ತುಮಕೂರು: ಜಿಲ್ಲೆಯ ಪಾವಗಡದಂತಹ ಹಿಂದುಳಿದ ತಾಲೂಕಿನಲ್ಲಿ ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹೊಸ ಆಸ್ಪತ್ರೆಯನ್ನು ಆರಂಭಿಸಲು ಹೊರಟಿರುವ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದರ ಸೇವಾ ಕಾರ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಮುಖೇನ ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಧಾನಿಗಳು ಬರೆದಿರುವ ಪತ್ರವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಸ್ವಾಮೀಜಿ, ಈ ಪತ್ರದಲ್ಲಿ ಕುಷ್ಟ, ನೇತ್ರ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸೇವೆಗಳ ಕುರಿತಾಗಿ, ಕೊರೋನಾ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಒದಗಿಸಿರುವ ಸೇವೆಗೆ ಸಂಬಂಧಿಸಿದಂತೆ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. ಮೋದಿ ಅವರು ತಮ್ಮ ಪತ್ರದಲ್ಲಿ ಉಪನಿಷತ್ ವಾಣಿಯಾಗಿರುವ ʼಸರ್ವೇ ಭವಂತು ಸುಖಿನಃ, ಸರ್ವೇ ಸಂತುಲ ನಿರಾಮಯಃʼ ಎಂಬ ಉಕ್ತಿಯನ್ನೂ ಉಲ್ಲೇಖ ಮಾಡಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿಯ ಸಂದರ್ಭದಲ್ಲಿ ದೇಶದಾದ್ಯಂತ ಶ್ರೀ ರಾಮಕೃಷ್ಣಾಶ್ರಮ ನೀಡಿರುವ ಸೇವೆಯ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇದೀಗ ಪಾವಗಡದಲ್ಲಿ ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಇನ್ಫೋಸಿಸ್ ಫೌಂಡೇಶನ್ ಸಹಭಾಗಿತ್ವದ ಜೊತೆಗೆ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಅಶಕ್ತರಿಗೆ, ಬಡವರಿಗೆ ಅತ್ಯಾಧುನಿಕ ಸೇವೆ ಒದಗಿಸುವ ಭರವಸೆ ಇರುವುದಾಗಿಯೂ ಪ್ರಧಾನಿಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.