ಜಾಗತಿಕ ಮಿಲಿಟರಿ ಇತಿಹಾಸದಲ್ಲಿ ಈವರೆಗೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ವೈರಿ ದೇಶದ ಸೈನಿಕರು ಶರಣಾದದ್ದು ಇದೇ ಮೊದಲಾಗಿದೆ. ತಾಯ್ನಾಡಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದರೊಂದಿಗೆ, ಎಂತಹ ಪ್ರತಿಕೂಲ ಸನ್ನಿವೇಶವನ್ನೂ ಲೆಕ್ಕಿಸದೆ, ನಿರಂತರವಾಗಿ ಗಡಿ ರಕ್ಷಣೆಯಲ್ಲಿ ನಿಂತಿರುವ, ನೈಸರ್ಗಿಕ ಪ್ರಕೋಪದಂತಹ ತುರ್ತು ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ನಾಗರಿಕರ ರಕ್ಷಣೆಗೆ ಧಾವಿಸುವ ದೇಶದ ಸೇನಾಪಡೆಗಳ ಪ್ರತಿಯೊಬ್ಬ ಯೋಧನೂ ಭಾರತೀಯರಿಗೆ ಹೆಮ್ಮೆ. ರಾಷ್ಟ್ರಭಕ್ತಿಯೊಂದಿಗೆ ದೇಶಸೇವೆಯಲ್ಲಿ ತಮ್ಮ ಅಮೂಲ್ಯ ಜೀವವನ್ನು ತ್ಯಾಗ ಮಾಡಿದ ಹುತಾತ್ಮ ಯೋಧರ ಗೌರವಾರ್ಥ ವಿಜಯ ದಿವಸದ ಅಂಗವಾಗಿ ದೇಶಾದ್ಯಂತ ಗೌರವ ನಮನ ಸಲ್ಲಿಸಲಾಗುತ್ತಿದೆ.
‘ಪಾಕಿಸ್ಥಾನ ಎಂಬ ನಾನು, ಈ ಮೊದಲು ನನಗೆ ಸೇರಿದ್ದಂಥ ಜಾಗ, ಮಿಲಿಟರಿ, ವಾಯು ಸೇನೆ, ನೌಕಾ ದಳ, ಪ್ಯಾರಾ ಮಿಲಿಟರಿ ಫೋರ್ಸ್ ಜತೆಗೆ ನನ್ನೆಲ್ಲಾ ಆಯುಧಗಳನ್ನು ಭಾರತದ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದಿಟ್ಟು ಸಂಪೂರ್ಣ ಶರಣಾಗತಿ ಹೊಂದಿದ್ದೇನೆ ಎಂದು ಮುಚ್ಚಳಿಕೆ ಪತ್ರ ಬರೆದು ಕೊಡುತ್ತಿದ್ದೇನೆ’ ಎಂದು ಪೂರ್ವ ಪಾಕಿಸ್ಥಾನದ (ಈಗಿನ ಬಾಂಗ್ಲಾದೇಶ) ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿಯು ತಲೆಬಾಗಿ ಸಹಿ ಹಾಕಿದ ದಿನಾಂಕವೇ 1971ರ ಡಿಸೆಂಬರ್ 16.
ಆ ದಿನಗಳಲ್ಲಿ ಭಾರತ ಹಾಗೂ ಪಾಕಿಸ್ಥಾನದ ಎರಡೂ ಸೇನೆಗಳು ಸಮಾನವಿದ್ದವು. ಜತೆಗೆ ಸಮಾನ ತಾಕತ್ತಿನವು ಕೂಡ. ಅದರಲ್ಲಿಯೂ ಪಂಜಾಬ್ ಕಡೆಯ ಮಿಲಿಟರಿ ಹಾಗೂ ಪಾಕಿಸ್ಥಾನದ ಮಿಲಿಟರಿ ಎರಡೂ ಬ್ರಿಟಿಷರ ಕೈಯ್ಯಡಿಯಲ್ಲಿಯೇ ತರಬೇತು ಆಗಿದ್ದಂತಹವು. ಈ ವಿಚಾರ ಪಾಕಿಸ್ಥಾನಕ್ಕೂ ಗೊತ್ತಿತ್ತು. ಆದರೆ ಈಗಿನ ಸೋಲಿಗೆ ಕಾರಣ ಅತ್ಯಂತ ಸ್ಪಷ್ಟವಾಗಿತ್ತು. ಪಾಕಿಸ್ಥಾನದಿಂದ ಯುದ್ಧ ವಿಮಾನಗಳು ಬಾಂಗ್ಲಾಕ್ಕೆ ಹೋಗಲು ಇದ್ದ ಅತೀ ಹತ್ತಿರದ ಹಾಗೂ ನೇರವಾದ ಹಾದಿಯನ್ನು ಭಾರತವು ಆಗ್ಗೆ ಎರಡು ತಿಂಗಳ ಹಿಂದೆಯಷ್ಟೇ ತನ್ನ ಕೈಯ್ಯಿಂದಲೇ ಮುಚ್ಚಿಸಿ ಹಾಕಿತ್ತು ! ಅಸಲಿಗೆ ನಡೆದದ್ದೇನೆಂದರೆ, ಪಾಕ್ ಪ್ರಾಯೋಜಿತ ‘ಅಲ್-ಫತಾ ಆರ್ಗನೈಜೇಷನ್ ಫಾರ್ ಲಿಬರೇಷನ್ ಆಫ್ ಜಮ್ಮು- ಕಾಶ್ಮೀರ್ ಫ್ರಮ್ ಇಂಡಿಯಾ’ ಎಂಬ ಸಂಘಟನೆ ಇತ್ತು. ಜಮ್ಮು- ಕಾಶ್ಮೀರವು ಪಾಕಿಸ್ಥಾನಕ್ಕೆ ಸೇರಬೇಕೆಂದೇನೂ ಈ ಸಂಘಟನೆ ಕಿತ್ತಾಡುತ್ತಿರಲಿಲ್ಲ. ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊಂಚ ಹೆಚ್ಚು ಹೊಗೆಯಾಡಿಸಿ ಭಾರತದ ಮೇಲೆ ಒತ್ತಡ ಹೆಚ್ಚಿಸಬೇಕೆಂದು ಪಾಕಿಸ್ಥಾನವೇ ಈ ಸಂಘಟನೆ ಕಟ್ಟಿತ್ತು ಅಷ್ಟೇ.
ಅಂದರೆ ನಮಗೆ ಪಾಕಿಸ್ಥಾನದ ಸಹವಾಸವೂ ಬೇಡ, ಇತ್ತ ಭಾರತದ ಸಹವಾಸವೂ ಬೇಡ. ‘ನಾವೇ ಒಂದು ಪ್ರತ್ಯೇಕ ದೇಶ’ ಎಂದು ಈ ಸಂಘಟನೆಯವರು ಆಗಾಗ ಕಿರಚಿಕೊಳ್ಳುತ್ತಿದ್ದರು. ಈ ಸಂಘಟನೆಯಲ್ಲಿ ಭಾರತದ ಕಡೆಗೆ ಒಲವಿಟ್ಟುಕೊಂಡಿದ್ದ ಕಾಶ್ಮೀರಿ ನಾಗರಿಕರಾದ ಹಾಸಿಮ್ ಖುರೇಶಿ ಮತ್ತು ಆಶ್ರಫ್ ಬಟ್ ಎಂಬುವವರು ಇದ್ದರು. ಇವರಿಬ್ಬರಿಗೂ ಭಾರತದ ಮೇಲೆ ಇರುವ ಪ್ರೀತಿ ಕಂಡುಹಿಡಿದದ್ದು ಮಾತ್ರ ಭಾರತದ ‘ರಾ’ (ರೀಸರ್ಚ್ ಆಂಡ್ ಅನಾಲಿಸೀಸ್ ವಿಂಗ್) ಬೇಹುಗಾರಿಕಾ ದಳ.
ಗಂಗಾ ಅಪಹರಣ ಎಂಬ ಪ್ರಹಸನ: ಇದೇ ಸಮಯದಲ್ಲಿ ‘ರಾ’ ಆದೇಶದ ಮೇರೆಗೆ ಭಾರತೀಯ ಸೇನಾಪಡೆಯು ‘ಅಲ್-ಫತಾ ಆರ್ಗನೈಜೇಷನ್ ಫಾರ್ ಲಿಬರೇಷನ್ ಆಫ್ ಜಮ್ಮು-ಕಾಶ್ಮೀರ್ ಫ್ರಮ್ ಇಂಡಿಯಾ’ ಸಂಘಟನೆಯ ಮೇಲೆ ಆಕ್ರಮಣ ಮಾಡಿ 36 ಜನರನ್ನು ಬಂಧಿಸಿತು. ಇದೇ ಸಮಯದಲ್ಲಿ ಹಾಸಿಮ್ ಖುರೇಶಿ ಮತ್ತು ಅಶ್ರಫ್ ಬಟ್ ಇಬ್ಬರಿಗೂ ಭಾರತದ ‘ಗಂಗಾ’ ಎಂಬ ವಿಮಾನವನ್ನು ಅಪಹರಣ ಮಾಡಬೇಕೆಂದೂ, ಅಪಹರಣ ಮಾಡಿದ ನಂತರ ವೈಯರ್ಲೆಸ್ ಮುಖಾಂತರ ಪಾಕಿಸ್ಥಾನದ ಲಾಹೋರ್ ಏರ್ ಬೇಸ್ ಸಂಪರ್ಕಿಸಿ ಅಪಹರಣ ಮಾಡಿದ ವಿಮಾನ ಇಳಿಸಲು ಜಾಗ ಕೊಡಲು ಕೇಳಿಕೊಳ್ಳುವಂತೆ ನಿರ್ದೇಶಿಸಲಾಯಿತು. ಅಪಹರಣಗೊಂಡ ವಿಮಾನ ತನ್ನ ಜಾಗಕ್ಕೆ ಬಂದು ಇಳಿಯುತ್ತದೆ ಎಂಬ ವಿಚಾರ ಬದಿಗಿರಲಿ, ವಿಮಾನವು ತನ್ನದೇ ವ್ಯಕ್ತಿಯ ಅಧೀನದಲ್ಲಿದೆ ಎಂಬ ವಿಚಾರವಷ್ಟೇ ಸಾಕಿತ್ತು. ಪಾಕಿಸ್ತಾನದ ಝುುಲ್ಪಿಕರ್ ಅಲಿ ಭುಟ್ಟೋ, ಕಾಶ್ಮೀರ ಸಮಸ್ಯೆಯನ್ನು ಇನ್ನಿಲ್ಲದಂತೆ ಕೆದಕಿಬಿಡುತ್ತಿದ್ದನು ಎಂಬ ವಿಚಾರವು ಪಾಕಿಸ್ಥಾನಕ್ಕೆ ಅದಾವ ಮಟ್ಟಿಗಿನ ಸಂತೋಷ ತರಬಹುದೆನ್ನುವ ವಿಚಾರ ಭಾರತಕ್ಕೆ ತಿಳಿಯದ್ದೇನೂ ಅಲ್ಲ (ಇದುವರೆಗೂ ಭಾರತದ 13 ವಿಮಾನಗಳು ಹೈಜಾಕ್ ಆಗಿವೆ).
ಶ್ರೀನಗರದಿಂದ ಜಮ್ಮುವಿಗೆ ಹೋಗುತ್ತಿದ್ದ ವಿಮಾನವನ್ನು ಅಪಹರಣ ಮಾಡಿ ಲಾಹೋರಿಗೆ ಕೊಂಡೊಯ್ಯಲಾಯಿತು. ಹಾಸಿಮ್ ಖುರೇಶಿ ಮತ್ತು ಅಶ್ರಫ್ ಬಟ್ ಇಬ್ಬರ ಕೈಯಲ್ಲಿದ್ದ ಆಯುಧಗಳು ಕೂಡ ನೋಡಲಿಕ್ಕೆ ಒರಿಜಿನಲ್ ಅಂತೆಯೇ ಕಾಣುವ ನಕಲಿ ಆಯುಧಗಳಾಗಿ ಇರಬೇಕು ಎಂಬ ‘ರಾ’ ಬೇಹುಗಾರಿಕಾ ಪಡೆಯ ಮುಂದಾಲೋಚನೆ ಕೂಡ ಆ ಸಮಯದಲ್ಲಿ ಮೆಚ್ಚುವಂಥಾದ್ದೇ. ಆನಂತರ ಭಾರತವು ಅದಾಗಲೇ ಬಂಧಿಸಿದ್ದ 36 ಜನರನ್ನು ಬಿಡುಗಡೆ ಮಾಡಬೇಕೆಂಬ ನಿಯಮಕ್ಕೆ ಒಪ್ಪಿಕೊಂಡರೆ ಮಾತ್ರ ವಿಮಾನದ ಒಳಗಿರುವವರನ್ನು ನಾವು ಬಿಡುಗಡೆ ಮಾಡುತ್ತೇವೆ ಎಂಬ ಬೇಡಿಕೆಯ ಒಪ್ಪಂದ ಮಾಡಲಾಯಿತು.
ಅದಾದ ನಂತರವೂ ‘ಗಂಗಾ’ ಎಂಬ ವಿಮಾನವು ಲಾಹೋರಿನಲ್ಲಿಯೇ ಇತ್ತು. ಯಾವುದೇ ದೇಶದ ವಿಮಾನ ಅಪಹರಣಗೊಂಡ ನಂತರದ ಬೇಡಿಕೆಯ ಕಥೆ ಏನಾದರಾಗಲಿ, ಆದರೆ ಆ ವಿಮಾನ ವಾಪಸು ತರಲಾಗದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುವ ಮರ್ಯಾದೆ ಇದೆಯಲ್ಲಾ ಅದು ಸಾಮಾನ್ಯ ಜನರ ಅರಿವಿಗೆ ನಿಲುಕದ್ದು. ಆದರೆ ಎಲ್ಲ ಬೇಡಿಕೆ ಈಡೇರಿಸಿದ ನಂತರವೂ ವಿಮಾನವನ್ನು ಅಪಹರಣ ಮಾಡಿದ ದೇಶವು ಬಿಡುಗಡೆಗೊಳಿಸದಿದ್ದರೆ ಬಂದೆರಗುವ ಪರಿಣಾಮಗಳನ್ನು ಮಾತ್ರ ಊಹಿಸಲಸಾಧ್ಯ.
‘ರಾ’ ನಿಲುವು ಈ ಸಂದರ್ಭದಲ್ಲಿ ಅತ್ಯಂತ ಕರಾರುವಕ್ಕಾಗಿತ್ತು. ವಿಮಾನದಲ್ಲಿರುವ ಎಲ್ಲರನ್ನೂ ಬಿಡುಗಡೆಗೊಳಿಸಿದ ನಾಟಕ ಮುಗಿದ ನಂತರ ಪಾಕಿಸ್ತಾನಕ್ಕೆ ತಿಳಿಸದಂತೆ ‘ಗಂಗಾ’ ವಿಮಾನಕ್ಕೆ ಬೆಂಕಿ ಹಚ್ಚಿ ನಾಶ ಮಾಡಲು ತಿಳಿಸಲಾಗಿತ್ತು !
ಪಾಕಿಸ್ಥಾನದ ಬೇಹುಗಾರಿಕಾ ಪಡೆ ಈ ಮೇಲಿನ ಎಲ್ಲ ನಡೆಗಳನ್ನೂ ಊಹಿಸಲು ಶಕ್ತವಿತ್ತು. ಅಪಹರಣ ಭಾರತವೇ ಮಾಡಿಸಿರಬಹುದು, ಅದರಿಂದ ಆಗುವ ಅಪಾಯಗಳೇನು, ಅದನ್ನು ಎದುರಿಸುವುದು ಹಾಗೂ ಇದೇ ಯೋಜನೆಯನ್ನು ತನಗೆ ಅನುಕೂಲವಾಗುವಂತೆ ಬಳಸಿಕೊಳ್ಳುವುದು ಇದೆಲ್ಲವನ್ನೂ ಪಾಕ್ ಪಡೆ ಊಹಿಸಿತ್ತೋ ಏನೋ. ಆದರೆ ‘ಇಂಡಿಯನ್ ರಾ’ ಒಂದು ಹಿಡಿ… ಒಂದೇ ಒಂದು ಹಿಡಿ ಹೆಚ್ಚು ಯೋಚಿಸಿಬಿಟ್ಟಿತ್ತು. ವಿಮಾನ ಪಾಕಿಸ್ಥಾನದಲ್ಲಿ ಧ್ವಂಸಗೊಂಡದ್ದೇ ಅದರೆ ಮೊದಲೇ ರಣಹುಚ್ಚರಂತೆ ಬಂದೆರಗುವ ಭಾರತೀಯ ಸೈನ್ಯದ ಜತೆಗಿನ ಯುದ್ಧಕ್ಕೆ ತನಗೆ ಪ್ರಪಂಚದ ಯಾವುದೇ ದೇಶಗಳು ಸಹಾಯ ಮಾಡುವುದಕ್ಕೆ ಆಗುವುದಿಲ್ಲ ಎಂಬ ಅತೀ ಚಿಕ್ಕ ವಿಚಾರ ಪಾಕಿಸ್ಥಾನ ಮರೆತುಬಿಟ್ಟಿತ್ತು.
ಅತ್ತ ಲಾಹೋರಿನಲ್ಲಿ ಭಾರತದ ‘ಗಂಗಾ’ ವಿಮಾನ ಉರಿದು ಬೂದಿಯಾದದ್ದೇ ತಡ… ಭಾರತವು ಪಾಕಿಸ್ಥಾನದ ಮೇಲೆ ಮುಗಿಬಿತ್ತು. ತನ್ನ ವಿಮಾನವನ್ನು ಕದ್ದು ಸುಟ್ಟು ಹಾಕಿದ ಈ ಪಾಕಿಸ್ಥಾನವು ಭಾರತದ ಪೂರ್ವ ಪಾಕಿಸ್ಥಾನ (ಬಾಂಗ್ಲಾ) ಕಡೆ ಹೋಗಲು ಇಷ್ಟು ದಿನ ಬಳಸುತ್ತಿದ್ದ ಜಮ್ಮು, ಕಾಶ್ಮೀರದ ಮೇಲಿನಿಂದ ಹಾದು ಹೋಗುತ್ತಿದ್ದ ವಾಯುಮಾರ್ಗಕ್ಕೇನಾದರೂ ಕಾಲಿಟ್ಟದ್ದೇ ಆದರೆ ಗಂಗಾ ವಿಮಾನ ಸುಟ್ಟದ್ದಕ್ಕಿಂತಲೂ ಘೊರವಾಗಿ ಸಿಡಿಸಿಬಿಡಲಾಗುತ್ತದೆ ಎಂದು ಸಮರಾರಂಭದ ಮುನ್ಸೂಚನೆ ಕೊಡಲಾಯಿತು. ಈ ಸೂಕ್ಷ್ಮ ಸಂದರ್ಭದಲ್ಲಿ ಪಾಕಿಸ್ಥಾನದ್ದು ತಪ್ಪಿದೆ. ಹಾಗಾಗಿ ಪೂರ್ವ ಪಾಕಿಸ್ಥಾನಕ್ಕೆ(ಬಾಂಗ್ಲಾ) ಪಾಕಿಸ್ಥಾನದ ವಿಮಾನಗಳು ಹೋಗಬೇಕೆಂದರೆ ಈಗಿನ ಹಾದಿಯ ನಾಲ್ಕುಪಟ್ಟು ದೂರದ ಶ್ರೀಲಂಕಾ ಸುತ್ತುಹಾಕಿಕೊಂಡು ಹೋಗಬೇಕು ಎಂಬ ನಿಯಮ ಅಧಿಕೃತವಾಯಿತು. ಅಂದರೆ ತನ್ನದೇ ಜಾಗವಾದ ಪೂರ್ವ ಪಾಕಿಸ್ಥಾನಕ್ಕೆ(ಬಾಂಗ್ಲಾ)ಹೋಗುವ ದಾರಿ ಮುಚ್ಚಿದರೆಂದೇ ಪಾಕಿಸ್ಥಾನ ಯೋಚಿಸಿತ್ತೇ ಹೊರತು ಇನ್ನೊಂದೇ ತಿಂಗಳಲ್ಲಿ ಪೂರ್ವ ಪಾಕಿಸ್ಥಾನದಲ್ಲಿ (ಬಾಂಗ್ಲಾ)ತನ್ನ ಮೇಲೆ ಯುದ್ಧ ಸಾರುತ್ತಾರೆಂದಾಗಲಿ, ಆ ಯುದ್ಧದಲ್ಲಿ ತಾನು ವಾಯು ಸೇನೆ ಬಳಸಲಾಗದಂತೆ ಇಷ್ಟೆಲ್ಲಾ ಯೋಜನೆ ರೂಪಿಸಲಾಗಿದೆ ಎಂದಾಗಲೀ ಪಾಕಿಸ್ಥಾನಕ್ಕೆ ತಿಳಿಯಲಾಗಲೇ ಇಲ್ಲ. ಯುದ್ಧವೆಂದರೆ ಹಾಗೆ… ರಣತಂತ್ರಗಳನ್ನು ಊಹಿಸಿಬಿಟ್ಟರೆ ಸಾಕು ಅರ್ಧ ಯುದ್ಧ ಗೆದ್ದಂತೆಯೇ ಲೆಕ್ಕ.
ಇವೆಲ್ಲವೂ ಪೂರ್ವ ಪಾಕಿಸ್ಥಾನದ(ಬಾಂಗ್ಲಾ) ವಿಚಾರಕ್ಕೆ ಸಂಬಂಧವೇ ಇಲ್ಲ ಎಂಬಂತೆ ಶಾಂತವಾಗಿದ್ದಾಗ, ಪೂರ್ವ ಪಾಕಿಸ್ಥಾನವನ್ನು ಪಾಕಿಸ್ಥಾನದ ಕೈಯ್ಯಿಂದ ವಿಮೋಚನೆ ಮಾಡಿ ಬಾಂಗ್ಲಾ ಎಂದಾಗಿಸಲು ಬಾಂಗ್ಲಾ ಸೇನೆಯ ಜತೆಗೂಡಿಕೊಂಡ ಭಾರತೀಯ ಸೈನಿಕರ ಕೈಯಲ್ಲಿದ್ದ ರೈಫಲ್ಲಿನ ಮೊದಲ ಗುಂಡು ದಡ್ಢನೆ ಪಾಕ್ ಸೈನಿಕನ ಎದೆಗಿಳಿದಿತ್ತು. 1971ರ ಡಿಸೆಂಬರ್ 3ರಂದು ಶುರುವಾದ ಕಿವಿಗಡಚಿಕ್ಕುವ ಗುಂಡಿನ ಮೊರೆತ ಆಕಾಶಕ್ಕೇರಿತು. ಅನಾಮತ್ತು ಎಂಟರಿಂದ ಹತ್ತು ಸಾವಿರದಷ್ಟು ಪಾಕ್ ಸೈನಿಕರು ರಕ್ತ ಕಾರಿಕೊಂಡು ಸತ್ತರು. 93 ಸಾವಿರ ಪಾಕ್ ಸೈನಿಕರನ್ನು ಭಾರತೀಯ ಯೋಧರು ಬಂಧಿಸಿದರು. ಇದೆಲ್ಲಾ ನಡೆದದ್ದು ‘ಗಂಗಾ’ ಎಂಬ ಅದೊಂದೇ ವಿಮಾನದ ದೆಸೆಯಿಂದ. ಪಾಕ್ ವಾಯುಸೇನೆ ಕಾಶ್ಮೀರದ ಮೇಲೆ ಹಾರಿ ಬಾಂಗ್ಲಾ ತಲುಪಲಾಗದ್ದಕ್ಕೆ ಪಾಕಿಸ್ಥಾನ ತೆತ್ತ ಬೆಲೆ ಅಷ್ಟಿಷ್ಟಲ್ಲ. ಒಂದು ದೇಶ ಆಯುಧ ಸಮೇತ ಶರಣಾಗತಿ ಹೊಂದಿ ತಲೆಬಾಗುವುದಿದೆಯಲ್ಲಾ ಅದರಂಥ ಹೀನಾಯ ಸ್ಥಿತಿ ಮತ್ತೊಂದಿಲ್ಲ. ಅಂದು ಪಾಕಿಸ್ಥಾನ ಅದೇ ಸ್ಥಿತಿಯಲ್ಲಿತ್ತು. ಹೆಚ್ಚೆಂದರೆ ಮೈಮೇಲೆ ಬಟ್ಟೆಯಿದ್ದವು ಅಷ್ಟೇ !
ಹಾಸ್ಯಾಸ್ಪದ ವಿಚಾರ ಏನೆಂದರೆ ‘ಫೊಕ್ಕರ್- ಎಫ್-27’ ಜಾತಿಗೆ ಸೇರಿದ ಗಂಗಾ ಎಂಬ ವಿಮಾನವು ಹಾರಾಟಕ್ಕೆ ಅರ್ಹವೇ ಅಲ್ಲ ಎಂದು ಏರೋನಾಟಿಕ್ ಇಂಜನಿಯರ್ಸ್ ನಿರ್ಧರಿಸಿ ಅದಾಗಲೇ ಚಚ್ಚಿ ಗುಜರಿಗೆ ಎಸೆಯಲು ನಿರ್ಧರಿಸಿದ್ದರು. ಹೇಗೋ ಚಚ್ಚಿ ಹಾಕುವುದೇ ನಿಜವಾದ್ದರಿಂದ ಆಯುಷ್ಯ ಮುಗಿಸಿದ್ದ ಇದೇ ಗಂಗಾ ವಿಮಾನವನ್ನು ‘ಸುಟ್ಟರೆ ವಿಭೂತಿಯಾದೆ’ ಎಂಬಂತೆ ಬಳಸಿದ್ದು ಭಾರತೀಯ ಬೇಹುಗಾರಿಕಾ ದಳದ ಊಹಾ ಚಾಕಚಕ್ಯತೆಯನ್ನು ದರ್ಶನಕ್ಕಿಟ್ಟಿತು.
ಇಂದು ಜಗತ್ತು ಬರಿ ಸ್ವಾರ್ಥಮಯವಾಗಿಬಿಟ್ಟಿದೆ. ತಾನೂ ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಬೇರೆಯವರ ಉಸಾಬರಿ ನಮಗ್ಯಾಕೆ? ಎನ್ನುವ ಭಾವನೆ ಜನರಲ್ಲಿ ತುಂಬಿಹೋಗಿದೆ. ನಾನು ಮತ್ತು ನನ್ನ ಕುಟುಂಬ ಕ್ಷೇಮವಾಗಿದೆ ನಾನ್ಯಾಕೆ ಬೇರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಅದರಿಂದ ನನಗೇನು ಲಾಭ? ಹೀಗೆ ಲಾಭ- ನಷ್ಟಗಳ ಲೆಕ್ಕಾಚಾರ ಮಾಡುತ್ತದೆ ಮನುಷ್ಯನ ಮನಸ್ಸು. ನಮ್ಮ ಈ ಸುಖ ಸಂತೋಷಗಳ ಹಿಂದೆ ಕಾಣದ ಕೈಗಳು ಅವಿರತವಾಗಿ ದುಡಿಯುತ್ತಿವೆ ಅವರಿಗೆ ನಾವು ಋಣಿಯಾಗಿರಬೇಕು ಎಂಬ ಕೃತಜ್ಞತಾ ಮನೋಭಾವ ಬಿಡಿ, ಆ ಕುರಿತು ಯೋಚನೆಯನ್ನು ಸಹ ನಾವು ಮಾಡುವುದಿಲ್ಲ.
ಬರಿ ನಮ್ಮ ಜೀವನದ ಬಗ್ಗೆ ಕಾಳಜಿ ವಹಿಸುವ ನಾವು, ಕಾಶ್ಮೀರದ ತುದಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮ್ಮನ್ನು ಶತ್ರುಗಳಿಂದ ಕಾಪಾಡುವ ಯೋಧನ ಜೀವನದ ಬಗ್ಗೆ ಯೋಚಿಸುತ್ತೇವೆಯೇ ? ತನ್ನ ಸ್ವಾರ್ಥಗಳನ್ನು ಮರೆತು ದೇಶ ಕಾರ್ಯದಲ್ಲಿ ಮಗ್ನನಾಗಿ; ಚಳಿ,ಗಾಳಿ, ಮಳೆಗಳನ್ನು ಲೆಕ್ಕಿಸದೆ ಆ ವೀರ ಯೋಧ ನಮ್ಮ ರಕ್ಷಣೆ ಮಾಡುತ್ತಿರುತ್ತಾನೆ. ನಮ್ಮ ಕಷ್ಟ ಕಾರ್ಪಣ್ಯಗಳ ಬಗ್ಗೆಯೇ ಎಂದಿಗೂ ಚಿಂತಿಸುವ ನಾವು, ನಮ್ಮ ರಕ್ಷಕರಾದ ಯೋಧರ ದುಃಖ ದುಮ್ಮಾನಗಳ ಬಗ್ಗೆ ಚಿಂತಿಸುವುದೇ ಇಲ್ಲ…. ಚಿತ್ರ ನಟ, ನಟಿಯರು ನಮಗೆ ನಿಜವಾದ ಹೀರೋ, ಹೀರೋಯಿನ್ ಹಾಗೆ ಕಾಣುತ್ತಾರೆ ಹೊರತು ದೇಶಕ್ಕಾಗಿ ಜೀವನವನ್ನೇ ಅರ್ಪಣೆ ಮಾಡಲು ತಯಾರಾದ ವೀರ ಯೋಧರು ಯಾರಿಗೂ ಹೀರೋ ಆಗಿ ಕಾಣೋದೇ ಇಲ್ಲ… ಕಾಣೋದಿದ್ರೂ ಬರೀ ಬೆರಳೆಣಿಕೆ ಅಷ್ಟೇ ಮಂದಿಗೆ…..
ದೇಶ ಸೇವೆಯೇ ಈಶ ಸೇವೆ ಎಂದು ನಮ್ಮ ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟ ವೀರ ಮರಣಹೊಂದಿದ್ದ ವೀರ ಯೋಧರು, ಪ್ರಾಣ ಒತ್ತೆ ಇಡಲು ತಯಾರಾದ ವೀರಯೋಧರು ನಮ್ಮ ಕಣ್ಣ ಮುಂದೆಯೇ ಇದ್ದಾರೆ….
ಕೊನೆಯದಾಗಿ ಒಂದು ಮಾತು ಸ್ನೇಹಿತರೆ, ನಮ್ಮೆಲ್ಲರ ನಾಳೆಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗಿ ಹೋಗಿರುವ ಪ್ರತಿಯೊಬ್ಬರಿಗೂ ಮನಸಾ ಪ್ರಣಾಮಗಳು. ಪ್ರಾಣವನ್ನು ದೇಶಕ್ಕಾಗಿ ಅರ್ಪಣೆ ಮಾಡಲು ತಯಾರಾದ ಎಲ್ಲ ವೀರಯೋಧರಿಗೆ ಇವತ್ತಿನ ವಿಜಯ ದಿವಸಕ್ಕಾಗಿ ಭಾರತ ಮಾತೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರಿಗೆಲ್ಲಾ ಒಂದು ದೊಡ್ಡ ಸಲಾಂ.
✍️ ಸುರೇಶ ಮಾಗಿ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.