ಬೆಂಗಳೂರು: ಮಾಜಿ ಪ್ರಧಾನಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿಗಳಾದ ಶ್ರೀ ಲಾಲ್ ಕೃಷ್ಣ ಆಡ್ವಾಣಿ, ಪಕ್ಷದ ಹಿರಿಯ ಮುಖಂಡರಾದ ಶ್ರೀ ಶ್ಯಾಮಪ್ರಸಾದ್ ಮುಖರ್ಜಿ, ಶ್ರೀ ದೀನದಯಾಳ್ ಉಪಾಧ್ಯಾಯ, ಪ್ರಧಾನಿಗಳಾದ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾ ಇವರ್ಯಾರೂ ಪರಸ್ಪರ ಸಂಬಂಧಿಕರಲ್ಲ. ಬಿಜೆಪಿ, ಕೇವಲ ಕುಟುಂಬ- ಪರಸ್ಪರ ಸಂಬಂಧಿಕರಿಗೆ ಸೀಮಿತವಾದ ಪಕ್ಷವಲ್ಲ. ಹೀಗಾಗಿ ಅದು ಸರ್ವವ್ಯಾಪಿಯಾಗಿ ಮತ್ತು ಸರ್ವಸ್ಪರ್ಶಿಯಾಗಿ ಬೆಳೆದಿದೆ ಎಂದು ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶ್ರೀ ಅರವಿಂದ್ ಲಿಂಬಾವಳಿ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ನಗರ ಕಾರ್ಯಾಲಯ “ಬಾವುರಾವ್ ದೇಶಪಾಂಡೆ ಭವನ”ದಲ್ಲಿ ಭಾನುವಾರ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳ “ಮಾಧ್ಯಮ ಮಂಥನ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವೈಚಾರಿಕ ಚಿಂತನೆ, ರಾಷ್ಟ್ರೀಯವಾದಕ್ಕೆ ಇಲ್ಲಿ ಮಹತ್ವ ನೀಡಲಾಗುತ್ತದೆ ಎಂದು ವಿವರಿಸಿದರು.
ಪಕ್ಷದ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವಾಗ ಪ್ರಬಲವಾಗಿ ವಿಚಾರ ಮಂಡನೆ ನಮ್ಮದಾಗಿರಬೇಕು. ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಬೇಕು. ಕೇವಲ ಸುದ್ದಿಗಾಗಿ ಅನ್ಯ ಮಾರ್ಗ ಬಳಸಿಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.
ಪತ್ರಿಕೆ ಮತ್ತು ಮಾಧ್ಯಮಗಳು ಪ್ರಜಾಪ್ರಭುತ್ವದ ಮಹತ್ವದ ನಾಲ್ಕನೇ ಆಧಾರಸ್ತಂಭವಾಗಿದೆ. ಹಿಂದೆ ಮುದ್ರಣ ಮಾಧ್ಯಮ ಮಾತ್ರವೇ ಇತ್ತು. ಬಳಿಕ ದೂರದರ್ಶನ ಇದರ ಜೊತೆ ಸೇರಿತು. ನಂತರದ ದಿನಗಳಲ್ಲಿ ಅನೇಕ ಚಾನೆಲ್ಗಳು ಸೇರಿಕೊಂಡಿವೆ. ಸಾಮಾಜಿಕ ಜಾಲತಾಣವೂ ಇದಕ್ಕೆ ಹೊಸ ಸೇರ್ಪಡೆ ಎಂದರು.
ಪಕ್ಷದ ಜವಾಬ್ದಾರಿ ಹೊತ್ತವರು ಮಾಧ್ಯಮವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ. ಘಟನೆಗಳು ನಡೆದಾಗ ನಮ್ಮ ಪ್ರತಿಕ್ರಿಯೆ ಮತ್ತು ಹೇಳಿಕೆಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ಪತ್ರಿಕಾಗೋಷ್ಠಿಗಳು ಕೇವಲ ಬೆಂಗಳೂರು ನಗರ ಮತ್ತು ರಾಜ್ಯ ಮಟ್ಟಕ್ಕೆ ಸೀಮಿತ ಆಗಬಾರದು. ಅದು ಜಿಲ್ಲೆಗಳು, ಮಂಡಲ ಮಟ್ಟದಲ್ಲೂ ನಡೆಯಬೇಕು. ಇಂಥ ಪತ್ರಿಕಾ ಗೋಷ್ಠಿಗಳಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಹೊಸ ಯೋಜನೆಗಳು, ಉತ್ತಮ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡಬೇಕಿದೆ ಎಂದರು.
ಜಾಹೀರಾತು ಈಗ ಸುದ್ದಿಯ ರೂಪದಲ್ಲೂ “ಅಡ್ವಟೋರಿಯಲ್” ಆಗಿ ಬರುತ್ತಿದೆ. ಪಕ್ಷದ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳು ಹಾಗೂ ಪ್ರಚಾರ ನೀಡಬೇಕು ಎಂದು ತಿಳಿಸಿದರು. ಆಪರೇಷನ್ ಕಮಲ ಶಬ್ದದ ಬದಲಾಗಿ ತಾವು ಬಳಸಿದ “ರಾಜಕೀಯ ಧ್ರುವೀಕರಣ” ಎಂಬ ಪದ ಬಳಕೆ ಹೆಚ್ಚು ಪರಿಣಾಮಕಾರಿಯಾಯಿತು ಎಂದೂ ಅವರು ನೆನಪಿಸಿದರು.
ಟಿ.ವಿ.ಗಳಲ್ಲಿ ಚರ್ಚೆಗೆ ಹೋದಾಗ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನವೂ ನಡೆಯುತ್ತದೆ. ಸಿಕ್ಕಿದ ಸಮಯಾವಕಾಶ ಬಳಸಿಕೊಂಡು ಪಕ್ಷವನ್ನು ಸಮರ್ಥಿಸುವ ಕೆಲಸವನ್ನು ಸಂವಾದಕ್ಕೆ ತೆರಳಿದವರು ಮಾಡಿ ಜನರ ಗಮನ ಸೆಳೆಯಬೇಕು ಎಂದು ಸಲಹೆ ನೀಡಿದರು.
ಅತ್ಯಂತ ದೊಡ್ಡ ಪಕ್ಷ ನಮ್ಮದು. ಕೇಂದ್ರ ಮಾತ್ರವಲ್ಲದೆ ಅತಿ ಹೆಚ್ಚು ರಾಜ್ಯಗಳಲ್ಲಿ ಅದು ಅಧಿಕಾರ ಪಡೆದಿದೆ. ಆದ್ದರಿಂದ ಪಕ್ಷದ ಮಾಧ್ಯಮ ವಿಭಾಗದ ಜವಾಬ್ದಾರಿಯೂ ಅತ್ಯಂತ ಮಹತ್ವದ್ದು ಎಂದು ಅವರು ಕಿವಿಮಾತು ಹೇಳಿದರು.
“ಕನ್ನಡಪ್ರಭ” ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆ ಅವರು ಮಾತನಾಡಿ, ದೇಶದ ಮಾಧ್ಯಮಗಳು ಆಯಾ ದೇಶದ ಪರವಾಗಿರಬೇಕು. ಆಡಳಿತ ನಡೆಸುವ ಪಕ್ಷಗಳು ತಪ್ಪು ಮಾಡಿದಾಗ ಅದರ ಬಗ್ಗೆ ವಿಮರ್ಶಿಸುವುದು ತಪ್ಪಲ್ಲ ಎಂದರು.
ಪಕ್ಷದ ರಾಜ್ಯ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಆರ್. ರಮೇಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್ ಅವರು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.