ಕುಂದಾಪುರ: ಪ್ರತಿಷ್ಠಿತ ಫೋರ್ಬ್ಸ್ಇಂಡಿಯಾ ಪಟ್ಟಿಯಲ್ಲಿ ಕುಂದಾಪುರದ ಸಾಧಕರೊಬ್ಬರು ಸ್ಥಾನ ಪಡೆದಿದ್ದಾರೆ. ಕುಂದಾಪುರದ ಕೋಡಿಯ ನಿವಾಸಿ, ಲೋಧಾ ಗ್ರೂಪ್ನ ಆಡಳಿತ ಹಾಗೂ ಮಾನವ ಸಂಪದ ವಿಭಾಗದ ಉಪಾಧ್ಯಕ್ಷರಾಗಿರುವ ಗಣೇಶ್ ಪೂಜಾರಿ ಅವರು ಫೋರ್ಬ್ಸ್ ಗೌರವಕ್ಕೆ ಪಾತ್ರರಾಗುವ ಮೂಲಕ ಹೆಸರು ಗಳಿಸಿದ ವ್ಯಕ್ತಿಯಾಗಿದ್ದಾರೆ.
ಫೋರ್ಬ್ಸ್ ಇಂಡಿಯಾ ಸಹಭಾಗಿತ್ವದಲ್ಲಿ ಪ್ರಕಟವಾದ ‘ಗ್ರೇಟ್ ಪೀಪಲ್ ಮ್ಯಾನೇಜರ್ಸ್ ಸ್ಟಡಿ’ ಬ್ಯಾನರ್ನಡಿ ‘ಗ್ರೇಟ್ ಮ್ಯಾನೇಜರ್ ಇನ್ಸ್ಟಿಟ್ಯೂಟ್’ ಭಾರತದ 100 ಶ್ರೇಷ್ಠ ವ್ಯವಸ್ಥಾಪಕರಲ್ಲಿ ಒಬ್ಬರಾಗಿ ಗಣೇಶ್ ಪೂಜಾರಿ ಅವರು ಸ್ಥಾನ ಪಡೆದಿದ್ದಾರೆ. ಇವರು ಕೋಡಿಯ ದಿ. ಬಚ್ಚ ಪೂಜಾರಿ, ದಿ. ಕಮಲ ಪೂಜಾರ್ತಿ ಅವರ ಪುತ್ರ.
ಬಾಲ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ಕಾರಣ ವಿದ್ಯೆ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಕೆಲಸ ಮಾಡಿ, ಸಂಪಾದಿಸಿ ಶೈಕ್ಷಣಿಕ ಅವಶ್ಯಕತೆ ಪೂರೈಸಿಕೊಳ್ಳಬೇಕಾಗಿತ್ತು. ಕೆಲಸಕ್ಕೆ ಹೋಗುವ ಹಿನ್ನೆಲೆಯಲ್ಲಿ ಸರಿಯಾಗಿ ಶಾಲೆಗೆ ಹಾಜರಾಗುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಕಲಿಕೆಯಲ್ಲಿ ಹಿಂದಿಲ್ಲವಾದರೂ ಆರ್ಥಿಕ ಸಂಕಷ್ಟದ ಹಿನ್ನೆಯಲ್ಲಿ ಏಳೇ ವರ್ಷಕ್ಕೆ ಮುಗಿಯುವ ಪ್ರಾಥಮಿಕ ಶಿಕ್ಷಣ ಮುಗಿಸಲು ಗಣೇಶ್ ಅವರು 11 ವರ್ಷಗಳನ್ನು ತೆಗೆದುಕೊಂಡರು.
ತಮ್ಮೂರಿನ ಸೋನ್ಸ್ ಹಿ. ಪ್ರಾ. ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಬಳಿಕ, ಹಾಜಿ ಕೆ ಮೊಯ್ದಿನ್ ಬ್ಯಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ಪ್ರೌಢಶಾಲೆಯನ್ನು ತಮ್ಮ ಸತತ ಪರಿಶ್ರಮ ಮತ್ತು ತಾವು ಕಲಿತ ಪ್ರೌಢಶಾಲೆ ಆರಂಭಿಸಿದ ಸಯ್ಯದ್ ಬ್ಯಾರಿ ಅವರ ಮಾರ್ಗದರ್ಶನದಲ್ಲಿ ಒಂದೇ ಪ್ರಯತ್ನದಲ್ಲಿ ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದುವ ಮೂಲಕ ಮುಗಿಸುತ್ತಾರೆ. ತಮ್ಮ ಬಾಲ್ಯದಲ್ಲಿಯೇ ಕೇವಲ ಶೈಕ್ಷಣಿಕ ಅಗತ್ಯಗಳನ್ನು ಮಾತ್ರ ಪೂರೈಸಿಕೊಳ್ಳುವುದಕ್ಕೆ ಶಾಲೆ ಸಹಾಯ ಮಾಡಿದ್ದಲ್ಲ. ಬದಲಾಗಿ ಬದುಕನ್ನು ಎದುರಿಸುವ ಬಗೆ, ಸವಾಲುಗಳನ್ನು ಹೇಗೆ ಗೆಲ್ಲಬೇಕು, ಜೀವನವನ್ನು ಹೇಗೆ ಸಮರ್ಥವಾಗಿ ನಿಭಾಯಿಸಬೇಕು ಎಂಬುದನ್ನು ಕಲಿಸಿರುವುದಾಗಿ ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹತ್ತನೇ ತರಗತಿ ಮುಗಿಸಿ ಮುಂಬೈಗೆ ತೆರಳಿದ ಗಣೇಶ್ ಅವರು, ಅಲ್ಲಿ ಹಗಲು ಹೊತ್ತಿನಲ್ಲಿ ಕೆಲಸ, ರಾತ್ರಿ ಪಾಳಿಯಲ್ಲಿ ಕಾಲೇಜಿಗೆ ತೆರಳಿ ಶಿಕ್ಷಣ ಪೂರೈಸುತ್ತಾರೆ. ಇವರು ತಮ್ಮ ಪಿಯುಸಿ ಶಿಕ್ಷಣವನ್ನು ಮುಂಬೈನ ಕನ್ನಡ ಭವನ ಜೂ. ಕಾಲೇಜಿನಲ್ಲಿ ಮತ್ತು ಪದವಿ ಶಿಕ್ಷಣವನ್ನು ಸೈಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಹಾಗೂ ಎಂಬಿಎ ಪದವಿಯನ್ನು ಸಿಂಬಯೋಸಿಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಲ್ಲಿ ಸಂಪೂರ್ಣಗೊಳಿಸಿದ್ದಾರೆ. ಇದೀಗ ಫೋರ್ಬ್ಸ್ನಲ್ಲಿ ಸ್ಥಾನ ಪಡೆಯುವ ಮೂಲಕ ಅನೇಕ ಯುವಕರಲ್ಲಿ ಸ್ಫೂರ್ತಿ ತುಂಬಿದ್ದಾರೆ ಎಂದರೂ ಅತಿಶಯವಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.