ಬೆಂಗಳೂರು: ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾದ 9 ದಿನಗಳಲ್ಲಿ ರೋಗಿಗೆ ರೆಮಿಡಿಸಿವಿರ್ ನೀಡುವುದರಿಂದ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯ ಎಂದು ಅಧ್ಯಯನವೊಂದು ತಿಳಿಸಿದೆ.
ಈ ಸಂಬಂಧ ಜಯನಗರದ ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ ಸಮೀರ್ ಬನ್ಸಾಲ್, ಡಾ ಸುಹಿತಾ ಬಿಸಾನಿ, ಡಾ ಹರಿಪ್ರಸಾದ್ ಕಲ್ಪಕಂ, ಡಾ.ರವೀಂದ್ರ ಮೆಹ್ತಾ ಅವರು ಅಧ್ಯಯನ ನಡೆಸಿದ್ದು, ರೆಮಿಡಿಸಿವಿರ್ ನೀಡಿದ ರೋಗಿಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ. ಈ ಅಧ್ಯಯನ ವರದಿಯನ್ನು ನ. 10 ರಂದು ಆರೋಗ್ಯ ಸಂಶೋಧನೆಯ ಪ್ರಿ ಪ್ರಿಂಟ್ಗಳನ್ನು ಮುದ್ರಣ ಮಾಡುವ medRxiv ನಲ್ಲಿ ಪ್ರಕಟ ಮಾಡಲಾಗಿದೆ.
ಈ ಅಧ್ಯಯನಕ್ಕಾಗಿ ಅಪೋಲೋ ವೈದ್ಯರ ತಂಡ ಜೂನ್ 25 ರಿಂದ ಅಕ್ಟೋಬರ್ 3ರ ನಡುವೆ ಮಧ್ಯಮ ಗುಣಲಕ್ಷಣಗಳನ್ನು ಹೊಂದಿರುವ ರೋಗಿಗಳಿಂದ ಹಿಡಿದು ತೀವ್ರ ಪ್ರಮಾಣದಲ್ಲಿ ರೋಗಕ್ಕೆ ತುತ್ತಾಗಿದ್ದ 346 ರೋಗಿಗಳ ಆರೋಗ್ಯ ದಾಖಲೆಗಳನ್ನು ಮರುಪರಿಶೀಲನೆ ಮಾಡಿದ್ದಾರೆ. ಈ ರೋಗಿಗಳಲ್ಲಿ 260 ಜನರಿಗೆ ಕೊರೋನಾ ಪ್ರಾರಂಭದ 9 ದಿನಗಳೊಳಗೆ ರೆಮಿಡಿಸಿವಿರ್ ನೀಡಲಾಗಿತ್ತು ಮತ್ತು 86 ಜನರಿಗೆ 9 ದಿನಗಳು ಕಳೆದ ಬಳಿಕ ರೆಮಿಡಿಸಿವಿರ್ ನೀಡಲಾಗಿತ್ತು. ಈ ಪೈಕಿ ಒಟ್ಟು 76 ರೋಗಿಗಳು ಮೃತಪಟ್ಟಿದ್ದಾರೆ. ಈ ಪೈಕಿ 23 ಮಂದಿ ತೀವ್ರ ತರದ ರೋಗ ಲಕ್ಷಣಗಳಿಂದ ಬಳಲುತ್ತಿದ್ದವರು ಮೃತಪಟ್ಟಿದ್ದಾರೆ. ರೋಗಲಕ್ಷಣಗಳು ಕಾಣಿಸಿಕೊಂಡ ಒಂಬತ್ತು ದಿನಗಳ ಒಳಗಾಗಿ ರೆಮಿಡಿಸಿವಿರ್ ನೀಡಲಾದವರಲ್ಲಿ 47 ಜನರು ಮಾತ್ರವೇ ಮೃತಪಟ್ಟಿದ್ದಾರೆ. ಒಂಬತ್ತು ದಿನಗಳ ಬಳಿಕ ರೆಮಿಡಿಸಿವಿರ್ ನೀಡಲಾದ ರೋಗಿಗಳಲ್ಲಿ 29 ರೋಗಿಗಳು ಸಾವನ್ನಪ್ಪಿದ್ದಾರೆ. ಔಷಧ ನೀಡುವಿಕೆಯ ನಡುವೆ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ ಇದೆ ಎಂಬುದನ್ನು ಅಧ್ಯಯನ ತಿಳಿಸಿದೆ.
ಈ ಅಧ್ಯಯನದಿಂದ ಸೋಂಕು ತಗುಲಿದ 9 ದಿನಗಳೊಳಗಾಗಿ ರೆಮಿಡಿಸಿವಿರ್ ನೀಡಿದವರಲ್ಲಿ ಸೋಂಕು ನಿವಾರಣೆ, ಗುಣಪಡಿಸುವಿಕೆಯಲ್ಲಿ ಧನಾತ್ಮಕ ಪರಿಣಾಮ ಬೀರಿದೆ. ಇದನ್ನು ನೀಡಿದರೆ ಪರಿಣಾಮಕಾರಿ ಚೇತರಿಕೆ ಮತ್ತು ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯ ಎಂದು ಅಧ್ಯಯನ ನಡೆಸಿದ ವೈದ್ಯರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.