ತೆಲಂಗಾಣ: ಜನರು ಸಕಾರಾತ್ಮಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ತೆಲಂಗಾಣದಲ್ಲೊಂದು ಸ್ಪಷ್ಟ ನಿದರ್ಶನ ದೊರೆತಿದೆ. ರಾಜ್ಯದ ಸೂರ್ಯಪೇಟೆ ಜಿಲ್ಲೆಯ ಮುನಗಾಲದಲ್ಲಿನ ಪಾರ್ವತಿ ಗಂಗಾಧರ ಸ್ವಾಮಿ ದೇವಾಲಯದಲ್ಲಿ ಪೌರ ಕಾರ್ಮಿಕರಿಂದ ದೇವರಿಗೆ ರುದ್ರಾಭಿಷೇಕ ಮಾಡಿಸುವ ಮೂಲಕ ದೇವಾಲಯದ ಅರ್ಚಕರು, ಆಡಳಿತ ಸಿಬ್ಬಂದಿ ಮಾದರಿಯಾಗಿದ್ದಾರೆ.
ನಗರದಲ್ಲಿ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸುವವರಿಗೆ ಕಾರ್ತಿಕ ಮಾಸ ಮತ್ತು ನಾಗುಲ ಚೌತಿಯಂದು ದೇವಾಲಯದಲ್ಲಿ ರುದ್ರಾಭಿಷೇಕ ನಡೆಸಲು ಅಲ್ಲಿನ ಅರ್ಚಕ ವಾರಣಾಸಿ ಕಿಶೋರ್ ಅವರು ಅವಕಾಶ ಮಾಡಿಕೊಡುವ ಮೂಲಕ ಮಹತ್ವದ ಬದಲಾವಣೆಯೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಸಾಮಾಜಿಕವಾಗಿ ಸಾಮರಸ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
ಎಲ್ಲಾ ಕೆಲಸಗಳಿಗೂ ಅದರದ್ದೇ ಆದ ಗೌರವವಿದೆ. ಅವರು ಮಾಡುವ ಕೆಲಸಗಳಿಗೆ ಗೌರವ ನೀಡುವ ಕೆಲಸವಾಗಬೇಕಿದೆ ಎಂದು ಕಿಶೋರ್ ಈ ವಿಚಾರದಲ್ಲಿ ತಮ್ಮ ದೃಷ್ಟಿಕೋನವನ್ನು ತಿಳಿಸಿದ್ದಾರೆ. ಅಲ್ಲದೆ ಸ್ವಾಮಿ ವಿವೇಕಾನಂದರ ಎಲ್ಲರೂ ಒಂದೇ ಎಂಬ ಭಾವದ ಚಿಂತನೆಯನ್ನು ಇದೇ ಸಂದರ್ಭದಲ್ಲಿ ಜನರ ಮುಂದಿಟ್ಟಿದ್ದಾರೆ. ಜೊತೆಗೆ ಸ್ವಚ್ಛತಾ ಕಾರ್ಮಿಕರು ದೇವಾಲಯದ ಸ್ವಚ್ಛತೆಗೆ ಸಂಬಂಧಿಸಿದಂತೆಯೂ ಮುಖ್ಯ ಪಾತ್ರ ವಹಿಸುವವರು. ಅವರಿಗೆ ಗೌರವ ನೀಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ವಾಸ ಶ್ರೀನಿವಾಸ್ ಅವರೂ ನೈರ್ಮಲ್ಯ ಕಾರ್ಮಿಕರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಈ ವೇಳೆ ಎಂಪಿಪಿ ಎಲೆಖಾ ಬಿಂದು ಮತ್ತು ಅವರ ಪತಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ದೇಗುಲದ ಅರ್ಚಕರರ ಈ ಮಹತ್ವದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ನೈರ್ಮಲ್ಯ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬಂದರು ಗುರುವಮ್ಮ, ನೈರ್ಮಲ್ಯ ಕಾರ್ಮಿಕರಾದ ದುರ್ಗಯ್ಯ, ವೆಂಕಟರತ್ನ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.