ ಜಗತ್ತಿನ ಸುರಕ್ಷತೆಗೂ ಭಾರತ ಪ್ರಾಮುಖ್ಯತೆ ನೀಡಿದೆ. ಆ ಮೂಲಕ ಭಾರತ ವಿಶ್ವದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ ಎಂದು ಡಾ. ನಂದಕಿಶೋರ್ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.