ಬೆಂಗಳೂರು: ರಾಜ್ಯದ ಸಾರಿಗೆ ಬಸ್ಸುಗಳಾದ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಅಪಘಾತಗಳನ್ನು ಕಡಿಮೆಯಾಗುವಂತೆ ಮಾಡುವ ಉದ್ದೇಶದಿಂದ ಕೆಎಸ್ಆರ್ಟಿಸಿ ಒಂದು ಹೆಜ್ಜೆ ಮುಂದಿಟ್ಟಿದೆ.
ಬಸ್ಸುಗಳಲ್ಲಿ ಆಧುನಿಕ ಯುರೋಪ್ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವ ಮೂಲಕ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಸ್ಥೆ ಯೋಜನೆ ರೂಪಿಸಿದೆ. ಈ ತಂತ್ರಜ್ಞಾನದ ಮೂಲಕ ರಾತ್ರಿ ಸಮಯದಲ್ಲಿ ಸಂಚರಿಸುವ ಬಸ್ಸುಗಳಿಗೆ, ಎಸಿ ಬಸ್ಸುಗಳಿಗೆ ಹಾಗೂ ಹೆದ್ದಾರಿಗಳಲ್ಲಿ ಸಂಚರಿಸುವ ಬಸ್ಸುಗಳಿಗೆ ಹೆಚ್ಚಿನ ಅನೂಕೂಲವಾಗಲಿದೆ.
ಈ ತಂತ್ರಜ್ಞಾನವನ್ನು ಬಸ್ಸುಗಳ ಮುಂಭಾಗಕ್ಕೆ ಅಳವಡಿಸಲಾಗುತ್ತದೆ. ಇದು ಬಸ್ಸಿನಿಂದ ಸುಮಾರು 500 ಮೀ. ದೂರದಲ್ಲಿರುವ ವಾಹನಗಳು, ವ್ಯಕ್ತಿಗಳು ಅಥವಾ ವಸ್ತುಗಳು ಏನೇ ಇದ್ದರೂ ತಕ್ಷಣವೇ ಬಸ್ಸಿನಲ್ಲಿ ಅಳವಡಿಸಲಾದ ಕ್ಯಾಮೆರಾ ಮತ್ತು ಸ್ಕ್ರೀನ್ ಮೂಲಕ ಚಾಲಕನ ಗಮನಕ್ಕೆ ಬರುತ್ತದೆ. ಅಲ್ಲದೆ ಚಾಲಕನಿಗೆ ಎಚ್ಚರಿಕೆಯ ಸಂದೇಶ ನೀಡಿ, ಸ್ವಯಂಚಾಲಿತ ಬ್ರೇಕ್ ಹಾಕುವಂತೆ ಈ ತಂತ್ರಜ್ಞಾನ ರೂಪಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಚಾಲಕನಿಗೆ ನಿದ್ದೆ ಮಂಪರಾದ ಸಂದರ್ಭದಲ್ಲಿ ಆ ವಿಚಾರವನ್ನು ನಿರ್ವಾಹಕ ಮತ್ತು ಸ್ಥಳೀಯ ಬಸ್ಸು ನಿಲ್ದಾಣಕ್ಕೆ ತಿಳಿಯಪಡಿಸುವಂತಹ ಗುಣಲಕ್ಷಣಗಳನ್ನು ಸಹ ಈ ತಂತ್ರಜ್ಞಾನ ಹೊಂದಿದೆ.
ಆರಂಭದಲ್ಲಿ ಐದು ಬಸ್ಸುಗಳಿಗೆ ಪ್ರಾಯೋಗಿಕವಾಗಿ ಈ ಆರ್ಎಫ್- ಕ್ಯಾಮೆರಾ ತಂತ್ರಜ್ಞಾನ ಅಳವಡಿಸಲಾಗುವುದು. ಆ ಬಳಿಕ ಅದರ ಸಾಧ್ಯತೆ ಭಾದ್ಯತೆಗಳನ್ನು ಅನುಸರಿಸಿಕೊಂಡು ಈ ತಂತ್ರಜ್ಞಾನವನ್ನು ರಾಜ್ಯದ ರಾತ್ರಿ ಸಂಚರಿಸುವ ಬಸ್ಸುಗಳು, ಹವಾನಿಯಂತ್ರಿತ ಬಸ್ಸುಗಳು ಸೇರಿದಂತೆ ಸುಮಾರು 700 ಬಸ್ಸುಗಳಿಗೆ ಅಳವಡಿಸಲಾಗುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.