ಬೆಂಗಳೂರು: ಜಾತಿಯ ಕಾರಣವನ್ನಿಟ್ಟುಕೊಂಡು ಕ್ಷೌರ ಮಾಡಲು ಹಿಂದೇಟು ಹಾಕುವುದನ್ನು ತಡೆಯಲು ಸರ್ಕಾರಿ ಕ್ಷೌರದಂಗಡಿಗಳನ್ನು ಆರಂಭ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಕ್ಷೌರದಂಗಡಿಗಳನ್ನು ಆರಂಭಿಸಲಿದ್ದು, ಇವುಗಳ ನಿರ್ವಹಣೆಯನ್ನು ಸಹ ಸರ್ಕಾರವೇ ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಗ್ರಾಮೀಣ ಭಾಗಗಳಲ್ಲಿ ಕ್ಷೌರ ಮಾಡಲು ಹೋಗುವ ಜನರಿಗೆ ಕೆಲವೊಮ್ಮೆ ಜಾತಿಯನ್ನಿಟ್ಟುಕೊಂಡೇ ಕ್ಷೌರ ಮಾಡಲು ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಇಂತಹ ಪದ್ಧತಿಯ ನಿರ್ಮೂಲನೆಗಾಗಿ ರಾಜ್ಯ ಸರ್ಕಾರವು ಸರ್ಕಾರಿ ಕ್ಷೌರದಂಗಡಿಗಳನ್ನು ಆರಂಭ ಮಾಡಲು ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದಲಿತರು ಅಥವಾ ಕೆಳ ಜಾತಿ ಎಂದು ಗುರುತಿಸಲ್ಪಟ್ಟವರಿಗೆ ಕ್ಷೌರ ಮಾಡಿದರೆ ತಮ್ಮ ಅಂಗಡಿಗೆ ಮೇಲ್ಜಾತಿಯವರು ಕ್ಷೌರ ಮಾಡಿಸಿಕೊಳ್ಳಲು ಬರುವುದಿಲ್ಲ ಎಂಬ ಕಾರಣದಿಂದ ಕೆಲವರು ಕ್ಷೌರ ಮಾಡಲು ಹಿಂದೇಟು ಹಾಕುತ್ತಿರುವುದನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಇಂತಹ ಅನಿಷ್ಟ ಪದ್ಧತಿಯನ್ನು ತಡೆಯುವ ಸಲುವಾಗಿ ಸರ್ಕಾರ ಇಂತಹ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸರ್ಕಾರ ತಿಳಿಸಿದೆ. ಸರ್ಕಾರಿ ಕ್ಷೌರದಂಗಡಿಗಳಲ್ಲಿ ನೇರ ನೇಮಕಾತಿ ಇಲ್ಲವೇ ಹೊರ ಗುತ್ತಿಗೆ ಮೂಲಕ ಕ್ಷೌರಿಕರನ್ನು ನೇಮಕ ಮಾಡುವುದು ಮತ್ತು ಅವರಿಗೆ ಇಲಾಖೆಯ ವತಿಯಿಂದಲೇ ತಿಂಗಳ ವೇತನದ ವ್ಯವಸ್ಥೆ ಮಾಡುವಂತೆಯೂ ಸರ್ಕಾರ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.