ಬೆಂಗಳೂರು: ರೈತರ ಸಮಸ್ಯೆಗಳಿಗೆ ಕಿವಿಯಾಗಲು, ಅವುಗಳ ಅಧ್ಯಯನ, ಬೇಡಿಕೆಗಳ ಕುರಿತು ತಿಳಿದುಕೊಳ್ಳಲು ಮತ್ತು ಅಹವಾಲುಗಳನ್ನಾಲಿಸುವ ಉದ್ದೇಶದಿಂದ ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ವಿನೂತನ ಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ.
ರೈತರಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಒದಗಿಸಿಕೊಡಲು ಪೂರಕವಾಗುವಂತೆ ನ. 14 ರಂದು ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇವರ ಜನ್ಮದಿನವೂ ಅಂದೇ ಆಗಿದ್ದು, ಈ ದಿನದಂದು ಮಂಡ್ಯದ ಕೆ.ಆರ್ ಪೇಟೆಯ ಮಡುವಿನಕೋಡಿ ಗ್ರಾಮದಿಂದ ಈ ವಿನೂತನ ಪ್ರಯತ್ನ ಆರಂಭ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಆ ಬಳಿಕ ಪ್ರತಿ ತಿಂಗಳು ಎರಡರಿಂದ ಮೂರು ಜಿಲ್ಲೆಗಳ ತಲಾ ಒಂದು ಹಳ್ಳಿಗೆ ಸಂಬಂಧಿಸಿದಂತೆ ವಾಸ್ತವ್ಯ ಹೂಡಿ, ಕೃಷಿ ಚಟುವಟಿಕೆಗಳಲ್ಲಿ ಸ್ವತಃ ಭಾಗಿಯಾಗಿ ಅವರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಲು ಅಧ್ಯಯನ ಪ್ರವಾಸ ನಡೆಸಲಿರುವುದಾಗಿಯೂ ಸಚಿವರು ತಿಳಿಸಿದ್ದಾರೆ. ಆ ಬಳಿಕ ಇವೆಲ್ಲದರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸರ್ಕಾರದಿಂದ ದೊರೆಯಬೇಕಾದ ಅಗತ್ಯತೆಗಳನ್ನು ಪೂರೈಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಹಾಗೆಯೇ ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಕಾರಣವಾಗುವ ಅಂಶಗಳನ್ನು ಪತ್ತೆ ಹಚ್ಚಿ, ಆತ್ಮಹತ್ಯೆ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು. ಹಾಗೆಯೇ ಸುಸ್ಥಿರ ಕೃಷಿ ಚಟುವಟಿಕೆ, ಮಿಶ್ರ ಬೆಳೆ ಪದ್ಧತಿ ಬಗ್ಗೆ ಜಾಗೃತಿ, ಪ್ರಗತಿಪರ ರೈತರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳನ್ನು ಸಹ ರೈತರೊಂದಿಗೆ ಒಂದು ದಿನದಲ್ಲಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.