ಬೆಂಗಳೂರು: ಕೇರಳದ ಚೋಟಾನಿಕ್ಕರ ಶ್ರೀ ಭಗವತೀ ಕ್ಷೇತ್ರಕ್ಕೆ ಬೆಂಗಳೂರಿನ ಉದ್ಯಮಿಯೊಬ್ಬರು 700 ಕೋಟಿ ರೂ. ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ನಗರದ ಸ್ವಾಮೀಜಿ ಗ್ರೂಪ್ ಆಫ್ ಕಂಪನಿಯ ಮಾಲೀಕ ಗಾನ ಶ್ರವಣ್ ಅವರು ದೇಗುಲಕ್ಕೆ ಭಾರೀ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ ಉದ್ಯಮಿಯಾಗಿದ್ದಾರೆ. ಇವರು ನೀಡಿರುವ ಈ ದೊಡ್ಡ ಮೊತ್ತದ ಹಣವನ್ನು ಬಳಕೆ ಮಾಡಿಕೊಂಡು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲಾಗುವುದು ಎಂದು ಕೇರಳ ಸರ್ಕಾರದ ದೇವಸ್ವಂ ಬೋರ್ಡ್ ತಿಳಿಸಿದೆ.
ಕೆಲ ವರ್ಷಗಳ ಹಿಂದೆ ಗಾನ ಶ್ರವಣ್ ಅವರು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಆತ್ಮಹತ್ಯೆಯ ಯೋಚನೆಯಲ್ಲಿದ್ದರು. ಇಂತಹ ಸಂದರ್ಭದಲ್ಲಿ ಕೇರಳದ ಕೊಚ್ಚಿಯ ಹೊರವಲಯದಲ್ಲಿರುವ ಚೋಟಾನಿಕ್ಕರ ಭಗವತಿ ಸನ್ನಿಧಾನಕ್ಕೆ ಭೇಟಿ ನೀಡಿದರೆ ಸಮಸ್ಯೆ ಮುಕ್ತಿ ಕಾಣುತ್ತದೆ ಎಂದು ಇವರಿಗೆ ಗುರುಗಳೊಬ್ಬರು ತಿಳಿಸುತ್ತಾರೆ. ಅದರಂತೆ ಸನ್ನಿಧಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಇವರ ಸಮಸ್ಯೆಗಳು ಬಗೆಹರಿಯುತ್ತವೆ. ಜೊತೆಗೆ ಉದ್ಯಮದಲ್ಲಿಯೂ ಭಾರೀ ಪ್ರಮಾಣದ ಏರಿಕೆ ಕಂಡು ಬಂತು. ಈ ಎಲ್ಲಾ ಪವಾಡಗಳ ಬಳಿಕ ಗಾನ ಶ್ರವಣ್ ತಾಯಿಯ ಪರಮ ಭಕ್ತನಾಗಿ ಬದಲಾಗಿದ್ದಾರೆ. ಸದ್ಯ ದೇಗುಲಕ್ಕೆ 700 ಕೋಟಿ ರೂ. ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಭಗವತಿಯ ಮೇಲಿನ ತಮ್ಮ ನಂಬಿಕೆಯನ್ನು ಜಗತ್ತಿಗೆ ಸಾರಿದ್ದಾರೆ.
ಇನ್ನು ಈ ಮೊತ್ತದಲ್ಲಿ ನಡೆಯಲಿರುವ ಜೀರ್ಣೋದ್ಧಾರ ಕೆಲಸಗಳ ಸಂಬಂಧ ನೀಲನಕ್ಷೆಯನ್ನು ಸಹ ದೇವಸ್ವಂ ಬೋರ್ಡ್ ಪರಿಶೀಲನೆ ನಡೆಸುತ್ತಿದೆ. ಯೋಜನೆ ಮಂಜೂರಾದ ಐದು ವರ್ಷಗಳಲ್ಲಿ ಈ ಜೀರ್ಣೋದ್ಧಾರ ಕಾರ್ಯವನ್ನು ಸಂಪೂರ್ಣ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಜೊತೆಗೆ ಎಲ್ಲರಿಗೂ ಉಚಿತ ಚಿಕಿತ್ಸೆ ದೊರೆಯುವಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಹ ನಿರ್ಮಾಣ ಮಾಡಲಾಗುವುದು ಎಂದು ಮೂಲಗಳು ಹೇಳಿವೆ. ಜೊತೆಯಲ್ಲಿ ಎರಡು ಸೇತುವೆಗಳು, ಒಳ ಚರಂಡಿ ವ್ಯವಸ್ಥೆ, ಕರಕುಶಲ ಕೈಗಾರಿಕಾ ಉದ್ಯಾನ, ಕಮರ್ಷಿಯಲ್ ಟವರ್ ನಿರ್ಮಾಣ ಕಾರ್ಯದ ಬಗ್ಗೆಯೂ ನೀಲನಕ್ಷೆಯಲ್ಲಿ ಮಾಹಿತಿ ಇದೆ.
ಜೊತೆಗೆ ದೇಗುಲದ ಗರ್ಭಗುಡಿಗೆ 300 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಹೊದಿಕೆ, 5 ಕೋಟಿ ರೂ. ಗಳನ್ನು ಬಳಸಿ ಎರಡು ಚಿನ್ನದ ಲೇಪನವಿರುವ ಗೋಪುರ ನಿರ್ಮಾಣ ಮಾಡಲಾಗುವುದು ಎಂದು ದೇವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.