ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇಂದು ಬಜೆಟ್ ಮಂಡನೆ ಮಾಡಿದ್ದಾರೆ. ಯಡಿಯೂರಪ್ಪ ಅವರು ಮಂಡಿಸುತ್ತಿರುವ 8ನೇ ಬಜೆಟ್ ಇದಾಗಿದೆ. 2021-2022ನೇ ಸಾಲಿನ ಆಯವ್ಯಯ ಮಂಡನೆ ವೇಳೆ, ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು ಕೊರೊನಾ ಸಂದರ್ಭದಲ್ಲಿ ಶ್ರಮಿಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕೊರೊನಾ ಸಂಕಷ್ಟದ ನಡುವೆಯೂ ಸರ್ಕಾರ ಕೆಲಸ ಮಾಡಿದೆ. ಆರೋಗ್ಯ, ಮೂಲಸೌಕರ್ಯಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದಿದ್ದಾರೆ.
ವೈದ್ಯರು, ಪೊಲೀಸರು, ಕಂದಾಯ, ನಗರಾಭಿವೃದ್ಧಿ ಸಿಬ್ಬಂದಿ ಕೊರೊನಾ ಸಂಕಷ್ಟದಲ್ಲಿ ಹಗಲಿರಳು ಕೆಲಸ ಮಾಡಿದ್ದಾರೆ. ಕೊರೊನಾ ಸಂಕಷ್ಟವನ್ನು ನಾವು ಒಂದು ಕ್ಷಣವೂ ಮರೆಯುವಂತಿಲ್ಲ. ಕೊರೊನಾ ಸಂಕಷ್ಟ ಒಂದು ದುಸ್ವಪ್ನ ಎಂದು ಕೊರೋನಾ ಸಂದರ್ಭವನ್ನು ಸ್ಮರಿಸಿಕೊಂಡಿದ್ದಾರೆ.
ಮಹಿಳೆಯರಿಗೆ ಸಾಕಷ್ಟು ಕೊಡುಗೆ ಘೋಷಿಸಿದ ಅವರು, ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನಾ ಕೇಂದ್ರಗಳು, ಮಹಿಳಾ ಉದ್ಯಮಿಗಳಿಗೆ ಶೇ. 4ರ ಬಡ್ಡಿದರದಲ್ಲಿ ಸಾಲ, ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ, 2 ಕೋಟಿ ರೂಪಾಯಿಗಳವರೆಗೆ ಮಹಿಳೆಯರಿಗೆ ಸಾಲ, ಶೇ.4ರಷ್ಟು ಬಡ್ಡಿದರದಲ್ಲಿ ಸಾಲ, ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ, ಈ ಬಾರಿ ಯಾವುದೇ ತೆರಿಗೆ ವಿಧಿಸದಿರುವ ನಿರ್ಧಾರ, ಹಪ್ಪಳ, ಉಪ್ಪಿನಕಾಯಿ ತಯಾರಕರಿಗೆ ಆನ್ ಲೈನ್ ಮಾರುಕಟ್ಟೆ, ಇದರಿಂದ ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ ಘೋಷಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ 7,500 ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.
ಅಬಕಾರಿ ತೆರಿಗೆ ಹೆಚ್ಚಳ ಇಲ್ಲ. ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ. 45 ಲಕ್ಷ ರೂಪಾಯಿವರೆಗಿನ ಫ್ಲ್ಯಾಟ್ ಖರೀದಿಗೆ ಮುದ್ರಾಂಕ ಶುಲ್ಕ ಇಲ್ಲ.
100 ತಾಲೂಕುಗಳಲ್ಲಿ ಆರು ಹಾಸಿಗೆಯ ಐಸಿಯು ನಿರ್ಮಾಣ, ಪ್ರತಿ ಜಿಲ್ಲೆಗೆ ಒಂದು ಗೋ ಶಾಲೆ ಘೋಷಣೆ ಮಾಡಿದ್ದಾರೆ.
ಸರ್ಕಾರಿ ಶಾಲೆಗಳ ಪೀಠೋಪಕರಣಕ್ಕೆ 50 ಕೋಟಿ ರೂಪಾಯಿ ಮೀಸಲು, ಸ್ಮಾರ್ಟ್ ಕ್ಲಾಸ್ ರೂಂಗಳಿಗಾಗಿ 50 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.
ಉಡುಪಿ ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣೆ, ಸೋಮೇಶ್ವರ ಸೇರಿ ಕಡಲ ತೀರ ಅಭಿವೃದ್ದಿಗೆ ಹತ್ತು ಕೋಟಿ ರೂಪಾಯಿ ಘೋಷಿಸಿದ್ದಾರೆ.
ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಗೃಹ, ಅಲ್ಪ ಸಂಖ್ಯಾತರ ಅಭಿವೃದ್ಧಿಗೆ 1,500 ಕೋಟಿ ರೂಪಾಯಿ ಘೋಷಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣಗಳ ಸ್ಥಾಪನೆ, ಉಪನಗರ ರೈಲು ಯೋಜನೆಗೆ 15, 767 ಕೋಟಿ ರೂಪಾಯಿ. ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ.
ಒಕ್ಕಲಿಗ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂಪಾಯಿ, ಹಿಂದುಳಿದ ವರ್ಗಗಳಿಗೆ 500 ಕೋಟಿ ರೂಪಾಯಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 50 ಕೋಟಿ ಘೋಷಣೆ ಮಾಡಲಾಗಿದೆ.
ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ನಿರ್ಮಾಣ, ಆದಿಚುಂಚನಗಿರಿ ಮಠಕ್ಕೆ 10 ಕೋಟಿ ರೂಪಾಯಿ, ಮಂಡ್ಯ ಸ್ಟೇಡಿಯಂಗೆ 10 ಕೋಟಿ ರೂಪಾಯಿ, ಬಸವಕಲ್ಯಾಣಕ್ಕೆ 200 ಕೋಟಿ ರೂ.ಘೋಷಣೆ ಮಾಡಲಾಗಿದೆ.
ಅಡಿಕೆ ಪರಿಹಾರ ಬೆಲೆ ಪ್ರೋತ್ಸಾಹಕ್ಕೆ 25 ಕೋಟಿ ರೂಪಾಯಿ ಘೋಷಣೆ. 234 ಕೆರೆ ತುಂಬಿಸುವ ಯೋಜನೆಗೆ 500 ಕೋಟಿ ರೂಪಾಯಿ ಘೋಷಣೆ.
ಮಹದಾಯಿ ಯೋಜನೆಗೆ 1677 ಕೋಟಿ ರೂಪಾಯಿ ಅನುದಾನ, ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂಪಾಯಿ, ಜೈನ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ಘೋಷಣೆ.
ಮನೆ ಬಾಗಿಲಿಗೆ ಮಾಶಾಸನ ಅಭಿಯಾನ ಆರಂಭ, ಸ್ವಾಮಿತ್ವ ಯೋಜನೆಗೆ 25 ಕೋಟಿ ರೂಪಾಯಿ ಅನುದಾನ ಘೋಷಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.