ಕೊರೋನಾ, ಮನೆ ಹೊರಗೆ ಕಾಲಿಡುವವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ತಿಳಿಸುತ್ತಲೇ ಇವೆ. ಅದನ್ನು ಎಷ್ಟು ಮಂದಿ ಮನಸ್ಸಿಟ್ಟು ಅನುಸರಿಸುತ್ತಾರೆ, ಎಷ್ಟು ಮಂದಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಪ್ರಶ್ನೆಗಳೂ ಇವೆ. ಅದೆಲ್ಲವನ್ನೂ ಬದಿಗಿಟ್ಟು, ಮೋದಿ ಅವರ ಕೊರೋನಾ ಕ್ರಮಗಳು ಮತ್ತು ಆತ್ಮನಿರ್ಭರದ ಕನಸಿನ ಜೊತೆಗೆ, ಕೊರೋನಾ ತಡೆಗೆ ಸಹಕಾರಿಯಾಗುವಂತೆ ಮತ್ತು ಕೆಲಸ ಕಾರ್ಯವಿಲ್ಲದೆ ಖಾಲಿ ಬಿದ್ದವರಿಗೆ ಮಾದರಿಯಾಗುವಂತೆ ಕೆಲವರು ನಮ್ಮ ನಡುವೆ ಸ್ವಾವಲಂಬನೆಯ ಜೀವನ ನಡೆಸಲು ಮುಂದಾಗುತ್ತಾರೆ. ಆ ಮೂಲಕ ಇತರರಿಗೂ ಮಾದರಿಯಾಗುತ್ತಾರೆ. ಅದಕ್ಕೊಂದು ಸಾಕ್ಷಿ ಈ ಲೇಖನದಲ್ಲಿದೆ.
ಕೊರೋನಾ ಬಂದ ಬಳಿಕ ಮಾಸ್ಕ್ ಜೀವನದ ಅವಿಭಾಜ್ಯ ಅಂಗವಾಗಿದೆ. ಇದೀಗ ಬೆಣ್ಣೆ ನಗರಿ ದಾವಣಗೆರೆಯಲ್ಲಿ ತಯಾರಾದ ಕಾಟನ್ ಮಾಸ್ಕ್ ಪ್ರಧಾನಿ ಮೋದಿ ಅವರನ್ನು ತಲುಪಿದ್ದು, ಅವರಿಂದ ಪ್ರಶಂಸೆಗೆ ಒಳಗಾಗಿದೆ. ಜೊತೆಗೆ ಈ ಮಾಸ್ಕ್ ತಯಾರಿಸಿದವರಿಗೆ ಪ್ರಧಾನಿ ಮೋದಿ ಅವರು ಶ್ಲಾಘನಾ ಪತ್ರ ಸಹ ಕಳುಹಿಸಿದ್ದಾರೆ.
ಕೊರೋನಾ ಲಾಕ್ಡೌನ್ ಪ್ರಕ್ರಿಯೆಯ ಬಳಿಕ ಮಾಸ್ಕ್ ಎಲ್ಲರ ಅನಿವಾರ್ಯತೆಯಾಗಿತ್ತು. ಕೊರೋನಾ ನಂತರದಲ್ಲಿ ದೇಶ ಆರ್ಥಿಕ ಸಂಕಷ್ಟ ಸಹ ಅನುಭವಿಸುವಂತಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಆತ್ಮನಿರ್ಭರ ಭಾರತದ ಪರಿಕಲ್ಪನೆ, ಸ್ವದೇಶೀ ,ಸ್ವಾವಲಂಬನೆ ಮೊದಲಾದ ಮಹೋನ್ನತ ಕನಸುಗಳನ್ನು ಜನರಲ್ಲಿ ಬಿತ್ತಿದ್ದರು. ಇದಕ್ಕೆ ಪೂರಕವಾಗಿ ದಾವಣಗೆರೆಯ ಕುವೆಂಪು ನಗರದ ಸಾಮಾಜಿಕ ಕಾರ್ಯಕರ್ತ ವಿವೇಕಾನಂದ ಅವರು ಕಾಟನ್ ಬಟ್ಟೆ ಬಳಸಿ ಮಾಸ್ಕ್ ತಯಾರಿಸುವ ಯೋಜನೆಗೆ ಮುಂದಡಿ ಇಟ್ಟರು. ಅವರು, ಅವರ ಕುಟುಂಬಸ್ಥರು, ಗೆಳೆಯರು ಮಾಸ್ಕ್ ಸಿದ್ಧಪಡಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇದೀಗ ಸ್ವತಃ ಪ್ರಧಾನಿ ಕಛೇರಿಯಿಂದಲೂ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ದಾವಣಗೆರೆಗೂ ಕೀರ್ತಿ ತಂದಿದ್ದಾರೆ.
ಆರಂಭದಲ್ಲಿ ಕೇವಲ ದಾವಣಗೆರೆಗಷ್ಟೇ ಎಂಬಂತೆ ಈ ಕಾಟನ್ ಬಟ್ಟೆಯ ಸುಂದರ ಮಾಸ್ಕ್ ಗಳನ್ನು ಸಿದ್ಧ ಮಾಡುತ್ತಿದ್ದರು. ಆ ಬಳಿಕ ಈ ಕುಟುಂಬ ತಾವು ತಯಾರಿಸಿದ ಸ್ವದೇಶೀ, ಸ್ವಾವಲಂಬನೆಯ ಮೂಲಕ ತಯಾರಾದ ಮಾಸ್ಕ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ಮಾಸ್ಕ್ ಗಳನ್ನು ಪ್ರಧಾನಿ ಕಛೇರಿಗೆ ಕಳುಹಿಸಿದ್ದಾರೆ. ಈ ಮಾಸ್ಕ್ಗೆ ಮೆಚ್ಚುಗೆ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಕಛೇರಿಯಿಂದ ಇದೀಗ ಪ್ರಶಂಸಾ ಪತ್ರ ವಿವೇಕಾನಂದ ಅವರ ಮನೆಗೆ ಬಂದು ತಲುಪಿದೆ. ಜೊತೆಗೆ ಈ ಮಾಸ್ಕ್ ಅನ್ನು ಪ್ರಧಾನಿ ಮೋದಿ ಅವರು ಬಳಸಿದ್ದಾರೆ ಎಂಬ ಖುಷಿಯೂ ಈ ಕುಟುಂಬದ್ದಾಗಿದೆ.
ತಮ್ಮ ಸ್ವಾವಲಂಬನೆಯ ಕಾಯಕದ ಮೂಲಕ ವಿವೇಕಾನಂದಅವರ ಕುಟುಂಬ ಪ್ರಧಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿರುವುದು ಒಂದೆಡೆಯಾದರೆ, ಸ್ವದೇಶೀ, ಸ್ವಾವಲಂಬನೆ, ಆತ್ಮ ನಿರ್ಭರತೆಯ ಕಲ್ಪನೆಯನ್ನು ಹೇಗೆಲ್ಲಾ ಸಾಕಾರಗೊಳಿಸಬಹುದು ಎಂಬುದಕ್ಕೆ ಈ ಕುಟುಂಬ ಅದೆಷ್ಟೋ ಜನರಿಗೆ ಮಾದರಿಯಾಗಿದೆ ಎಂದೇ ಹೇಳಬಹುದು. ಯೋಚನಾ ಶಕ್ತಿಯುಳ್ಳವರು ತಮ್ಮ ಬದುಕನ್ನು ಯಾವುದೇ ಸಂದರ್ಭದಲ್ಲಿಯೂ, ತಾವಂದುಕೊಂಡಷ್ಟೇ ಯಶಸ್ವಿಯಾಗಿ ಕಟ್ಟಿಕೊಳ್ಳುತ್ತಾರೆ ಎಂಬುದಕ್ಕೂ ಸಾಕ್ಷಿಯಾಗಿದ್ದಾರೆ ದಾವಣಗೆರೆಯ ಈ ಕುಟುಂಬ.
ವಿರೋಧಿಗಳು ವಿರೋಧಿಸುತ್ತಾರೆ. ಕೈಲಾಗದವರು ಬಾಯಿಗೆ ಬಂದಂತೆ ಒದರುತ್ತಾರೆ. ಆರಂಭದಲ್ಲಿ ಪ್ರಧಾನಿ ಮೋದಿ ಆತ್ಮನಿರ್ಭರ, ಸ್ವಾವಲಂಬನೆ, ಸ್ವದೇಶೀ ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ ಕರೆ ಕೊಟ್ಟಾಗಲೂ ವಿರೋಧಿಗಳು ವಿರೋಧಿಸಿದರು. ಸ್ವಾವಲಂಬನೆಯ ಆಶಯಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಲಾಗದವರು ಬಾಯಿಗೆ ಬಂದಂತೆ ಒದರಿದರು. ಆದರೆ ದೇಶ ಬದಲಾಗಬೇಕಾದರೆ ನಾವು ಬದಲಾಗಬೇಕು. ದೇಶ ಅಭಿವೃದ್ಧಿ ಆಗಬೇಕಾದಲ್ಲಿ ಮೊದಲು ನಾವು ಅಭಿವೃದ್ಧಿಯ ಕನಸಿನ ಜೊತೆಗೆ ಸಾಗಬೇಕು ಎಂದು ಅರಿತವರು ಸಣ್ಣದೋ, ದೊಡ್ಡದೋ ಯಾವುದೇ ಇರಲಿ ಸ್ವಾವಲಂಬನೆಯಡಿ, ಸ್ವ ಉದ್ಯೋಗ ಆರಂಭ ಮಾಡಿದರು. ಆ ಮೂಲಕ ತಮ್ಮ ಬದುಕನ್ನು ತಾವೇ ಕಟ್ಟುವ ಮೂಲಕ ಹೀಗೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದರು. ಆ ಮೂಲಕ ಬದುಕುವ, ಬದುಕಿನ ದಾರಿಯನ್ನು ಕಂಡುಕೊಂಡರು.
ಹೀಗೆ ಬದುಕಿನ ದಾರಿಯನ್ನು ಸ್ವಾವಲಂಬನೆಯ ಮೂಲಕವೇ ಹುಡುಕಿಕೊಂಡ ವಿವೇಕಾನಂದ ಅವರಂತಹ ಅದೆಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಎಲ್ಲವನ್ನೂ ವಿರೋಧಿಸುವವರು ಕೊನೆವರೆಗೂ ವಿರೋಧಿಸುತ್ತಲೇ ಇರುತ್ತಾರೆ. ಈ ವಿರೋಧದ ನಡುವೆಯೂ ಬದುಕು ಕಟ್ಟಿಕೊಳ್ಳುವತ್ತ ಚಿಂತಿಸಿ ಮುಂದಡಿ ಇಡುವವರು ಮಾತ್ರ ಯಾವುದೇ ಸಾಧನೆ ಮಾಡುತ್ತಾರೆ. ಇತರರಿಗೆ ಮತ್ತೊಂದಷ್ಟು ಬದುಕುವ, ಬದುಕಿನ ದಾರಿಯನ್ನು ಹುಡುಕಿಕೊಳ್ಳಲು ಸಹಾಯ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಆತ್ಮನಿರ್ಭರದ ಕನಸು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.