ರಾಜಸ್ಥಾನ: ಖಾದಿ ಆನ್ಲೈನ್ ಮಾರಾಟವು ಈ ದೀಪಾವಳಿಯಂದು ಸಶಕ್ತ ಕುಂಬಾರಿಕೆ ವೃತ್ತಿಪರರಿಗೆ ಅದೃಷ್ಟವನ್ನು ತಂದಿದೆ. ಖಾದಿ ಭಾರತದ ಇ-ಪೋರ್ಟಲ್ನಿಂದಾಗಿ ರಾಜಸ್ಥಾನದ ಜೈಸಲ್ಮೇರ್ ಮತ್ತು ಹನುಮಾನ್ಘಡ ಜಿಲ್ಲೆಗಳ ದೂರದ ಭಾಗಗಳಲ್ಲಿ ಈ ವೃತ್ತಿಪರ ಕುಂಬಾರರು ತಯಾರಿಸಿದ ಮಣ್ಣಿನ ಹಣತೆಗಳು ದೇಶದ ಮೂಲೆ ಮೂಲೆಗಳನ್ನು ತಲುಪುತ್ತಿವೆ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ವು ಈ ವರ್ಷ ಮೊದಲ ಬಾರಿಗೆ ಮಣ್ಣಿನ ಹಣತೆಗಳನ್ನು ಆನ್ಲೈನ್ ಮತ್ತು ಮಳಿಗೆಗಳ ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ. ಆ ಮೂಲಕ ಪ್ರಧಾನಮಂತ್ರಿಯವರ ವೋಕಲ್ ಫೋರ್ ಲೋಕಲ್ ಕರೆಯಂತೆ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಲು ಮುಂದಾಗಿದೆ. ಅದಕ್ಕನುಗುಣವಾಗಿ ಕೆವಿಐಸಿ ಅಕ್ಟೋಬರ್ 8 ರಂದು ಮಣ್ಣಿನ ಹಣತೆಗಳ ಆನ್ಲೈನ್ ಮಾರಾಟವನ್ನು ಪ್ರಾರಂಭಿಸಿದೆ. ಒಂದು ತಿಂಗಳೊಳಗೆ ಸುಮಾರು 10,000 ಹಣತೆಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಿದೆ. ಜೇಡಿಮಣ್ಣಿನ ಹಣತೆಗಳು ಪ್ರಾರಂಭದ ಮೊದಲ ದಿನದಿಂದಲೇ ಭಾರಿ ಬೇಡಿಕೆ ಪಡೆದಿದೆ. 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಬಹುಪಾಲು ಅಲಂಕಾರಿಕ ಹಣತೆಗಳು ಸಂಪೂರ್ಣವಾಗಿ ಮಾರಾಟವಾಗಿದೆ.
ಇದನ್ನು ಅನುಸರಿಸಿ, ಕೆವಿಐಸಿ ಹೊಸ ವಿನ್ಯಾಸದಿಂದ ಕೂಡಿದ ಹಣತೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅವುಗಳಿಗೂಸಹ ಭಾರಿ ಬೇಡಿಕೆಯಿದೆ. ಹಣತೆಗಳ ಮಾರಾಟವು ದೀಪಾವಳಿ ಹತ್ತಿರವಾಗುತ್ತಿದ್ದಂತೆ ಮತ್ತಷ್ಟು ಹೆಚ್ಚುತ್ತಿದೆ. ಕೆವಿಐಸಿಯು 8 ಬಗೆಯ ಅಲಂಕಾರಿಕ ಹಣತೆಗಳನ್ನು ಒಂದು ಡಜನ್ನಿಗೆ 84 ರಿಂದ 108 ರೂಪಾಯಿವರೆಗೆ ಬೆಲೆಯನ್ನು ನಿಗದಿ ಪಡಿಸಿದೆ. ಈ ಹಣತೆಗಳಿಗೆ ಕೆವಿಐಸಿ 10% ರಿಯಾಯಿತಿ ನೀಡುತ್ತಿದೆ. ಪ್ರತಿ ಹಣತೆಗಳ ಮಾರಾಟದಿಂದ 2 ರಿಂದ 3 ರೂ. ಗಳಿಸುತ್ತಿರುವುದಾಗಿ ಕೆವಿಐಸಿ ಕುಂಬಾರಿಕೆ ವೃತ್ತಿಪರರು ಸಂತೋಷ ವ್ಯಕ್ತಪಡಿಸಿದ್ದಾರೆ. ಖಾದಿ ವಿಭಾಗದ ಅಲಂಕಾರಿಕ ಹಣತೆಗಳು www.khadiindia.gov.in ನಲ್ಲಿ ಲಭ್ಯವಿದೆ.
ಕೆವಿಐಸಿಯು ಹಣತೆ ಮತ್ತು ಇತರ ಮಣ್ಣಿನ ವಸ್ತುಗಳನ್ನು ಲಕ್ಷ್ಮಿ ಗಣೇಶ ವಿಗ್ರಹಗಳು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ದೆಹಲಿ ಮತ್ತು ಇತರ ನಗರಗಳಲ್ಲಿನ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿದೆ. ಈ ವಿಗ್ರಹಗಳನ್ನು ವಾರಣಾಸಿ, ರಾಜಸ್ಥಾನ, ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಕುಂಬಾರಿಕಾ ವೃತಿಪರರು ತಯಾರಿಸುತ್ತಿದ್ದಾರೆ ಮತ್ತು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ನ ಪೋಖರಾನ್ನಲ್ಲಿರುವ ಕೆವಿಐಸಿ ಘಟಕಗಳಿಂದ ಹನುಮನ್ ಘಡ ಜಿಲ್ಲೆಯ ರಾವತ್ಸರ್ನಿಂದ ಹಣತೆಗಳನ್ನು ಸಂಗ್ರಹಿಸಲಾಗುತ್ತಿದೆ. ವಿವಿಧ ಖಾದಿ ಮಳಿಗೆಗಳ ಮೂಲಕ 10,000 ಹಣತೆಗಳನ್ನು ಮಾರಾಟ ಮಾಡಲಾಗಿದೆ.
ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾರವರು ಮಾತನಾಡಿ, ಜೇಡಿಮಣ್ಣಿನ ವಸ್ತುಗಳ ಆನ್ಲೈನ್ ಮಾರಾಟವು ಕೆವಿಐಸಿಯ ಕುಂಬಾರಿಕಾ ವೃತ್ತಿಪರರ ನೈಜ ಅರ್ಥದಲ್ಲಿ ಸಬಲೀಕರಣವಾಗಿದೆ. “ಈ ಮೊದಲು, ಒಂದು ನಿರ್ದಿಷ್ಟ ಪ್ರದೇಶದ ಕುಂಬಾರಿಕಾ ವೃತ್ತಿಪರರು ತಮ್ಮ ವಸ್ತುಗಳನ್ನು ಸ್ಥಳೀಯವಾಗಿ ಮಾತ್ರ ಮಾರಾಟ ಮಾಡುತ್ತಿದ್ದರು ಆದರೆ ಖಾದಿಯ ಇ-ಪೋರ್ಟಲ್ ಭಾರತದಾದ್ಯಂತ ತಲುಪುವ ಮೂಲಕ, ಈ ಉತ್ಪನ್ನಗಳನ್ನು ದೇಶದ ಪ್ರತಿಯೊಂದು ಭಾಗದಲ್ಲೂ ಮಾರಾಟ ಮಾಡಲಾಗುತ್ತಿದೆ. ಕೆವಿಐಸಿ ಇ-ಪೋರ್ಟಲ್ ಮೂಲಕ, ರಾಜಸ್ಥಾನದಲ್ಲಿ ತಯಾರಿಸಿದ ಹಣತೆಗಳನ್ನು ದೂರದ ರಾಜ್ಯಗಳಾದ ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ಅಸ್ಸಾಂ, ಮಹಾರಾಷ್ಟ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಖರೀದಿಸಲಾಗುತ್ತಿದೆ. ಇದು ಉತ್ಪಾದನೆಯಲ್ಲಿ ಹೆಚ್ಚಳವನ್ನು ಮತ್ತು ಕುಂಬಾರಿಕೆ ವೃತ್ತಿಪರರಿಗೆ ಹೆಚ್ಚಿನ ಆದಾಯವುಂಟಾಗುವಂತೆ ಮಾಡಿದೆ ”ಎಂದು ಹೇಳಿದ್ದಾರೆ. “ಕುಂಬಾರಿಕೆ ವೃತ್ತಿಪರರನ್ನು ಸಬಲೀಕರಣಗೊಳಿಸುವುದು ಮತ್ತು ಕುಂಬಾರಿಕೆ ಕಲೆಯನ್ನು ಪುನರುಜ್ಜೀವನಗೊಳಿಸುವುದು ಪ್ರಧಾನಮಂತ್ರಿಯವರ ಕನಸು” ಎಂದು ಸಕ್ಸೇನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೋಖರಾನ್ನ ಪಿಎಂಇಜಿಪಿ ಘಟಕದ ಕುಂಬಾರಿಕೆ ವೃತ್ತಿಪರರಲ್ಲೊಬ್ಬರಾದ ಮದನ್ ಲಾಲ್ ಪ್ರಜಾಪತಿ ಅವರು ತಮ್ಮ ಗ್ರಾಮದ ಹೊರಗೆ ಹಣತೆಗಳನ್ನು ಮಾರಾಟ ಮಾಡುತ್ತಿರುವುದು ಇದೇ ಮೊದಲು ಎಂದು ಹೇಳಿದರು. “ಈ ದೀಪಾವಳಿಯಲ್ಲಿ ನಮ್ಮ ಮಾರಾಟವು ಹೆಚ್ಚಾಗಿದೆ. ನಾವು ನಮ್ಮ ಹಣತೆಗಳನ್ನು ದೆಹಲಿಯ ಖಾದಿ ಭವನಕ್ಕೆ ಪೂರೈಸುತ್ತಿದ್ದೇವೆ ಮತ್ತು ಅಲ್ಲಿಂದ ಅದನ್ನು ದೇಶಾದ್ಯಂತ ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ನನಗೆ ಉತ್ತಮ ಆದಾಯವನ್ನು ತರುತ್ತಿದೆ”ಎಂದು ಅವರು ನುಡಿದಿದ್ದಾರೆ.
ಗಮನಾರ್ಹವಾಗಿ, ಕೆವಿಐಸಿಯು ಕುಂಬಾರ್ ಸಶಕ್ತೀಕರಣ ಯೋಜನೆಯಡಿ ಕುಂಬಾರಿಕಾ ವೃತ್ತಿಪರರಿಗೆ ವಿದ್ಯುತ್ ಕುಂಬಾರಿಕಾ ಚಕ್ರ ಉಪಕರಣ ಮತ್ತು ಇತರ ಉಪಕರಣಗಳನ್ನು ಒದಗಿಸಿದೆ ಮತ್ತು ತರಬೇತಿಯನ್ನು ಸಹ ನೀಡಿದೆ. ಇದರಿಂದಾಗಿ ಉತ್ಪಾದನೆ ಮತ್ತು ಆದಾಯ 5 ಪಟ್ಟು ಹೆಚ್ಚಾಗಿದೆ. ಇಲ್ಲಿಯವರೆಗೆ, ಕೆವಿಐಸಿ 18,000 ಕ್ಕೂ ಹೆಚ್ಚು ವಿದ್ಯುತ್ ಕುಂಬಾರಿಕಾ ಚಕ್ರ ಉಪಕರಣಗಳನ್ನು ವಿತರಿಸಿದ್ದು ಕುಂಬಾರ ಸಮುದಾಯದ 80,000 ಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.