ನವದೆಹಲಿ: ದೇಶದಲ್ಲಿ ಸ್ಥಳಗಳನ್ನು ನಿಖರವಾಗಿ ಗುರುತಿಸಲು ಪೂರಕವಾಗುವಂತೆ ‘ಒಂದು ದೇಶ ,ಒಂದು ವಿಳಾಸ’ ಯೋಜನೆಯನ್ನು ಶೀಘ್ರ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಥಾವರ್ಚಂದ್ ಗೆಹ್ಲೋಟ್ ಅವರ ನೇತೃತ್ವದ ಉನ್ನತಾಧಿಕಾರ ಸಚಿವರ ಸಮಿತಿ ವರದಿಯನ್ನು ಸಲ್ಲಿಸಿದೆ. ದೇಶದ ಪ್ರತಿಯೊಂದು ರಸ್ತೆ, ಪ್ರದೇಶವನ್ನು ಸುಲಭವಾಗಿ ಗುರುತಿಸುವ ನಿಟ್ಟಿನಲ್ಲಿ ಈ ಯೋಜನೆ ಮುಖ್ಯವಾಗಲಿದೆ. ದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ಆಧಾರ್ ಸಂಖ್ಯೆಯಂತೆ ಪ್ರತಿ ಆಸ್ತಿ, ರಸ್ತೆಗೆ ವಿಶೇಷ ರೀತಿಯ ಸಂಕೇತ ಸಂಖ್ಯೆಗಳನ್ನು ಈ ಯೋಜನೆಯನ್ವಯ ನೀಡಲಾಗುವುದು ಎಂದು ಈ ವರದಿಯಲ್ಲಿ ಯೋಜನೆಯ ಕುರಿತಾದಂತೆ ವಿವರಣೆ ನೀಡಲಾಗಿದೆ.
ಪ್ರಸ್ತುತ ದಿನಮಾನಗಳಲ್ಲಿ ದೇಶದ ಎಲ್ಲಾ ನಗರಗಳು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲವು ಪ್ರದೇಶಗಳು ಗುರುತಿಸುವಿಕೆಯಿಂದ ಹೊರಗುಳಿಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಹೊಂದಿದ ರಸ್ತೆಗಳ ವಿವರಗಳನ್ನೇ ಹೊಸ ಪ್ರದೇಶಕ್ಕೆ ವಿಸ್ತರಣೆ ಮಾಡುವುದು, ಆ ಮೂಲಕ ಸರಿಯಾದ, ಸಮರ್ಪಕ ವಿಳಾಸ ನೀಡುವ ಕುರಿತಂತೆ ಈ ಯೋಜನೆಗೆ ರೂಪುರೇಷೆ ನೀಡಲಾಗಿದೆ.
ಇದರಿಂದಾಗಿ ತೀರಾ ಅಗತ್ಯ ಸಂದರ್ಭದಲ್ಲಿ, ಅಪಘಾತ ಅಥವಾ ಇನ್ನಿತರ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸಿದಲ್ಲಿ ಸ್ಥಳಕ್ಕೆ ಪೊಲೀಸ್, ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಇತ್ಯಾದಿಗಳು ಸುಲಭವಾಗಿ ತಲುಪಲು ಸಾಧ್ಯವಾಗಲಿದೆ. ಜೊತೆಗೆ ಈ ನಿಖರ ವಿಳಾಸದಿಂದಾಗಿ ತೆರಿಗೆ ಸಂಗ್ರಹವೂ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸುಲಭವಾಗಲಿದೆ.
ಈ ವ್ಯವಸ್ಥೆಯ ಅನ್ವಯ, ರಸ್ತೆ, ಕಟ್ಟಡ, ಸ್ಥಳಗಳನ್ನು ಗುರುತಿಸಲು ವಿಶೇಷ ಸಂಕೇತ ಸಂಖ್ಯೆಯನ್ನು ನೀಡಲಾಗುತ್ತದೆ. ಅಲ್ಫಾನ್ಯುಮರಿಕ್ ಪದ್ಧತಿಯಲ್ಲಿ ವಿಳಾಸ ನೀಡಲಾಗುತ್ತದೆ. ಆರಂಭದಲ್ಲಿ ಈ ಯೋಜನೆಯನ್ನು ನವದೆಹಲಿ ಮುನ್ಸಿಪಲ್ ಕಾರ್ಪೊರೇಶನ್, ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಶನ್, ಆಂಧ್ರ ಪ್ರದೇಶದ 110 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಯೋಗ ಮಾಡಲಾಗುತ್ತದೆ ಎಂದು ಈ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.