ಮುಂಬೈ: ಭಾರತೀಯ ಸೇನೆಗೆ ತಮ್ಮ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ 20 ಲಕ್ಷ ರೂಪಾಯಿ ಹಣವನ್ನು ನೀಡುವ ಮೂಲಕ ಮಹಾರಾಷ್ಟ್ರದ ನಾಸಿಕ್ನ ಡಾ. ನಿಶಿಗಂಧಾ ಮೊಗಲ್ ಇತರರಿಗೆ ಮಾದರಿಯಾಗಿದ್ದಾರೆ.
ಇವರು ತಮ್ಮ ಚಿನ್ನಾಭರಣವನ್ನೇ ಸೇನೆಗೆ ನೀಡಲು ಮುಂದಾಗಿದ್ದರು. ಆದರೆ ಸೇನೆ ಯಾವುದೇ ರೀತಿಯ ಫಂಡ್ ಅನ್ನು ಚಿನ್ನಾಭರಣದ ರೂಪದಲ್ಲಿ ಸ್ವೀಕರಿಸದೇ ಇರುವ ಹಿನ್ನೆಲೆಯಲ್ಲಿ, ತಮ್ಮ ಚಿನ್ನಾಭರಣವನ್ನು ಮಾರಾಟ ಮಾಡಿ ಅದರಿಂದ ಬಂದ 20 ಲಕ್ಷ ರೂ. ಗಳನ್ನು ಸೇನೆಗೆ ಸಮರ್ಪಣೆ ಮಾಡಿದ್ದಾರೆ. ಇವರ ಈ ಸೇವಾ ಮನೋಭಾವಕ್ಕೆ ಮೆಚ್ಚಿರುವ ಭಾರತೀಯ ಸೇನೆ ಅವರಿಗೆ ಧನ್ಯವಾದ ತಿಳಿಸಿದೆ.
ನಿಶಿಗಂಧಾ ಅವರು ನಾಸಿಕ್ನ ಬಿಜೆಪಿ ಎಂಎಲ್ಎ ಆಗಿದ್ದು, ಅವರ ಪತಿ ರಾಜಬಾವು ಮೊಗಲ್ ಅವರು ಸಂಘದ ಹಿರಿಯ ಸ್ವಯಂಸೇವಕರಾಗಿದ್ದಾರೆ. ನಿಶಿಗಂಧಾ ಅವರ ಈ ಸಮರ್ಪಣಾ ಮನೋಭಾವಕ್ಕೆ ಭಾರತ ಸರ್ಕಾರ, ರಕ್ಷಣಾ ಸಚಿವಾಲಯ ಮತ್ತು ಮಿಲಿಟರಿ ಬೋರ್ಡ್ ಅಕೌಂಟ್ಸ್ ಡಿಪಾರ್ಟ್ಮೆಂಟ್ನ ಕೊ-ಡೈರೆಕ್ಟರ್ ಲೆ. ಕರ್ನಲ್ ಸೌಮಿತ್ರ ಮಿಶ್ರ ಅವರು ಪತ್ರದ ಮೂಲಕ ಧನ್ಯವಾದ ಸಮರ್ಪಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಡಾ ನಿಶಿಗಂಧಾ ಮೊಗಲ್, 1999 ರ ಕಾರ್ಗಿಲ್ ಯುದ್ಧವನ್ನು ಕಂಡ ಬಳಿಕ ಭಾರತೀಯ ಸೇನೆಗೆ ತಾವು ಈ ರೀತಿಯ ಒಂದು ಸೇವೆಯನ್ನು ಒದಗಿಸಿಕೊಡುವ ಇಚ್ಛೆ ಹೊಂದಿದ್ದಾಗಿ ತಿಳಿಸಿದ್ದಾರೆ. ಕಳೆದ 5 ವರ್ಷಗಳ ಹಿಂದೆ ತಾವು ಕಾರ್ಗಿಲ್ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅಲ್ಲಿನ ವಾತಾವರಣವನ್ನು ನೋಡಿ ಆಚ್ಚರಿಯಾಯಿತು. ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿಯೂ ದೇಶಕ್ಕಾಗಿ ಕಾದಾಡುವ ಯೋಧರ ತ್ಯಾಗ ಮನ ಮುಟ್ಟಿತು. ಇದನ್ನೆಲ್ಲಾ ಗಮನಿಸಿದ ತಮಗೆ ತಮ್ಮ 55 ತೊಲ ಬಂಗಾರದ ಒಡವೆಗಳನ್ನು ಮಾರಿ ಅದರಿಂದ ಬಂದ ಹಣವನ್ನು ಯೋಧರ ಅಭ್ಯುದಯಕ್ಕಾಗಿ ಸೇನೆಗೆ ನೀಡುವ ಮಹತ್ವಾಕಾಂಕ್ಷೆ ಹೆಚ್ಚಾಯಿತು. ಈ ಆಸೆಯನ್ನು ಇದೀಗ ಪೂರೈಸಿಕೊಂಡ ಖುಷಿ ಇದೆ ಎಂದು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯೂ ತಮಗೆ ಧನ್ಯವಾದ ತಿಳಿಸಿ ಪತ್ರ ಬರೆದಿದ್ದು, ಅವರ ಈ ಪ್ರತಿಕ್ರಿಯೆಯಿಂದಲೂ ತಾವು ಸಂತುಷ್ಟರಾಗಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.