ಬೆಂಗಳೂರು: ಕೊನೆಗೂ ಬಹು ನಿರೀಕ್ಷಿತ ಶಿರಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡು, ಫಲಿತಾಂಶ ಹೊರಬಿದ್ದಿದೆ. ಆರ್ ಆರ್ ನಗರದಂತೆಯೇ ಶಿರಾ ಕ್ಷೇತ್ರದಲ್ಲಿಯೂ ಬಿಜೆಪಿ ತನ್ನ ಪ್ರಾಬಲ್ಯ ಮೆರೆದು ಗೆಲುವಿನ ನಗೆ ಬೀರಿದೆ.
ಶಿರಾ ಕ್ಷೇತ್ರದ ಹಣೆಬರಹವನ್ನು ಸಹ ಮತದಾರ ನಿರ್ಧರಿಸಿದ್ದು, ಬಿಜೆಪಿ ಇದೇ ಮೊದಲ ಬಾರಿಗೆ ವಿಜಯದ ನಗೆ ಬೀರಿ ಇತಿಹಾಸ ಬರೆದಿದೆ. ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜೇಶ್ ಗೌಡ ಅವರು 63,294 ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿಬಿ ಜಯಚಂದ್ರ ಅವರನ್ನು 10,380 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಮೊದಲ ಹಂತದ ಮತ ಎಣಿಕೆಯಿಂದಲೇ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಮುನ್ನಡೆ ಕಾಯ್ದುಕೊಂಡಿದ್ದು 63,294 ಮತಗಳನ್ನು ಪಡೆದು ವಿಜಯದ ನಗೆ ಬೀರಿದ್ದಾರೆ. ಜಯಚಂದ್ರ 52,914 ಮತಗಳಿಗೆ ತೃಪ್ತಿ ಪಡೆಯುವಂತಾಗಿದೆ. ಜೆಡಿಎಸ್ನ ಅಮ್ಮಾಜಮ್ಮ 29,166 ಮತಗಳನ್ನು ಗಳಿಸಿದ್ದಾರೆ. ಆ ಮೂಲಕ ಬಿಜೆಪಿ ಶಿರಾದಲ್ಲಿ ಗೆಲುವಿನ ಬಾವುಟ ಹಾರಿಸಿದೆ.
ಈ ಬಾರಿಯೂ ಮತದಾರರ ಒಲವು, ನಂಬಿಕೆ ಬಿಜೆಪಿ ಮೇಲಿದೆ ಎಂಬುದನ್ನು ಈ ಉಪಚುನಾವಣೆ ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ. ಆ ಮೂಲಕ ಬಿಜೆಪಿಯಲ್ಲಿಯೂ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ ಎಂದೇ ಹೇಳಬಹುದಾಗಿದೆ. ವಿರೋಧ ಪಕ್ಷಗಳು ಬಿಜೆಪಿ ಬಗ್ಗೆ ಯಾವುದೇ ಆರೋಪಗಳನ್ನು ಹೊರಿಸಿದರೂ, ಜನರ ನಂಬಿಕೆ ಗಳಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಜನಾಶೀರ್ವಾದ ಪಡೆದಿದೆ ಎಂದರೆ ತಪ್ಪಾಗಲಾರದು.
ಆರ್ ಆರ್ ನಗರದಲ್ಲಿಯೂ ಸುಮಾರು 44,548 ಮತಗಳ ಅಂತರದಲ್ಲಿ ಬಿಜೆಪಿಯ ಮುನಿರತ್ನ ಗೆಲುವು ಸಾಧಿಸಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ನ ಎಲ್ಲಾ ಲೆಕ್ಕಾಚಾರಗಳನ್ನು ಈ ಚುನಾವಣೆ ತಲೆಕೆಳಗಾಗಿಸಿದೆ ಎಂದರೂ ಅತಿಶಯವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.